ತೊಗರಿ ಕಣಜ ಕಲಬುರಗಿ ಕ್ಷೇತ್ರದಲ್ಲಿ ಕುತೂಹಲದ ರಾಜಕೀಯ
ಕಲಬುರಗಿ, ಜನವರಿ 22: ಕರ್ನಾಟಕದ ತೊಗರಿಯ ಕಣಜ ಎಂದೇ ಪ್ರಸಿದ್ಧಿ ಪಡೆದ ಕಲಬುರಗಿಯಲ್ಲಿ 2018 ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಗೆ ಖಂಡಿತ ಸುಲಭದ ತುತ್ತಲ್ಲ. 2013 ರ ಫಲಿತಾಂಶವೇ ಈ ಬಾರಿಯೂ ಮರುಕಳಿಸುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಖಂಡಿತ ಇಟ್ಟುಕೊಳ್ಳುವಂತಿಲ್ಲ.
ಇಲ್ಲಿನ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ 7 ಕ್ಷೇತ್ರಗಳನ್ನು ಗೆದ್ದು ಸಾಧನೆ ಮೆರಯಿತೇನೋ ನಿಜ. ಕಾಂಗ್ರೆಸ್ ನ ಗೆಲುವಿಗೆ ನೇರ ಕಾರಣವಾಗಿದ್ದು, ಕೆಜೆಪಿ ಸ್ಥಾಪನೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಬಿಜೆಪಿ, ಕೆಜೆಪಿಯಲ್ಲಿ ಮತ ಒಡೆದು ಹೋಗಿದ್ದು ಕಾಂಗ್ರೆಸ್ ಗೆ ಲಾಭವಾಗಿತ್ತು. ಆದ್ದರಿಂದಲೇ ಈ ಭಾಗದಲ್ಲಿ ಬಿಜೆಪಿ ಕೇವಲ ಒಂದೇ ಒಂದು ಕ್ಷೇತ್ರ ಗೆದ್ದು ಮುಖಭಂಗ ಅನುಭವಿಸಬೇಕಾಯ್ತು.
ಯಾದಗಿರಿ ಸೇರಿದಂತೆ ಅವಿಭಜಿತ ಕಲಬುರಗಿ ಎಂದಿಗೂ ಕಾಂಗ್ರೆಸ್ ನ ಭದ್ರನೆಲೆಯಾಗಿಯೇ ಗುರುತಾಗಿದೆ. ಆದರೆ 1980 ರಲ್ಲಿ ಜನತಾ ಪಕ್ಷದ ಹವಾ ಸೃಷ್ಟಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕೊಂಚ ಕೊಂಚವೇ ಹಿನ್ನಡೆ ಅನುಭವಿಸುವುದಕ್ಕೆ ಆರಂಭಿಸಿತ್ತು.
ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟಿಲ್ ಅವಅರು ಇದೇ ಜಿಲ್ಲೆಯಿಂದ ಬಂದವರು. ನಂತರ ಈ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಧರಂ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಜಿಲ್ಲೆಯಲ್ಲಿ ತಮ್ಮ ಹಿಡಿತ ಸ್ಥಾಪಿಸಿಕೊಂಡರು.

ಧರಂ ಸಿಂಗ್ ಅಗಲಿಕೆ ಮತ್ತು ಕುಟುಂಬ ರಾಜಕಾರಣ!
ಈ ಭಾಗದಲ್ಲಿ ಬಲ ಹೊಂದಿದ್ದ ಧರಂ ಸಿಂಗ್ ಈಗಿಲ್ಲ. ಅವರ ನಂತರ ಈ ಭಾಗದ ಜನರು ಯಾರ ಮೇಲೆ ಒಲವು ತೋರುತ್ತಾರೆ ಎಂಬುದು ಈ ಚುನಾವಣೆಯಿಂದ ತಿಳಿಯುತ್ತದೆ. ಮಾತ್ರವಲ್ಲ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಇದ್ದಕ್ಕಿದ್ದಂತೆಯೇ ಕಾಂಗ್ರೆಸ್ ನ ಪ್ರಾಭವಿ ನಾಯಕರಾಗಿ ಬೆಳೆದಿದ್ದು 'ಕುಟುಂಬ ರಾಜಕಾರಣದ' ಬಗ್ಗೆ ಜನರಲ್ಲಿ ಬೇಸರ ಹುಟ್ಟಿಸಿದ್ದರೂ ಅಚ್ಚರಿಯಿಲ್ಲ. ಇದು ಖರ್ಗೆ ಅವರಿಗೆ ಹಿನ್ನಡೆಯನ್ನೂ ಉಂಟುಮಾಡಬಹುದು.

ಒಟ್ಟಾಗಿದ್ದಾರೆ ಬಿಜೆಪಿ ನಾಯಕರು
2013 ರ ಚುನಾವಣೆಯಲ್ಲಿ ಬಿಜೆಪಿ, ಯಡಿಯೂರಪ್ಪ ಮತ್ತು ಶ್ರೀರಾಮುಲು ಹೀಗೆ ಮೂರು ಬಣಗಳಾಗಿ ಒಡೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಹಾಗಿಲ್ಲ. ಬಿಜೆಪಿ ನಾಯಕರು ಒಟ್ಟಾಗಿದ್ದಾರೆ. ಬಿಜೆಪಿ ಬಗೆಗಿನ ಯಡಿಯೂರಪ್ಪ ವಿಧೇಯತೆ ಈ ಭಾಗದ ಜನರನ್ನು ಸೆಳೆದಿದ್ದರೆ ಅಚ್ಚರಿಯಲ್ಲ. ಅಲ್ಲದೆ ಲಿಂಗಾಯತ ಮತಗಳಯ ಯಡಿಯೂರಪ್ಪ ಜೋಳಿಗೆಯಲ್ಲಿ ಜೋಪಾನವಾಗಿ ಉಳಿಯುತ್ತವೆ.

ಪ್ರಿಯಾಂಕ್ ಖರ್ಗೆ ಕುರಿತು ಅಸಮಧಾನ
ಧರಂ ಸಿಂಗ್ ಮತ್ತು ಖಮ್ರಾಲ್ ಇಸ್ಲಾಮ್ ಇಬ್ಬರು ನಾಯಕರೂ ಈಗಿಲ್ಲ. ಈ ಭಾಗದಲ್ಲಿ ಸಾಕಷ್ಟು ತಮಗಳನ್ನು ಪಡೆದಿದ್ದ ಈ ಇಬ್ಬರ ಅಗಲಿಕೆ ಕಾಂಗ್ರೆಸ್ ಗೆ ದುಬಾರಿಯಾಗುವುದು ಖಂಡಿತ. ಹಾಗೆಯೇ ಕಾಂಗ್ರೆಸ್ ನ ಈ ಭಾಗದ ನಾಯಕರಾದ ಮಾಲಿಕಯ್ಯ ಗುತ್ತೇದಾರ್, ಡಾ.ಮಾಲಕರೆಡ್ಡಿ, ಬಾಬುರಾವ್ ಚಿಂಚನ್ಸೂರ್ ಮುಂತಾದವರಿ ಪ್ರಿಯಾಂಕ್ ಖರ್ಗೆ ಅವರು ತಂದೆಯ ಹೆಸರಿನ ಮೂಲಕ ಬೆಳೆಯುತ್ತಿರುವ ವಿರುದ್ಧ ಬಂಡಾಯವೆದ್ದಿರುವುದರಿಂದ ಇಲ್ಲಿನ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ. ಈ ಲಾಭವನ್ನು ಬಿಜೆಪಿ ಪಡೆಯಬಹುದು.

ಬಿಸಲಿ ನಾಡಲ್ಲಿ ಬದಲಾದ ರಾಜಕೀಯ ಚಿತ್ರಣ
ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ನಿಂದ ಹೊರಹೋದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಬಗ್ಗೆ ಈ ಭಾಗದ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದೂ ಕಾಂಗ್ರೆಸ್ ಗೆ ಬಿಸಿತುಪ್ಪವಾಗಬಹುದು. ಬಿಸಿಲ ನಾಡಾದ ಕಲಬುರಗಿಯಲ್ಲಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮತದಾರ ಯಾರನ್ನು ಗೆಲ್ಲಿಸುತ್ತಾನೆ ಎಂಬುದು ಅತ್ಯಂತ ಕುತೂಹಲದ ಪ್ರಶ್ನೆಯಾಗಿ ಉಳಿದುಕೊಂದಿದೆ.












Click it and Unblock the Notifications