ತೊಗರಿ ಕಣಜ ಕಲಬುರಗಿ ಕ್ಷೇತ್ರದಲ್ಲಿ ಕುತೂಹಲದ ರಾಜಕೀಯ
ಕಲಬುರಗಿ, ಜನವರಿ 22: ಕರ್ನಾಟಕದ ತೊಗರಿಯ ಕಣಜ ಎಂದೇ ಪ್ರಸಿದ್ಧಿ ಪಡೆದ ಕಲಬುರಗಿಯಲ್ಲಿ 2018 ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಗೆ ಖಂಡಿತ ಸುಲಭದ ತುತ್ತಲ್ಲ. 2013 ರ ಫಲಿತಾಂಶವೇ ಈ ಬಾರಿಯೂ ಮರುಕಳಿಸುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಖಂಡಿತ ಇಟ್ಟುಕೊಳ್ಳುವಂತಿಲ್ಲ.
ಇಲ್ಲಿನ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ 7 ಕ್ಷೇತ್ರಗಳನ್ನು ಗೆದ್ದು ಸಾಧನೆ ಮೆರಯಿತೇನೋ ನಿಜ. ಕಾಂಗ್ರೆಸ್ ನ ಗೆಲುವಿಗೆ ನೇರ ಕಾರಣವಾಗಿದ್ದು, ಕೆಜೆಪಿ ಸ್ಥಾಪನೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಬಿಜೆಪಿ, ಕೆಜೆಪಿಯಲ್ಲಿ ಮತ ಒಡೆದು ಹೋಗಿದ್ದು ಕಾಂಗ್ರೆಸ್ ಗೆ ಲಾಭವಾಗಿತ್ತು. ಆದ್ದರಿಂದಲೇ ಈ ಭಾಗದಲ್ಲಿ ಬಿಜೆಪಿ ಕೇವಲ ಒಂದೇ ಒಂದು ಕ್ಷೇತ್ರ ಗೆದ್ದು ಮುಖಭಂಗ ಅನುಭವಿಸಬೇಕಾಯ್ತು.
ಹೈದರಾಬಾದ್-ಕರ್ನಾಟಕ ಭಾಗದಿಂದ ರಾಹುಲ್ ರಾಜ್ಯ ಪ್ರವಾಸ
ಯಾದಗಿರಿ ಸೇರಿದಂತೆ ಅವಿಭಜಿತ ಕಲಬುರಗಿ ಎಂದಿಗೂ ಕಾಂಗ್ರೆಸ್ ನ ಭದ್ರನೆಲೆಯಾಗಿಯೇ ಗುರುತಾಗಿದೆ. ಆದರೆ 1980 ರಲ್ಲಿ ಜನತಾ ಪಕ್ಷದ ಹವಾ ಸೃಷ್ಟಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕೊಂಚ ಕೊಂಚವೇ ಹಿನ್ನಡೆ ಅನುಭವಿಸುವುದಕ್ಕೆ ಆರಂಭಿಸಿತ್ತು.
ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟಿಲ್ ಅವಅರು ಇದೇ ಜಿಲ್ಲೆಯಿಂದ ಬಂದವರು. ನಂತರ ಈ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಧರಂ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಜಿಲ್ಲೆಯಲ್ಲಿ ತಮ್ಮ ಹಿಡಿತ ಸ್ಥಾಪಿಸಿಕೊಂಡರು.
ಧರಂ ಸಿಂಗ್ ಅಗಲಿಕೆ ಮತ್ತು ಕುಟುಂಬ ರಾಜಕಾರಣ!
ಈ ಭಾಗದಲ್ಲಿ ಬಲ ಹೊಂದಿದ್ದ ಧರಂ ಸಿಂಗ್ ಈಗಿಲ್ಲ. ಅವರ ನಂತರ ಈ ಭಾಗದ ಜನರು ಯಾರ ಮೇಲೆ ಒಲವು ತೋರುತ್ತಾರೆ ಎಂಬುದು ಈ ಚುನಾವಣೆಯಿಂದ ತಿಳಿಯುತ್ತದೆ. ಮಾತ್ರವಲ್ಲ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಇದ್ದಕ್ಕಿದ್ದಂತೆಯೇ ಕಾಂಗ್ರೆಸ್ ನ ಪ್ರಾಭವಿ ನಾಯಕರಾಗಿ ಬೆಳೆದಿದ್ದು 'ಕುಟುಂಬ ರಾಜಕಾರಣದ' ಬಗ್ಗೆ ಜನರಲ್ಲಿ ಬೇಸರ ಹುಟ್ಟಿಸಿದ್ದರೂ ಅಚ್ಚರಿಯಿಲ್ಲ. ಇದು ಖರ್ಗೆ ಅವರಿಗೆ ಹಿನ್ನಡೆಯನ್ನೂ ಉಂಟುಮಾಡಬಹುದು.
ಒಟ್ಟಾಗಿದ್ದಾರೆ ಬಿಜೆಪಿ ನಾಯಕರು
2013 ರ ಚುನಾವಣೆಯಲ್ಲಿ ಬಿಜೆಪಿ, ಯಡಿಯೂರಪ್ಪ ಮತ್ತು ಶ್ರೀರಾಮುಲು ಹೀಗೆ ಮೂರು ಬಣಗಳಾಗಿ ಒಡೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಹಾಗಿಲ್ಲ. ಬಿಜೆಪಿ ನಾಯಕರು ಒಟ್ಟಾಗಿದ್ದಾರೆ. ಬಿಜೆಪಿ ಬಗೆಗಿನ ಯಡಿಯೂರಪ್ಪ ವಿಧೇಯತೆ ಈ ಭಾಗದ ಜನರನ್ನು ಸೆಳೆದಿದ್ದರೆ ಅಚ್ಚರಿಯಲ್ಲ. ಅಲ್ಲದೆ ಲಿಂಗಾಯತ ಮತಗಳಯ ಯಡಿಯೂರಪ್ಪ ಜೋಳಿಗೆಯಲ್ಲಿ ಜೋಪಾನವಾಗಿ ಉಳಿಯುತ್ತವೆ.
ಪ್ರಿಯಾಂಕ್ ಖರ್ಗೆ ಕುರಿತು ಅಸಮಧಾನ
ಧರಂ ಸಿಂಗ್ ಮತ್ತು ಖಮ್ರಾಲ್ ಇಸ್ಲಾಮ್ ಇಬ್ಬರು ನಾಯಕರೂ ಈಗಿಲ್ಲ. ಈ ಭಾಗದಲ್ಲಿ ಸಾಕಷ್ಟು ತಮಗಳನ್ನು ಪಡೆದಿದ್ದ ಈ ಇಬ್ಬರ ಅಗಲಿಕೆ ಕಾಂಗ್ರೆಸ್ ಗೆ ದುಬಾರಿಯಾಗುವುದು ಖಂಡಿತ. ಹಾಗೆಯೇ ಕಾಂಗ್ರೆಸ್ ನ ಈ ಭಾಗದ ನಾಯಕರಾದ ಮಾಲಿಕಯ್ಯ ಗುತ್ತೇದಾರ್, ಡಾ.ಮಾಲಕರೆಡ್ಡಿ, ಬಾಬುರಾವ್ ಚಿಂಚನ್ಸೂರ್ ಮುಂತಾದವರಿ ಪ್ರಿಯಾಂಕ್ ಖರ್ಗೆ ಅವರು ತಂದೆಯ ಹೆಸರಿನ ಮೂಲಕ ಬೆಳೆಯುತ್ತಿರುವ ವಿರುದ್ಧ ಬಂಡಾಯವೆದ್ದಿರುವುದರಿಂದ ಇಲ್ಲಿನ ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ. ಈ ಲಾಭವನ್ನು ಬಿಜೆಪಿ ಪಡೆಯಬಹುದು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ ಪ್ರಯೋಗಿಸಿದ ಕಾಂಗ್ರೆಸ್ ಶಾಸಕ
ಬಿಸಲಿ ನಾಡಲ್ಲಿ ಬದಲಾದ ರಾಜಕೀಯ ಚಿತ್ರಣ
ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಂಡಾಯವೆದ್ದು ಕಾಂಗ್ರೆಸ್ ನಿಂದ ಹೊರಹೋದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಬಗ್ಗೆ ಈ ಭಾಗದ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದೂ ಕಾಂಗ್ರೆಸ್ ಗೆ ಬಿಸಿತುಪ್ಪವಾಗಬಹುದು. ಬಿಸಿಲ ನಾಡಾದ ಕಲಬುರಗಿಯಲ್ಲಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದ್ದು, ಮತದಾರ ಯಾರನ್ನು ಗೆಲ್ಲಿಸುತ್ತಾನೆ ಎಂಬುದು ಅತ್ಯಂತ ಕುತೂಹಲದ ಪ್ರಶ್ನೆಯಾಗಿ ಉಳಿದುಕೊಂದಿದೆ.