ಶ್ರೀರಾಮುಲು ಸಂಡೂರಿಗೆ, ನಾಗೇಂದ್ರ ಕೂಡ್ಲಿಗಿಗೆ, ಬಳ್ಳಾರಿಗೆ ಹೊಸಬರು!
ಬಳ್ಳಾರಿ, ಮಾರ್ಚ್, 14: ಬಳ್ಳಾರಿ ಜಿಲ್ಲೆಯ ಬಿಜೆಪಿಯೊಳಗಿನ ರಾಜಕೀಯ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಸಂಸದ ಬಿ. ಶ್ರೀರಾಮುಲು ಅವರನ್ನು ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರು ಕಾಂಗ್ರೆಸ್ ಸೇರಿ ಕೂಡ್ಲಿಗಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಅಂತಿಮವಾಗಿ ನಿರ್ಧರಿಸಿದ್ದಾರೆ. ರಾಜ್ಯದಲ್ಲೇ ವಿಶೇಷವಾಗಿ ಗುರುತಿಸಲ್ಪಡುವ ಬಳ್ಳಾರಿ ಜಿಲ್ಲೆಯ ರಾಜಕೀಯದಲ್ಲಿ ಎಲ್ಲವೂ ಅನಿಶ್ಚಿತ. ಬಿಜೆಪಿಯು ವಾಲ್ಮೀಕಿ ಸಮುದಾಯದ ಮುಖಂಡ ಬಿ. ಶ್ರೀರಾಮುಲು ಅವರ ಸಂಸತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಬಿ. ಶ್ರೀರಾಮುಲು ಅವರ ಸ್ಪರ್ಧೆಯಿಂದ ವಿಜಯನಗರ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ.
ಅಲ್ಲದೇ, ಬಿಜೆಪಿಯನ್ನು ತೊರೆದಿರುವ ಬಿ. ನಾಗೇಂದ್ರ ಮತ್ತು ಬಿ.ಎಸ್. ಆನಂದಸಿಂಗ್ ಅವರ ಮೇಲೆ ಪ್ರತೀಕಾರ ತೆಗೆದುಕೊಳ್ಳಲೂ ನೆರವಾಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು. ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿಕ್ಕಾಗಿಯೇ ಕಾಂಗ್ರೆಸ್ ಸೇರ್ಪಡೆ ಆಗಿದ್ದ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಅವರನ್ನು ಕೂಡ್ಲಿಗಿ ಕ್ಷೇತ್ರದಲ್ಲೇ ಮುಂದುವರೆಸಲು ಕಾಂಗ್ರೆಸ್ ಹೈಕಮಾಂಡ್ ಅಂತಿಮ ಆದೇಶ ನೀಡಿದೆ. ಬಿ. ನಾಗೇಂದ್ರ ಅವರು, ಕಾಂಗ್ರೆಸ್ ಸೇರಿದ ಮೇಲೆ ಪಕ್ಷದಲ್ಲಿ ಹಿರಿಯರ ಮಾತುಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಒಲ್ಲದ ಮನಸ್ಸಿನಿಂದಲೇ ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧಿಸಲು 'ತಲೆಯಾಡಿ'ಸಿದ್ದಾರೆ. ದೆಹಲಿ - ಬೆಂಗಳೂರು ತಿರುಗಾಡುತ್ತಿರುವ ಈ ಶಾಸಕ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಅವರ ಹೊರತಾಗಿ ಪಕ್ಷದ ಹೈಕಮಾಂಡ್ ಸಂಪರ್ಕಕ್ಕಾಗಿ ಶತಪ್ರಯತ್ನ ಪಡುತ್ತಿದ್ದಾರೆ. ಆದರೆ, ಪಕ್ಷದ ಹೈಕಮಾಂಡ್ ನೀನು ಕೂಡ್ಲಿಗಿಯಿಂದಲೇ ಸ್ಪರ್ಧಿಸು' ಎಂದು ಫರ್ಮಾನು ಹೊರಡಿಸಿದೆ.

ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಗಾಗಿ ಸಾಕಷ್ಟು ಶ್ರಮಪಡುತ್ತಿರುವ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ತಮ್ಮ ಆಪ್ತ ಮಾರ್ವಾಡಿ ಮುಖಂಡರು ಮತ್ತು ಆಪ್ತರ ಜೊತೆ ರಾಜಸ್ಥಾನಕ್ಕೆ ಪ್ರವಾಸ ಕೈಗೊಂಡಿದ್ದಾರೆ. ರಾಜಸ್ಥಾನದ ಬಿಜೆಪಿ ಶಕ್ತಿಗಳನ್ನು ಸಂಪರ್ಕ ಮಾಡಿ, ದೇವರ ದರ್ಶನ ಪಡೆಯುತ್ತಿದ್ದಾರೆ.
ಬಿಜೆಪಿ ಟಿಕೇಟ್ ಗಾಗಿ ಪ್ರಯತ್ನಿಸುತ್ತಿರುವ ಜಿ. ಸೋಮಶೇಖರರೆಡ್ಡಿ ಅವರು ಒಂದು ಹಂತದಲ್ಲಿ ಡಾ. ಬಿ.ಕೆ. ಸುಂದರ್ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋದ ಉದಾಹರಣೆಗಳೂ ಇವೆ ಎನ್ನಲಾಗಿದೆ. ಆದರೆ, ಡಾ. ಬಿ.ಕೆ. ಸುಂದರ್ ಅವರು ಬಳ್ಳಾರಿಯಲ್ಲಿ ಇದ್ದುಕೊಂಡೇ, ಆರ್ಎಸ್ಎಸ್, ವಿಎಚ್ ಪಿ ಮತ್ತು ಭಜರಂಗದಳದ ಸಂಪೂರ್ಣ ಬೆಂಬಲ ಪಡೆದಿದ್ದಾರೆ. ಈ ಮಧ್ಯೆ, ಜಿ. ಸೋಮಶೇಖರರೆಡ್ಡಿ - ಡಾ. ಬಿ.ಕೆ. ಸುಂದರ್ ಹೊರತಾಗಿ ಕಾಂಗ್ರೆಸ್ ಪಕ್ಷದ ಮುಖಂಡ, ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಸೆಳೆದು, ಅವರನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಮುಖಂಡ ಬಿಜೆಪಿಯಿಂದ ಸ್ಪರ್ಧಿಸಿದಲ್ಲಿ ಬಳ್ಳಾರಿ ಗ್ರಾಮೀಣ, ಸಿರುಗುಪ್ಪ, ಕಂಪ್ಲಿ ವಿಧಾನಸಭಾ ಕ್ಷೇತ್ರಗಳ ಗೆಲುವಿನಲ್ಲಿ ಅನುಕೂಲ ಆಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದು.












Click it and Unblock the Notifications