Karnataka Election: ನಾಳೆ ಬಹಿರಂಗ ಪ್ರಚಾರ ಅಂತ್ಯ: ಮನೆ ಮನೆಗೆ ತೆರಳಿ ಪ್ರಚಾರ; ಮದ್ಯ ಮಾರಾಟ ನಿಷೇಧ
ಕರ್ನಾಟಕ ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಭಾನುವಾರ ಎಲ್ಲಾ ಪಕ್ಷಗಳ ನಾಯಕರು ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶ, ರೋಡ್ ಶೋ ನಡೆಸಿದರು. ಸೋಮವಾರ ಸಂಜೆ 5 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.
ನಿಯಮದ ಪ್ರಕಾರ ಮತದಾನಕ್ಕೆ 48 ಗಂಟೆಗಳ ಮೊದಲ ಚುನಾವಣಾ ಪ್ರಚಾರ ಕೊನೆಗೊಳ್ಳುತ್ತದೆ. ಮೇ 8ರಂದು ಸಂಜೆ 5 ಗಂಟೆಯ ನಂತರ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಸೋಮವಾರದಿಂದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಸೋಮವಾರ ಸಂಜೆ 5 ರಿಂದ ಮೇ 10 ರಂದು ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ನಂತರ ಮೇ 13ರಂದು ಮತ ಎಣಿಕೆ ದಿನವೂ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೂ ಮದ್ಯ ಮಾರಾಟ ಇರುವುದಿಲ್ಲ.

ಬಹಿರಂಗ ಪ್ರಚಾರ ಮುಗಿದ ಬಳಿಕ ಶೂನ್ಯ ಅವಧಿ ಎಂದು ಚುನಾವಣಾ ಆಯೋಗ ಪರಿಗಣಿಸುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳನ್ನು ಬಿಟ್ಟು ಉಳಿದ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯಲು ಅನುಮತಿ ಇರುವುದಿಲ್ಲ, ಮಂಗಳವಾರ ಅಭ್ಯರ್ಥಿಗಳು ಸಂಜೆ 6 ಗಂಟೆಯೊಳಗೆ ಪ್ರಚಾರ ಮುಗಿಸಬೇಕಾಗುತ್ತದೆ.
ಬಹಿರಂಗ ಪ್ರಚಾರ ಮುಕ್ತಾಯವಾದ ತಕ್ಷಣವೇ ಸ್ಟಾರ್ ಪ್ರಚಾರಕರು, ನಾಯಕರು ಕ್ಷೇತ್ರದಿಂದ ಹೊರಹೋಗಬೇಕಾಗುತ್ತದೆ. ಕ್ಷೇತ್ರಕ್ಕೆ ಸಂಬಂಧಪಡದ ಯಾವುದೇ ವ್ಯಕ್ತಿಗಳು ಕಂಡು ಬಂದರು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಂಜೆಯ ನಂತರ ಧ್ವನಿವರ್ಧಕ ಬಳಸಿ ಪ್ರಚಾರ ಮಾಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಕೊನೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಕಸರತ್ತು
ಸೋಮವಾರ ಬಹಿರಂಗ ಪ್ರಚಾರ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆ ಕ್ಷಣದಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಮತ್ತು ಭಾನುವಾರ ಎರಡು ದಿನ ಬೆಂಗಳೂರಿನಲ್ಲಿ ರೋಡ್ ಶೋ ಮಾಡಿದರು.
ಕಾಂಗ್ರೆಸ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕೂಡ ಭಾನುವಾರ ಸಂಜೆ ರೋಡ್ ಶೋ ಮಾಡುವ ಮೂಲಕ ಮತದಾರರನ್ನು ಸೆಳೆಯಲಿದ್ದಾರೆ. ಜೆಡಿಎಸ್ ಕೂಡ ಮತದಾರರನ್ನು ಸೆಳೆಯಲು ಸಮಾವೇಶಗಳನ್ನು ಮಾಡಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications