ಕನ್ನಡಿಗರೇ ಉದ್ಯೋಗ ಬೇಕೆ? ಕಸಾಪ ವೆಬ್ ತಾಣಕ್ಕೆ ಭೇಟಿ ಕೊಡಿ
ಬೆಂಗಳೂರು, ಜೂನ್ 19: ಕನ್ನಡಿಗರಿಗೆ ಉದ್ಯೋಗ ನೀಡಲು ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ. ಕಸಾಪ ವೆಬ್ ಸೈಟ್ ನಲ್ಲಿ ಇದಕ್ಕಾಗಿ ಒಂದು ಅರ್ಜಿ ನಮೂನೆ ನೀಡಲಾಗಿದೆ.
ಇಲ್ಲಿ ವಿವರ ಸಲ್ಲಿಸಿದ ಆಕಾಂಕ್ಷಿಗಳಿಗೂ ಉದ್ಯೋಗದಾತ ಸಂಸ್ಥೆಗಳಿಗೂ ನಡುವೆ ಕಸಾಪ ಸಂಪರ್ಕ ಸೇತುವೆಯಾಗಲಿದೆ. ಈ ವ್ಯವಸ್ಥೆಯಿಂದ ಸುಮಾರು 125ಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸಿದೆ ಎಂದು ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ಅಧ್ಯಕ್ಷರ ಕನಸು : ಡಾ. ಮನು ಬಳಿಗಾರ್ ಅವರು ಕಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ ಹೀಗೊಂದು ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಈಗ ಕಸಾಪದ ಅಧಿಕೃತ ವೆಬ್ ಸೈಟ್ ನಲ್ಲಿ ಉದ್ಯೋಗ ಒದಗಿಸುವ ವೇದಿಕೆ ನಿರ್ಮಾಣವಾಗಿದೆ. ವೆಬ್ ಸೈಟ್ ನ ಬಲಗಡೆಯಲ್ಲಿ 'ಉದ್ಯೋಗ ಅರ್ಜಿ' ಎಂಬ ವಿಭಾಗದಲ್ಲಿ ಕ್ಲಿಕ್ ಮಾಡಿ ಅರ್ಜಿ ತುಂಬಿ, ಸ್ವವಿವರವನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಕಳಿಸಿದ ಮೇಲೆ ?: ಆಕಾಂಕ್ಷಿಗಳು ಸಲ್ಲಿಸಿದ ವಿವರಗಳನ್ನು ಸೂಕ್ತವಾದ ಸಂಸ್ಥೆಗಳಿಗೆ ಕಳಿಸಲಾಗುವುದು. ನಂತರ ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯಬಹುದಾಗಿದೆ. ದುಬೈನಲ್ಲಿರುವ ತಿರು ಶ್ರೀಧರ್ ಎಂಬುವರು ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ರಾಜ್ಯದ ಗ್ರೂಪ್ 'ಸಿ' ಹಾಗೂ 'ಡಿ' ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆ. ಇನ್ನೂ ಅನೇಕ ಕಡೆ ಉದ್ಯೋಗ ಮೀಸಲಾತಿ ಇದ್ದರೂ ಕನ್ನಡಿಗರಿಗೆ ಮಾಹಿತಿ ಕೊರತೆ ಉಂಟಾಗಿದೆ ಎಂದು ಡಾ. ಮನು ಬಳಿಗಾರ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿಕೊಡಬೇಕು" ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಮಹತ್ವದ ಯೋಜನೆಗಳಲ್ಲೊಂದಾಗಿದೆ.
ಈ ನಿಟ್ಟಿನಲ್ಲಿ 'ಸಿ' ಮತ್ತು 'ಡಿ' ವಿಭಾಗದ ಉದ್ಯೋಗಗಳ ಆಕಾಂಕ್ಷಿ ಕನ್ನಡಿಗರಿಂದ ವಿವರಗಳನ್ನು ಪಡೆದು ಆ ವಿವರಗಳನ್ನು ಕನ್ನಡ ನಾಡಿನಲ್ಲಿರುವ ಎಲ್ಲಾ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ತಲುಪಿಸುವ ವ್ಯವಸ್ಥೆಗೆ ಈ ತಾಣದಲ್ಲಿ ಚಾಲನೆಯನ್ನು ನೀಡಲಾಗಿದೆ. 'ಕನ್ನಡವು ಅನ್ನದ ಭಾಷೆಯಾಗಬೇಕು' ಎಂಬ ನಾಡಿನ ಹಿರಿಯರ ಆಶಯದಂತೆ ರೂಪಿಸಲಾಗಿರುವ ಈ ಯೋಜನೆಯನ್ನು, ಉದ್ಯೋಗಾಂಕ್ಷಿ ಕನ್ನಡ ಯುವಜನತೆ ಸದುಪಯೋಗಪಡಿಸಿಕೊಳ್ಳುತ್ತಾರೆಂಬ ಆಶಯ ನಮ್ಮದು. -ಮನು ಬಳಿಗಾರ್, ಕಸಾಪ ಅಧ್ಯಕ್ಷ. ಕಸಾಪದ ಅಧಿಕೃತ ವೆಬ್ ಸೈಟ್ ಲಿಂಕ್











Click it and Unblock the Notifications