ಬಿಜೆಪಿಯಿಂದಲೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾನೂನು ಜಾರಿ: ಸಿಎಂ
ಬೆಂಗಳೂರು, ನವೆಂಬರ್ 18: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಎಂಬ ಮಹತ್ತರ ಉದ್ದೇಶದಿಂದ ಕಳೆದ ಅಧಿವೇಶದಲ್ಲಿ ಮಂಡಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲೇ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಆವರಣದಲ್ಲಿ ಗುರುವಾ ಕನ್ನಡ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು, ವಿಧೇಯಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಬಹಳ ಮಹತ್ವದ್ದು. ವಿಧೇಯಕ ಸಮಗ್ರ ಚರ್ಚೆಯಾಗಬೇಕು. ಎಲ್ಲರ ಭಾವನೆಗಳನ್ನು ಗೌರವಿಸಿ, ಎಲ್ಲರ ಅಭಿಪ್ರಾಯಗಳನ್ನು ಸ್ವೀಕರಿಸಿ ಕಾನೂನು ಜಾರಿಗೆ ತರಲಲಾಗುವುದು ಎಂದು ತಿಳಿಸಿದರು.
ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಂಡು ಶಕ್ತಿಯುತವಾಗಿ ಮುನ್ನುಗ್ಗಬೇಕು. ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆ ಕನ್ನಡದಲ್ಲೇ ನೀಡುವ ಮೂಲಕ ಅರ್ಥಪೂರ್ಣವಾಗಿ ಭಾಷೆ ಬೆಳೆಸಬೇಕು. . ನಾಗರಿಕತೆಯೊಂದಿಗೆ ನಮ್ಮ ಸಂಸ್ಕೃತಿಯನ್ನೂ ಬೆಳೆಸಬೇಕು ಎಂದರು.
ಮಾದರಿಯಾಗಲಿದೆ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ಭುತವಾಗಿ ಸಂಘಟಿಸಲಾಗುವುದು. ಇದು ಎಲ್ಲಾ ಕಾಲಕ್ಕೂ ಮಾದರಿಯಾಗುವಂತೆ ನಡೆಯಲಿದೆ. ಕನ್ನಡಿಗರಿಗೆ ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಿದ ತಾಯಿ ಭುವನೇಶ್ವರಿಯ ಪುತ್ಥಳಿ ಸ್ಥಾಪನೆ ಆಗಿರಲಿಲ್ಲ ಎನ್ನುವುದೇ ಬೇಸರದ ಇತ್ತು. ಅದು ಈಗ ಡಾ.ಮಹೇಶ ಜೋಶಿ ಅವರ ಕಾದಲ್ಲಿ ನೆರವೇರಿದೆ. ಕನ್ನಡ ಹರಿದು ಹಂಚಿ ಹೋದಾಗ ಕನ್ನಡವನ್ನು ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಚಳವಳಿ ಮಾಡಿ ಒಂದುಗೂಡಿಸದಿದ್ದರೆ ನಾವೆಲ್ಲಾ ಒಂದಾಗುತ್ತಿರಲಿಲ್ಲ. ನಮ್ಮ ಇತಿಹಾಸವನ್ನು ಅಭಿಮಾನದಿಂದ ಕಂಡಾಗ ಮಾತ್ರ ಹೊರಗಿಂದ ಬಂದವರು ನಮ್ಮ ಸಂಸ್ಕೃತಿ, ಭಾಷೆಯನ್ನು ಗೌರವಿಸುತ್ತಾರೆ ಎಂದು ಹೇಳಿದರು.
6.25ಅಡಿ ಎತ್ತರದ 'ತಾಯಿ ಭುನೇಶ್ವರಿ' ಪುತ್ಥಳಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಮಾತನಾಡಿ, ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನ ಹೊಂದಿರುವ ಅಪರೂಪದ ಭಾಷೆ ಕನ್ನಡ. 'ಕನ್ನಡದ ಕುಲದೇವತೆ ಭುವನೇಶ್ವರಿ' ಪುತ್ಥಳಿಯನ್ನು ಪರಿಷತ್ತಿನ ಆವರಣದಲ್ಲಿ ಸ್ಥಾಪಿಸಿ, ಅನಾವರಣಗೊಳಿಸಿದ್ದು ಸಮಸ್ತ ಕನ್ನಡಿಗರ ಹೆಮ್ಮೆಗೆ ಕಾರಣವಾಗಿದೆ. ಈ ಪುತ್ಥಳಿಯು 6.25ಅಡಿ ಎತ್ತರವಿದೆ. ಪ್ರಭಾವಳಿ, ಚತುರ್ಭುಜ, ಪದ್ಮಪೀಠಾಸೀನ, ಪಾಶಾಂಕುಶ, ಅಭಯವರದ ಮುದ್ರೆಯುಳ್ಳ, ಕನ್ನಡ ಧ್ವಜವನ್ನು ಬಲಗೈಯಲ್ಲಿ ಹಿಡಿದಿರುವ ಭುವನೇಶ್ವರಿಯ ಚಿತ್ತಾಕರ್ಷಕ ಪುತ್ಥಳಿ ಕನ್ನಡಿಗರಲ್ಲಿ ಭಕ್ತಿ-ಭಾವವನ್ನು ಉದ್ದೀಪನಗೊಳಿಸುತ್ತದೆ ಎಂದು ವಿವರಿಸಿದರು.
'ತಾಯಿ ಭುವನೇಶ್ವರಿ ದೇವಿ ರಥವನ್ನು ಏರಿಹಳು, ದಾರಿ ಬಿಡಿ ದಾರಿ ಬಿಡಿ ಅಡ್ಡ ಬಾರದಿರಿ'ಎಂದು ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರು ಹಾಡಿ ಹೊಗಳಿದ್ದರು. ಮೈಸೂರು ಅರಸರು ಭುವನೇಶ್ವರಿಯ ಆರಾಧಕರಾಗಿದ್ದರು. ಅಂದಿನ ವಿದ್ವಾಂಸರಾದ ಮುತ್ತಯ್ಯ ಭಾಗವತರ್ ಅವರು 'ಭುವನೇಶ್ವರಿಯ ನೆನೆ ಮಾನಸವೇ, ಭವ ಬಂಧನಗಳ ಭೀತಿಯ ಬಿಡುವೆ' ಎಂಬ ಕೀರ್ತನೆ ರಚಿಸಿದ್ದರು. ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಭುವನೇಶ್ವರಿಯನ್ನು ಆರಾಧಿಸಿ ಸ್ಫೂರ್ತಿ ಪಡೆದಿದ್ದರು ಎಂದರು.
ಎಲ್ಲ ಪಂಥ, ಧರ್ಮದವರಿಗೆ ಭುವನೇಶ್ವರಿ ಕುಲದೇವತೆ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ 108 ವರ್ಷಗಳ ಸಮಗ್ರ ಇತಿಹಾಸದಲ್ಲಿ ಇಂದು ಮರೆಯಲಾಗದ ಐತಿಹಾಸಿಕ ದಿನ. ಕನ್ನಡಿಗರು ನಾಡಿನ ಒಳಗೆ-ನಾಡಿನ ಹೊರಗೆ ಎಲ್ಲೇ ಇದ್ದರೂ ಕನ್ನಡಿಗರು ಯಾವ ಧರ್ಮದವರಾಗಿರಲಿ ಯಾವುದೇ ಪಂಥದವರಾಗಿರಲಿ ಅವರಿಗೆ ತಾಯಿ ಭುವನೇಶ್ವರಿಯೇ ಕುಲದೇವತೆ. ಆಗಿನ ಕನ್ನಡ ಸಾಹಿತ್ಯ ಪರಿಷತ್ತಿಗೂ ಈಗಿನದ್ದಕ್ಕೂ ಬಹಳ ವ್ಯತ್ಯಾಸವಿದೆ. ಈಗ ಇಲ್ಲಿನ ವಾತಾವರಣವೇ ಕನ್ನಡ ಮಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಅನ್ಯಭಾಷೆಗಳು ಕನ್ನಡದಲ್ಲಿ ಸಮೀಕರಣಗೊಂಡಿವೆ
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಷೆ ಬೆಳೆಯುವಾಗ ಅನ್ಯ ಭಾಷೆಗಳು ಕನ್ನಡದಲ್ಲಿ ಸೇರಿ ಸಮೀಕರಣಗೊಂಡಿದೆ. ಅದನ್ನು ಬಳಸುವುದು ತಪ್ಪು ಅಂತ ಅಲ್ಲ. ಆದರೆ ಆದರೆ ಕನ್ನಡ ಬೆಳೆಸಬೇಕು ಅದಕ್ಕು ಮೊದಲು ಹೆಚ್ಚು ಬಳಸಬೇಕು. ಕನ್ನಡವನ್ನು ಬೆಳೆಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನದ್ದು ಮಾತ್ರವಲ್ಲ ಸಮಸ್ತ ಕನ್ನಡಿಗರ ಕೆಲಸವಾಗಬೇಕು. ಸಾಕಷ್ಟು ಉತ್ತಮ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಹೀಗೆ ಮುಂದುವರಿಯಲಿದ ಎಂದು ಆಶಿಸಿದರು.
ಈ ವೇಳೆ ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕ ಸಂಧ್ಯಾ ಎಸ್. ಪೈ, ಕ್ರೆಡಲ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ. ಹಿರೇಮಠ, ಪರಿಷತ್ತಿನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.