ಕೋಟಿ ಕಂಠ ಗಾಯನ; ಕನ್ನಡ ಚಿತ್ರರಂಗ ದೂರ, ಸರ್ಕಾರದ ಬೇಸರ
ಬೆಂಗಳೂರು, ಅಕ್ಟೋಬರ್ 28: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶುಕ್ರವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಡೆದ 'ಕೋಟಿ ಕಂಠ ಗಾಯನ' ಸಮಾರಂಭದಲ್ಲಿ ಕನ್ನಡ ಚಿತ್ರರಂಗ ದೂರ ಉಳಿದಿರುವುದಕ್ಕೆ ರಾಜ್ಯ ಸರ್ಕಾರ ಬೇಸರ ವ್ಯಕ್ತಪಡಿಸಿದೆ.
ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಅವರ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಇಂದು ಇಲಾಖೆ ವತಿಯಿಂದ ನಡೆದ 'ಕೋಟಿ ಕಂಠ ಗಾಯನ' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು ಗೈರಾಗಿದ್ದರು. ಕನ್ನಡ ಕಂಪು ಪಸರಿಸುವ ಅದ್ಧೂರಿ, ಸಂಭ್ರಮದ ಸಮಾರಂಭಕ್ಕೆ ಕನ್ನಡ ಚಲನಚಿತ್ರ ರಂಗ ಮಾತ್ರ ಭಾಗಿಯಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.
ನಗರದ ಕಂಠೀರವ ಕ್ರೀಡಾಂಗಣ, ವಿಧಾನಸೌಧ ಮುಂದೆ ಸೇರಿದಂತೆ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ನನ್ನ ನಾಡು-ನನ್ನ ಹಾಡು 'ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಲಾಯಿತು. ಮುಖ್ಯಮಂತ್ರಿಗಳೇ ಸಮಾರಂಭಕ್ಕೆ ಚಾಲನೆ ನೀಡಿದ್ದು, ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. 1.50 ಕೋಟಿ ಜನರು ಕನ್ನಡದ ಹಾಡು ಹಾಡಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಆರು ಕನ್ನಡದ ಹಾಡುಗಳಿಗೆ ಧ್ವನಿಯಾದರು. ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಡಿ. ವಿ. ಸದಾನಂದಗೌಡರು, ಸಚಿವರಾದ ಸುನೀಲ್ ಕುಮಾರ್, ಆರ್. ಅಶೋಕ, ಕೇಂದ್ರದ ಮಾಜಿ ಸಚಿವ ಸದಾನಂದ ಗೌಡ ಸೇರಿದಂತೆ ಗಣ್ಯಾತಿಗಣ್ಯರು, ನಾಗರಿಕರು, ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು.
ಕೋಟಿ ಕಂಠ ಗಾಯನ; ಕೋಟಿ ಕಂಠ ಗಾಯನ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೂ ಆಹ್ವಾನ ನೀಡಲಾಗಿತ್ತು. ಕನ್ನಡ ಚಿತ್ರರಂಗದ ನಟರಾದ ಸುದೀಪ್, ದರ್ಶನ್, ರವಿಚಂದ್ರನ್ ಸೇರಿದಂತೆ ಪ್ರಮುಖ ನಟ ನಟಿಯರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿತ್ತು. ಆದರೆ ಅವರು ಯಾರೂ ಕೂಡಾ ಸಮಾರಂಭಕ್ಕೆ ಸ್ಪಂದಿಸಿಲ್ಲ ಎಂದು ಕನ್ನಡ ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

ಕನ್ನಡದ ಸಮಾರಂಭದಲ್ಲಿ ಸರ್ಕಾರ ಆರು ಖ್ಯಾತನಾಮರ ಹಾಡುಗಳನ್ನು ಏಕಕಾಲಕ್ಕೆ ಹಾಡುವಂತೆ ತಿಳಿಸಿತ್ತು. ಅದರಂತೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ', ಹುಯಿಲಗೊಳ ನಾರಾಯಣರಾವ್ ರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು', ಡಾ.ಚನ್ನವೀರ ಕಣವಿರವರ 'ವಿಶ್ವ ವಿನೂತನ ವಿದ್ಯಾಚೇತನ', ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮವಾ', ಡಾ.ಡಿ.ಎಸ್.ಕರ್ಕಿ ಅವರ 'ಹಚ್ಚೇವು ಕನ್ನಡದ ದೀಪ' ಹಾಗೂ ಡಾ. ಹಂಸಲೇಖ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಆರು ಗೀತೆಗಳು ಲಕ್ಷಾಂತರ ಕನ್ನಡಿಗರ ಕಂಠದಿಂದ ಮೊಳಗಿದವು.












Click it and Unblock the Notifications