KPSC: ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ತಪ್ಪು, ವರದಿ ಕೇಳಿದ ಪ್ರಾಧಿಕಾರ
ಬೆಂಗಳೂರು, ಆಗಸ್ಟ್ 29: ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಮಂಗಳವಾರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದೆ. ಆದರೆ ಈ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ದೋಷ ಇರುವ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ದೋಷದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವರದಿಯನ್ನು ಕೇಳಿದೆ. ಪರೀಕ್ಷೆಯ ಕೀ-ಉತ್ತರಗಳನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದಾರೆ. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಟ್ವೀಟ್ ಮಾಡಿದ್ದು, ದಿನಾಂಕ 27/08/2024 ರಂದು ಕೆಪಿಎಸ್ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದದಲ್ಲಿ ಉಂಟಾದ ಪ್ರಮಾದದ ಕುರಿತು ಹಾಗೂ ಇದಕ್ಕೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು 3 ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿ ಪತ್ರ ಬರೆಯಲಾಗಿದೆ ಎಂದು ಹೇಳಿದೆ.

ಪ್ರಾಧಿಕಾರದ ಅಧ್ಯಕ್ಷರ ಪತ್ರದ ವಿವರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರದಲ್ಲಿ ದಿನಾಂಕ 28/8/2024 ರಂದು ಪ್ರಜಾವಾಣಿ ಪ್ರತಿಯಲ್ಲಿ ಪ್ರಕಟವಾದ ವರದಿಯನ್ನು ಲಗತ್ತಿಸಿ ತಮ್ಮ ಗಮನ ಸೆಳೆಯಬಯಸುತ್ತೇವೆ ಎಂದು ತಿಳಿಸಲಾಗಿದೆ.
ಸದರಿ ಪತ್ರಿಕಾ ವರದಿಯಲ್ಲಿ ನೀರಿನ ಸಾಗಣೆಯು ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆ. ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್ ಫಿರೇಷನ್ ಫುಲ್ ಮೂಲಕ ಪೂರೈಸುತ್ತದೆ.
ಕ್ಸೈಲೆಮ್ ವೆಸಲ್ಸ್ನಲ್ಲಿ ನೀರಿನ ಅಣುವಿನ ನಿರಂತರ ಸರಪಳಿಗಳನ್ನು ಮರು ಸ್ಥಾಪಿಸುವುದು ಬೇರಿನ ಒತ್ತಡದ ದೊಡ್ಡ ಕೆಲಸವಾಗಿರುತ್ತದೆ. ಇದು ಆಗಾಗ್ಗೆ ಟ್ರಾನ್ಸಿಫಿರೇಷನ್ ಮೂಲಕ ರಚಿಸಲಾದ ಅಗಾಧವಾದ ಒತ್ತಡದಲ್ಲಿ ಒಡೆಯುತ್ತದೆ. ಗುಟೇಶನ್, ಟ್ರಾನ್ಸ್ ಫಿರೇಷನ್ ಪುಲ್ಗೆ ಕಾರಣವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿಗೆ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿದ್ದ ಕೆಲವು ಪ್ರಶ್ನೆಗಳ ಮಾದರಿಗಳವು ಎಂದು ವರದಿಯಾಗಿದೆ.
ಈ ರೀತಿಯಾಗಿ ದಿನಾಂಕ 27/8/2024ರಂದು ಕೆಪಿಎಸ್ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಯ ಪತ್ರಿಕೆಗಳು ಗೊಂದಲದಲ್ಲಿ ಇದ್ದು ಅಭ್ಯರ್ಥಿಗಳ ತೊಂದರೆ ಉಂಟಾಗಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.
ಪ್ರಶ್ನೆಗಳ ಭಾಷಾಂತರ ಕಬ್ಬಣದ ಕಡಲೆಯಾಗಿದ್ದು, ಉದ್ದುದ್ದ ಪ್ರಶ್ನೆಗಳನ್ನು ಕೇಳಿದ್ದು ಗೊಂದಲವಾಗಿರುವುದು. ಪ್ರಶ್ನೆಗಳ ಅಸ್ಪಷ್ಟತೆ ಕೆಪಿಎಸ್ಸಿ ಪರೀಕ್ಷೆಯ ಗುಣಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದೆ, ಒಂದು ಕಾಲದಲ್ಲಿ ಇತರೆ ರಾಜ್ಯಗಳಗೆ ಮಾದರಿಯಾಗಿದ್ದ ಕೆಪಿಎಸ್ಸಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳು ಇಂದು ತೀರಾ ಕಳಪೆಯಾಗಿರುವುದು ದುರದೃಷ್ಟಕರ.
ಅರ್ಥವಾಗದ ಕನ್ನಡ ಬಳಕೆಯಿಂದಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನಾನುಕೂಲವಾಗಿದೆ. ಸಂಕೀರ್ಣ ಮತ್ತು ಗೊಂದಲ ಮೂಡಿಸುವಂತಹ ಇಂತಹ ಪ್ರಶ್ನೆ ಪತ್ರಿಕೆಗಳಿಂದ ಕನ್ನಡಿಗರೇ ಸಂಕಷ್ಟಕ್ಕೆ ಈಡಾಗಿದ್ದಾರೆ. ನೂರಾರು ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಆಡಳಿತ ಭಾಷೆಯಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾದ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಂಡು ಅಭ್ಯರ್ಥಿಗಳು ಉತ್ತರ ಬರೆಯುವಂತೆ ಸೂಚಿಸಿರುವುದನ್ನು ಪ್ರಾಧಿಕಾರ ಖಂಡಿಸುತ್ತದೆ. ಆಡಳತ ಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ನೀಡದೆ ಮತ್ತು ಅಭ್ಯರ್ಥಿಗಳಿಗೆ ಅನಾನುಕೂಲತೆಯನ್ನು ಉಂಟು ಮುಂದಿರುವ ಕೆಪಿಎಸ್ಸಿ ನಡೆಯನ್ನು ಪ್ರಾಧಿಕಾರ ವಿರೋಧಿಸಿ, ಖಂಡಿಸುತ್ತದೆ.
ದಿನಾಂಕ 27/8/2024ರಂದು ನಡೆಸಿದ ಪರೀಕ್ಷೆಗಳು, ಉಂಟಾದ ಪ್ರಮಾದ ಹಾಗೂ ಇದಕ್ಕೆ ಸಂಬಂಧಿಸಿದಂತೆ. ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನದೊಳಗಾಗಿ ಪ್ರಾಧಿಕಾರಕ್ಕೆ ಕಳುಹಿಸುವಂತೆ ಸೂಚಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಸರ್ಕಾರದ ವಿರುದ್ಧ ಆಕ್ರೋಶ: ಈ ವಿಚಾರದ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ ಸಹ ಟ್ವೀಟ್ ಮಾಡಿದ್ದಾರೆ. 'ಕೆಪಿಎಸ್ಸಿಯ 384 ಗೆಜೆಟೆಡ್ ಪ್ರೊಬೇಶನರ್ ಹುದ್ದೆಗಳಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಹಲವಾರು ಲೋಪ ದೋಷಗಳು ಕಂಡುಬಂದಿದ್ದು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗಿದೆ' ಎಂದು ಹೇಳಿದ್ದಾರೆ.
'ರಾಜ್ಯದ ಇತಿಹಾಸದಲ್ಲೇ ಇಷ್ಟು ಕೆಟ್ಟದಾಗಿ ಎಂದಿಗೂ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರಲಿಲ್ಲ ಎಂದು ಅಭ್ಯರ್ಥಿಗಳು ರಾಜ್ಯ ಸರ್ಕಾರಕ್ಕೆ ಶಾಪ ಹಾಕುವುದನ್ನ ನೋಡುತ್ತಿದ್ದರೆ, ಈ ನಾಲಾಯಕ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾವುದೂ ಸರಿಯಾಗಿ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ' ಎಂದು ಆಕ್ರೋಶ ವ್ಯಕ್ತವಪಡಿಸಿದ್ದಾರೆ.











Click it and Unblock the Notifications