ಕುಮಾರಸ್ವಾಮಿ ಚಿತ್ರಕ್ಕೆ ಸೆಡ್ಡು ಹೊಡೆಯಲು ಬಿಎಸ್ ವೈ ಚಿತ್ರ ತೆರೆಗೆ!
ಬೆಂಗಳೂರು, ಜೂನ್ 01 : ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ಸ್ವತಂತ್ರ ಹೋರಾಟಗಾರರ ಕುರಿತು ಹಲವು ಚಿತ್ರಗಳು ತೆರೆಮೇಲೆ ಬಂದಿವೆ. ಈಗ ಕರ್ನಾಟಕದ ರಾಜಕಾರಣಿಗಳ ಕುರಿತು ಸಿನಿಮಾವಾಗ್ತಿವೆ.
ಹೌದು.. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಚ ಎಚ್ ಡಿ ಕುಮಾರಸ್ವಾಮಿ ಅವರ ಭೂಮಿಪುತ್ರ ಸಿನಿಮಾಗೆ ಚಾಲನೆ ನೀಡಲಾಯಿತು. ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯೊಬ್ಬರ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಮೂಡಿ ಬರಲಿದೆ. [ಸಿನಿಮಾವಾಗಲಿದೆ ಎಚ್ ಡಿ ಕುಮಾರಣ್ಣನ T20 ಪಾಲಿಟಿಕ್ಸ್]
ಹೌದು.. ಬಿಜೆಪಿಯ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಕುರಿತಾದ ಸಿನಿಮಾವನ್ನು ಮಾಡಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಖ್ಯಾತ ನಿರ್ದೇಶಕ ಎಂ ಎಸ್ ರಮೇಶ್ ಅವರ ನಿರ್ದೇಶನದಲ್ಲಿ ಬಿಎಸ್ ವೈ ಅವರ ಚಿತ್ರ ಮೂಡಿ ಬರಲಿದೆ.
ಈ ಚಿತ್ರಕ್ಕೆ ನೇಗಿಲ ಯೋಗಿ, ಮಣ್ಣಿನ ಮಗ ಎಂಬ ಟೈಟಲ್ ನೋಂದಾಣಿ ಮಾಡಲಾಗಿದ್ದು ಇದರಲ್ಲಿ ಯಾವುದು ಅಂತಿಮ ಎಂಬುವುದು ಇನ್ನು ತೀರ್ಮಾನವಾಗಿಲ್ಲ.
ಬಿಜೆಪಿಯ ಮುಖಂಡ ರುದ್ರೇಶ್ ಎನ್ನುವರು ಚಿತ್ರದ ನಿರ್ಮಾಪಕರಾಗಿದ್ದು ಬಿಎಸ್ ವೈ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಶೋಭಾ ಕರಂದ್ಲಾಜೆ ಪಾತ್ರದಲ್ಲಿ ಶೃತಿ ನಟಿಸಲಿದ್ದು ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ, ಜಗ್ಗೇಶ್ ಇತರರು ಕಾಣಿಸಿಕೊಳ್ಳಲಿದ್ದಾರೆ.