ಕರ್ನಾಟಕ ಪೊಲೀಸರದ್ದು ಹಿಟ್ಲರ್ ನೀತಿ; ಕಮಲನಾಥ್ ಕಿಡಿ
ಬೆಂಗಳೂರು, ಮಾರ್ಚ್ 18 : ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಬೆಂಗಳೂರಿನಲ್ಲಿ ಹೈಡ್ರಾಮ ಸೃಷ್ಟಿಸಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ರನ್ನು ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ಕಮಲನಾಥ್ ಕರ್ನಾಟಕ ಮತ್ತು ಬೆಂಗಳೂರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಪೊಲೀಸರ ಕಾರ್ಯವನ್ನು ಹಿಟ್ಲರ್ ನೀತಿಗಳಂತೆ ಇವೆ" ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರಿನ ಯಲಹಂಕ ಬಳಿಯ ರಮಡಾ ಹೋಟೆಲ್ನಲ್ಲಿ ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಈ ಹೋಟೆಲ್ಗೆ ಕರ್ನಾಟಕದ ಪೊಲೀಸರು ಭದ್ರತೆಯನ್ನು ಒದಗಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರವಿದೆ.

ಬುಧವಾರ ಮುಂಜಾನೆ ರಮಡಾ ಹೋಟೆಲ್ನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್ ಆಗಮಿಸಿದ್ದರು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದಾಗಿ ಸಿಂಗ್ ಸ್ಥಳದಲ್ಲಿಯೇ ಧರಣಿ ಕುಳಿತರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು ಅಮೃತಹಳ್ಳಿ ಠಾಣೆಗೆ ಕರೆದುಕೊಂಡು ಹೋದರು.
ಇದಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಕೆಪಿಸಿಸಿಯ ನಿಯೋಜಿತ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, "ಬಿಜೆಪಿ ಸರ್ಕಾರ, ಬೆಂಗಳೂರಿನ ಹೋಟೆಲ್ನಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಬಲವಂತವಾಗಿ ಕೂಡಿಟ್ಟಿದ್ದು, ನನಗೆ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್ಗೆ ಶಾಸಕರೊಂದಿಗೆ ಮಾತಾಡಲು ಅವಕಾಶ ನೀಡುತ್ತಿಲ್ಲ" ಎಂದು ಆರೋಪಿಸಿದರು.
ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಮುಖ್ಯಮಂತ್ರಿ ಕಮಲನಾಥ್ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಿದೆ.
ಮಧ್ಯಪ್ರದೇಶ ವಿಧಾನಸಭೆ ಒಟ್ಟು ಸದಸ್ಯ ಬಲ 230. ಪ್ರಸ್ತುತ ಸದಸ್ಯ ಬಲ 222ಕ್ಕೆ ಕುಸಿದಿದೆ. ಬಹುಮತ ಸಾಬೀತು ಪಡಿಸಲು 112 ಸದಸ್ಯ ಬಲ ಬೇಕು. ಕಾಂಗ್ರೆಸ್ ಸದನದಲ್ಲಿ 108 ಶಾಸಕರನ್ನು ಹೊಂದಿದ್ದು, 7 ಇತರ ಶಾಸಕರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಕಾಂಗ್ರೆಸ್ನ 22 ಶಾಸಕರು ರಾಜೀನಾಮೆ ಅಂಗೀಕಾರವಾಗಿಲ್ಲ.












Click it and Unblock the Notifications