ಅತ್ಯಾಚಾರ ಆರೋಪ: ಕಂಬಳೇಶ್ವರ ಸ್ವಾಮೀಜಿ ಬಂಧನ
ಕಲಬುರ್ಗಿ, ನ. 17: ಚಿತ್ತಾಪುರ ತಾಲೂಕಿನ ಕಂಬಳೇಶ್ವರ ಮಠಕ್ಕೆ ಕಸ ಗುಡಿಸಲು ಬಂದ ಅಪ್ರಾಪ್ತ ಬಾಲಕಿಯ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿರುವ ಬಗ್ಗೆ ಬಂದಿರುವ ವರದಿಗಳನ್ನು ಬಾಲಕಿಯ ಕುಟುಂಬ ಅಲ್ಲಗೆಳೆದಿದೆ. ಸೋಮಶೇಖರ ಸ್ವಾಮೀಜಿ ಕೂಡಾ ಇದು ಸುಳ್ಳು ಸುದ್ದಿ ಎಂದಿದ್ದಾರೆ. ಸ್ಥಳೀಯರಲ್ಲಿ ಪರ ವಿರೋಧ ಮಾತುಗಳು ಕೇಳಿ ಬಂದಿವೆ.
ಇದೀಗ ಬಂದ ಅಪ್ದೇಟ್: ಅತ್ಯಾಚಾರ ಆರೋಪ ಹೊತ್ತಿರುವ ಕಂಬಳೇಶ್ವರ ಮಠದ ಸೋಮಶೇಖರ ಸ್ವಾಮೀಜಿ ಅವರನ್ನು ಚಿತ್ತಾಪುರ ಪೊಲೀಸರು ಬಂಧಿಸಿ, ಕೋರ್ಟಿನ ಮುಂದೆ ಹಾಜರುಪಡಿಸಿದ್ದಾರೆ.
ಮಠದ ವ್ಯವಹಾರದ ಬಗ್ಗೆ ನಮಗೆ ಗೊತ್ತಿಲ್ಲ. ನನ್ನ ಮಗಳಿಗೆ ಏನು ಆಗಿಲ್ಲ. ನನ್ನ ಮಗಳು ಹುಷಾರಾಗಿದ್ದಾಳೆ, ಎಂದಿಗೂ ಕಾಯಿಲೆ ಬಿದ್ದಿಲ್ಲ, ಸ್ವಾಮೀಜಿಗಳ ಬಗ್ಗೆ ಗೌರವವಿದೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಇದೇ ಮಾತನ್ನು ಬಾಲಕಿಯ ಅಜ್ಜಿ ಪುನರುಚ್ಚರಿಸಿದ್ದಾರೆ. ಮಠದ ಬಗ್ಗೆ ದ್ವೇಷ ಇದ್ದವರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಮಠಾಧಿಪತಿ ಸೋಮೇಶ್ವರ ಶಿವಚಾರ್ಯ ಸ್ವಾಮೀಜಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತಿದ್ದಾರೆ. ಅ.30ರಂದು ಮಠಕ್ಕೆ ಕಸ ಗುಡಿಸಲು ಬಂದ ಅಪ್ರಾಪ್ತ ಬಾಲಕಿಯ ಮೇಲೆ ಸ್ವಾಮೀಜಿ ಅತ್ಯಾಚಾರವೆಸಗಿದ್ದಾರೆ ಎಂದು ಸ್ಥಳೀಯರೊಬ್ಬರು ದೂರು ನೀಡಿದ್ದಾರೆ. ಈ ಬಗ್ಗೆ ಚಿತ್ತಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಸ್ಥಳೀಯರಿಂದ ಮಕ್ಕಳ ಸಮಿತಿಗೆ ದೂರು ಸಲ್ಲಿಸಿದ್ದರು ಆದರೆ, ಬಾಲಕಿಯ ಕುಟುಂಬದವರು ದೂರನ್ನು ನೀಡಿಲ್ಲ ಹಾಗೂ ಸ್ವಾಮೀಜಿ ವಿರುದ್ಧ ಒಂದು ಮಾತನ್ನು ಆಡಿಲ್ಲ, ಅತ್ಯಾಚಾರ ನಡೆದಿರುವುದನ್ನೇ ಅಲ್ಲಗೆಳೆದಿದ್ದಾರೆ.
ಚಿತ್ತಾಪುರದ ನಿವಾಸಿ ರವೀಂದ್ರ ಎಂಬುವರು ದೂರು ದಾಖಲಿಸಿದ್ದು, ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಲಕಿಯ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಚಿತ್ತಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಬಂದ ಮೇಲೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications