ಯಡಿಯೂರಪ್ಪನವರೇ ಹೆಣ್ಣಿನ ಮಾತನ್ನು ಕೇಳಿದ್ರೆ ಸರ್ವನಾಶವಾಗ್ತೀರಾ
ಹೆಣ್ಣಿನ ಮಾತನ್ನು ಕೇಳಿದರೆ ಸರ್ವನಾಶ ಆಗ್ತೀರಾ ಎಂದು ಕಾಗಿನೆಲೆ ಪೀಠಾಧಿಪತಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು, ಜ 14: ಧರ್ಮಶಾಸ್ತ್ರ, ಗುರುಗಳ ಮಾತನ್ನು ಕೇಳಿದ್ರೆ ಉದ್ದಾರವಾಗುತ್ತೀರಾ, ಹೆಣ್ಣಿನ ಮಾತನ್ನು ಕೇಳಿದರೆ ಸರ್ವನಾಶ ಆಗ್ತೀರಾ ಎಂದು ಕಾಗಿನೆಲೆ ಪೀಠಾಧಿಪತಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಕರ ಸಂಕ್ರಾತಿಯ ದಿನವಾದ ಶನಿವಾರ (ಜ 14) ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಾಗಿನೆಲೆ ಮಠದ ನಿರಂಜನಾನಂದಪುರಿ ಶ್ರೀಗಳು, ಯಡಿಯೂರಪ್ಪನವರಿಗೆ ಮೇಲಿನ ಎಚ್ಚರಿಕೆ ನೀಡಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ. (ಬಿಜೆಪಿಯಲ್ಲಿ ಮುಗಿಯದ ರಗಳೆ)
ನಿರಂಜನಾನಂದಪುರಿ ಶ್ರೀಗಳು ಹೆಣ್ಣಿನ ಮಾತನ್ನು ಕೇಳಿದ್ರೆ ಸರ್ವನಾಶ ಆಗುತ್ತೀರಾ ಎಂದಾಗ, ವೇದಿಕೆಯಲ್ಲಿದ್ದ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ ಕೈಮುಗಿದು ಆ ರೀತಿ ಹೇಳಿಕೆ ನೀಡಬೇಡಿ ಎಂದು ಶ್ರೀಗಳಲ್ಲಿ ಮನವಿ ಮಾಡಿದ ಘಟನೆ ನಡೆಯಿತು.

ಸ್ತ್ರೀ ಬುದ್ಧಿ ಪ್ರಳಯಾಂತಕವಾದದ್ದು ಎನ್ನುವುದಕ್ಕೆ ಇತಿಹಾಸ ನಮ್ಮ ಮುಂದೆ ಸಾಕ್ಷಿಯಿದೆ, ಇದು ನಿಮಗೆ ಗೊತ್ತಿರದ ವಿಚಾರವಲ್ಲ. ಸ್ವಲ್ಪ ಗುರುವಿನ ಮಾತು ಕೇಳಿ ಯಡಿಯೂರಪ್ಪನವರೇ ಎಂದು ಶ್ರೀಗಳು ವೇದಿಕೆಯಲ್ಲಿ ಬಿಎಸ್ವೈಗೆ ಎಚ್ಚರಿಕೆ ನೀಡಿದ್ದಾರೆ.
ನೀವು ಹೆಣ್ಣಿನ ಮಾತು ಕೇಳಿ ಸರ್ವನಾಶ ಆಗುತ್ತಿದ್ದೀರಿ. ಹಾಲುಮತ ಸಮಾಜ ಇತ್ತೀಚಿನ ನಿಮ್ಮ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಸಮಾವೇಶದಲ್ಲಿ ಯಡಿಯೂರಪ್ಪನವರಿಗೆ ನಿರಂಜನಾನಂದಪುರಿ ಶ್ರೀಗಳು ಎಚ್ಚರಿಕೆಯ ಮೂಲಕ ಮನವಿ ಮಾಡಿದ್ದಾರೆ.
ಶ್ರೀಗಳು ಭಾಷಣ ಮಾಡುತ್ತಿದ್ದಾಗ, ಅವರ ಬಳಿ ಬಂದ ಈಶ್ವರಪ್ಪ ಆ ರೀತಿಯ ಹೇಳಿಕೆಯನ್ನು ನೀಡಬೇಡಿ ಎಂದು ಕೈಮುಗಿದು ಮನವಿ ಮಾಡಿದರು. ಆಗ ಆಯ್ತು ಹೋಗ್ರೀ.. ಕೂತ್ಕೊಳ್ಳಿ ಎಂದು ಶ್ರೀಗಳು, ಈಶ್ವರಪ್ಪನವರಿಗೆ ಸೂಚಿಸಿದರು.












Click it and Unblock the Notifications