ಖಾಸಗಿ ಸುದ್ದಿ ವಾಹಿನಿ ಪ್ರಸಾರ ಬಂದ್ ಗೆ ರಾಜ್ಯಾದ್ಯಂತ ಪತ್ರಕರ್ತರ ಪ್ರತಿಭಟನೆ
ಧಾರವಾಡ, ಸೆಪ್ಟೆಂಬರ್ 30: ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿ ಬಂದ್ ಮಾಡಿರುವ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಧಾರವಾಡದಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜಿಲ್ಲಾ ಪತ್ರಕರ್ತರರು, ಸಿಎಂ ಪುತ್ರನ ವಿರುದ್ಧದ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪವರ್ ಸುದ್ದಿ ವಾಹಿನಿಯನ್ನು ಕಳೆದ ಎರಡು ದಿನದಿಂದ ಬಂದ್ ಮಾಡಲಾಗಿದೆ. ನಿನ್ನೆ ರಾಜ್ಯ ಪತ್ರಕರ್ತರ ಸಂಘದಿಂದ ಸಿಎಂ ಭೇಟಿ ಮಾಡಿ, ಮನವಿ ಮಾಡಲಾಗಿದೆ ಎಂದರು.
ಮಂಗಳವಾರವೂ ಸ್ಥಗಿತಗೊಂಡ ಪವರ್ ಪ್ರಸಾರ: ಸಾಮಾಜಿಕ ಜಾಲತಾಣ ಪ್ರತಿರೋಧ!
ಸಿಎಂ ಯಡಿಯೂರಪ್ಪ ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಲಾಗಿತ್ತಾದರೂ, ಇಲ್ಲಿಯವರೆಗೆ ಪವರ್ ಟಿವಿ ಆರಂಭಿಸಲು ಬೇಕಾಗಿರುವ ತಾಂತ್ರಿಕ ಸಲಕರಣೆಗಳು ನೀಡಿಲ್ಲ. ಪವರ್ ಟಿವಿ ಮೇಲೆ ನಡೆದಿರುವ ದಬ್ಬಾಳಿಕೆಯನ್ನು ಖಂಡಿಸಿ ಧಾರವಾಡದಲ್ಲಿ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ನೇತೃತ್ವದಲ್ಲಿ ಜಿಲ್ಲಾ ಪತ್ರಕರ್ತರು ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಮಾಧ್ಯಮದ ಮೇಲೆ ಗದಾ ಪ್ರಹಾರ
ಇನ್ನು ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿರುವ ಕಚೇರಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಪತ್ರಕರ್ತ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಮಾಧ್ಯಮದ ಮೇಲೆ ಇಂತಹ ಪ್ರಹಾರಗಳು ನಡೆಯಬಾರದೆಂದು ಹೇಳಿದರು. ಪವರ್ ಟಿವಿ ಬಂದ್ ಮಾಡುವ ಮೂಲಕ ಮಾಧ್ಯಮದ ಮೇಲೆ ಗದಾ ಪ್ರಹಾರ ನಡೆಸಿದಂತಾಗಿದೆ. ತಕ್ಷಣವೇ ಇದನ್ನ ಬಿಡಬೇಕು ಎಂದು ಆಗ್ರಹಿಸಿದರು.
ಖಾಸಗಿ ಸುದ್ದಿ ವಾಹಿನಿಯಲ್ಲಿ ಪೊಲೀಸರ ತಪಾಸಣೆ, ಲೈವ್ ಪ್ರಸಾರ ಸ್ಥಗಿತ!
ತಪ್ಪಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ
ಅದೇ ರೀತಿ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾಧ್ಯಮ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಪತ್ರಕರ್ತರು ಆರೋಪಿಸಿದರು. ಸುದ್ದಿವಾಹಿನಿ ನಂಬಿ ಹಲವಾರು ಕುಟುಂಬಗಳು ಬದುಕು ನಡೆಸುತ್ತಿವೆ. ವರದಿಯಲ್ಲಿ ತಪ್ಪಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ, ಆದರೆ ಚಾನಲ್ ಆನ್ ಏರ್ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಚಾನಲ್ ಆನ್ ಏರ್ಗೊಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಯಡಿಯೂರಪ್ಪ ಅವರ ವಿರುದ್ಧ ವ್ಯಾಪಕ ಖಂಡನೆ
ಪವರ್ ಟಿವಿ ವಾಹಿನಿ ಸ್ಥಗಿತಗೊಳಿಸಿರುವ ಹಿನ್ನಲೆಯಲ್ಲಿ ಹಾವೇರಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಪತ್ರಕರ್ತರಿಂದ ಆರೋಪಿಸಿದರು.
ಮುಖ್ಯಮಂತ್ರಿ ಕುಟುಂಬದ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪವರ್ ಟಿವಿ ಲೈವ್ ಬಂದ್ ಮಾಡಿಸಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪವರ್ ಟಿವಿ ಬೆನ್ನಿಗೆ ನಿಂತ ಕನ್ನಡ ಸಂಘಟನೆಗಳು ಸರ್ಕಾರದ ನಿರಂಕುಶ ಪ್ರಭುತ್ವದ ವಿರುದ್ಧ ಕಿಡಿಕಾರಿವೆ.
Recommended Video
ಭ್ರಷ್ಟಾಚಾರ ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ
ಬಳ್ಳಾರಿಯಲ್ಲಿ ಜನಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಯರ್ರಿಸ್ವಾಮಿ ಮಾತನಡಿದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನು ಕತ್ತು ಹಿಸುಕಿದ್ದಾರೆ, ಈ ಮೂಲಕ ಭ್ರಷ್ಟಾಚಾರ ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ, ಆರೋಪ ಮಾಡಿದವರ ಮೇಲೆಯೇ ಕ್ರಮ ಕೈಗೊಳ್ಳುತ್ತಾರೆ, ಮೊದಲು ತಮ್ಮ ಮೇಲಿರುವ ಆರೋಪ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಸರ್ಕಾರವೇ ಮುಂದು ನಿಂತು ಮಾಡುತ್ತಿದೆ ಇದು ದುರದೃಷ್ಟಕರ ಬೆಳವಣಿಗೆ ಎಂದು ವಾಗ್ದಾಳಿ ನಡೆಸಿದರು.