ಮುಂದಿನ ಅಸೆಂಬ್ಲಿ ಚುನಾವಣೆಯನ್ನೇ ಬಹಿಷ್ಕರಿಸಲು ಹೊರಟಿದೆಯಾ ಕಾಂಗ್ರೆಸ್?
Recommended Video

ಆಡಳಿತ ಯಂತ್ರವನ್ನು ಬಳಸಿಕೊಂಡು ಬಿಜೆಪಿ ಇವಿಎಂ ಅನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ ಎನ್ನುವ ವಿರೋಧ ಪಕ್ಷಗಳ ಕೂಗು, ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ ಹೊಸ ರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.
ಬ್ಯಾಲೆಟ್ ಪೇಪರ್ ಬಳಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲು ವಿರೋಧ ಪಕ್ಷಗಳು ಮಾತುಕತೆ ನಡೆಸುತ್ತಿದ್ದು, ಒಂದು ವೇಳೆ ಇವಿಎಂ ಅನ್ನೇ ಬಳಸಿದರೆ, ಕರ್ನಾಟಕ ಚುನಾವಣೆಯನ್ನೇ ಬಹಿಷ್ಕರಿಸಲು ವಿರೋಧ ಪಕ್ಷಗಳು ಚಿಂತನೆ ನಡೆಸಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣಾ ಫಲಿತಾಂಶದ ನಂತರ ಆರಂಭವಾದ ಇವಿಎಂ ಲೋಪದೋಷಗಳ ಬಗೆಗಿನ ಚರ್ಚೆ, ಮೊನ್ನೆಮೊನ್ನೆ ಹೊರಬಿದ್ದ ಉತ್ತರಪ್ರದೇಶದ ಸ್ಥಳೀಯ ಸಂಸ್ಥೆಯ ರಿಸಲ್ಟ್ ನಂತರ ತಾರಕಕ್ಕೇರಿದೆ. ಮೂಲಗಳ ಪ್ರಕಾರ ವಿರೋಧ ಪಕ್ಷಗಳ ಕೆಲವು ಮುಖಂಡರು ಕಾಂಗ್ರೆಸ್ ಜೊತೆ ಕೂಡಾ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.
ಯುಪಿಎ ಮೈತ್ರಿಕೂಟದ ಹಲವು ಸದಸ್ಯರು ಮತ್ತು ಇತರ ವಿರೋಧ ಪಕ್ಷಗಳು ಒಂದಾಗಿ, ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದು, ಕಾಂಗ್ರೆಸ್ ಹೈಕಮಾಂಡಿನ ನಿರ್ಧಾರಕ್ಕೆ ಕಾಯುತ್ತಿದೆ ಎನ್ನುವ ಮಾಹಿತಿಯಿದೆ.
ಇವಿಎಂ ಯಂತ್ರದಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ಈಗಾಗಲೇ ಹಲವು ಬಾರಿ ಡೆಮೋ ನೀಡಿದ್ದ ಚುನಾವಣಾ ಆಯೋಗ, ಇದಾದ ನಂತರ ಕೂಡಾ ವಿರೋಧ ಪಕ್ಷಗಳು ತೆಗೆದಿದ್ದ ತಗಾದೆಗೆ 'ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರಿಸಲು ಸಿದ್ದ, ಇವಿಎಂನಲ್ಲಿನ ಲೋಪದೋಷ ತೋರಿಸಿ' ಎಂದು ಬಹಿರಂಗ ಸವಾಲು ನೀಡಿತ್ತು. ಡಮ್ಮಿ ಇವಿಎಂ ಬಳಸಿ ಹೇಗೆಲ್ಲಾ ದುರ್ಬಳಕೆ ಮಾಡಬಹುದು ಅನ್ನೋದರ ಬಗ್ಗೆ ಆಮ್ ಆದ್ಮಿ ಪಕ್ಷ ಡೆಮೋ ನೀಡಿದ್ದ ನಂತರ ಆಯೋಗ ಈ ಕ್ರಮವನ್ನು ತೆಗೆದುಕೊಂಡಿತ್ತು.
ಕರ್ನಾಟಕದ ಮುಖ್ಯಮಂತ್ರಿ ಕೂಡಾ ಇವಿಎಂ ಬ್ಯಾನಿಗೆ ಒತ್ತಡ ಹೇರುತ್ತಿದ್ದಾರಾ? ಮುಂದೆ ಓದಿ..

ಕೇಜ್ರಿವಾಲ್, ಮಾಯಾವತಿ, ಅಖಿಲೇಶ್ ಯಾದವ್
ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಬಿಎಸ್ಪಿಯ ಮಾಯಾವತಿ, ಎಸ್ಪಿಯ ಅಖಿಲೇಶ್ ಯಾದವ್, ಟಿಎಂಸಿಯ ಮಮತಾ ಬ್ಯಾನರ್ಜಿ, ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್, ಎಡರಂಗದ ಯಚೂರಿ ಮುಂತಾದ ಪ್ರಮುಖರು, ಒಂದೆಡೆ ಸೇರಿ ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಡ ಹೇರಲು ನಿರ್ಧರಿಸಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ
ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜೊತೆ ಒಂದು ಹಂತದ ಮಾತುಕತೆ ನಡೆಸಿರುವ ವಿರೋಧ ಪಕ್ಷಗಳ ಪ್ರಮುಖರು, ಕಾಂಗ್ರೆಸ್ಸಿನ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಕೂಡಲೇ, ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲೇ ಆರಂಭವಾಗುವಂತೆ ಬ್ಯಾಲೆಟ್ ಪೇಪರ್ ಬಳಸಲು ಒತ್ತಡ ಹೇರುವ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ,
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸುವಂತೆ ಚುನಾವಣಾ ಆಯೋಗಕ್ಕೆ ಒತ್ತಡ ಹೇರುವ ವಿಚಾರದಲ್ಲಿ ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ರಾಹುಲ್ ಗಾಂಧಿಯ ನೇತೃತ್ಬದಲ್ಲಿ ಮುಂದಿನ ನಡೆ
ಗುಜರಾತ್ ಚುನಾವಣೆಯ ಫಲಿತಾಂಶವನ್ನು ಆಧರಿಸಿ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿರುವ ವಿರೋಧ ಪಕ್ಷಗಳು, ರಾಹುಲ್ ಗಾಂಧಿಯ ನೇತೃತ್ಬದಲ್ಲಿ ಮುಂದಿನ ನಡೆಯನ್ನು ಅಂತಿಮಗೊಳಿಸಲಿದೆ. ಗುಜರಾತಿನಲ್ಲಿ ಬಿಜೆಪಿ ಮತ್ತೆ ಗೆದ್ದರೆ, ಇವಿಎಂ ವಿರುದ್ದದ ಹೋರಾಟ ಮತ್ತೆ ಸ್ಟ್ರಾಂಗ್ ಆಗುತ್ತಾ ಎನ್ನುವುದರ ಬಗ್ಗೆ ಸದ್ಯ ಸ್ಪಷ್ಟನೆಯಿಲ್ಲ.

ವಿರೋಧ ಪಕ್ಷಗಳ ತಕರಾರು
ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ನಲ್ಲಿ ಯಾವುದೇ ಬಟನ್ ಅನ್ನು ಒತ್ತಿದರೂ ಅದು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾವಣೆಯಾಗುತ್ತದೆ ಎನ್ನುವುದು ವಿರೋಧ ಪಕ್ಷಗಳ ತಕರಾರು. ಒಂದು ವೇಳೆ ಇದು ಹೌದು ಎಂದು ರುಜುವಾತಾದರೂ, ಬ್ಯಾಲೆಟ್ ಪೇಪರ್ ನಲ್ಲಿ ಇದಕ್ಕಿಂತ ದೊಡ್ಡ ಲಫ್ಡಾ ನಡೆಯುತ್ತದೆ ಎನ್ನುವುದು ಇವರಿಗೆ ಗೊತ್ತಿಲ್ಲದ ವಿಚಾರವಾ?












Click it and Unblock the Notifications