ಮೋದಿ, ರಾಹುಲ್ ಬಿಡಿ, ಕನ್ನಡಿಗರತ್ತ ಗಮನ ಕೊಡಿ!
ಬೆಂಗಳೂರು, ಡಿಸೆಂಬರ್ 11 : ಇಡೀ ದೇಶ ಗುಜರಾತ್ ಚುನಾವಣೆಯಲ್ಲಿ ಮುಳುಗಿ ಹೋಗಿದೆ. ಕನ್ನಡಿಗರು ಕೂಡ ಮೋದಿಯ ಕೈಮೇಲಾಗುವುದಾ, ರಾಹುಲ್ ಗೆಲ್ಲುವರಾ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಈ ಸಮಯದಲ್ಲಿ ಭಾಷಾ ತಾರತಮ್ಯದಿಂದಾಗಿ ಕನ್ನಡಿಗರೇ ಕೆಲಸ ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಿದೆ.
ಕರ್ನಾಟಕ ಮತ್ತು ಕೇರಳ ವಲಯಕ್ಕೆ 12ನೇ ತರಗತಿಯವರಿಗೆ ಕೇಂದ್ರ ಸರಕಾರಿ ಇಲಾಖೆಗಳಲ್ಲಿನ ಡೇಟಾ ಎಂಟ್ರಿ ತರಹದ ಖಾಲಿಯಿರುವ ಸುಮಾರು 3000 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆಯನ್ನು ಇನ್ನು 3 ತಿಂಗಳಲ್ಲಿ ನಡೆಸಲಾಗುತ್ತಿದೆ.

ಲೋವರ್ ಡಿವಿಜನಲ್ ಕ್ಲರ್ಕ್/ಜ್ಯೂನಿಯರ್ ಸೆಕ್ರೆಟೇರಿಯೇಟ್ ಅಸಿಸ್ಟಂಟ್, ಪೋಸ್ಟಲ್ ಅಸಿಸ್ಟಂಟ್/ಸಾರ್ಟಿಂಗ್ ಅಸಿಸ್ಟಂಟ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಯನ್ನು ನಡೆಸುತ್ತಿದೆ.
ಈ ಪರೀಕ್ಷೆಯನ್ನು ಹಿಂದಿ ಭಾಷಿಕರು ಹಿಂದಿಯಲ್ಲೇ ಬರೆಯಬಹುದು. ತನ್ನ ಭಾಷೆಯಲ್ಲೇ ಬರೆಯುವುದರಿಂದ ಆಯ್ಕೆಯಾಗುವವರ ಸಂಖ್ಯೆಯೂ ಹೆಚ್ಚಾಗಬಹುದು. ಕನ್ನಡಿಗರು ತನ್ನ ನಾಡಿನ ಹುದ್ದೆಗಳಾದರೂ ಅನಿವಾರ್ಯವಾಗಿ ಇಂಗ್ಲೀಷ್ ನಲ್ಲಿ ಬರೆಯಬೇಕಾಗಿದೆ.
ಇದರಿಂದ ಕನ್ನಡಿಗರು ಆಯ್ಕೆಯಾಗುವ ಸಂಖ್ಯೆಯೂ ಕಡಿಮೆಯಾಗಲಿದೆ. ಇದು ಯಾವ ನ್ಯಾಯ? ಕನ್ನಡಿಗರು ಭಾರತ ಒಕ್ಕೂಟದಲ್ಲಿ ಎರಡನೇ ದರ್ಜೆ ನಾಗರೀಕರು ಎನ್ನುವುದಕ್ಕೆ ಇದಕ್ಕಿಂತ ಬೇರೆಯ ಉದಾಹರಣೆ ಬೇಕೆ?
ನಮ್ಮ ಮೆಟ್ರೋ ಹಿಂದಿ ಬೇಡ ಅಭಿಯಾನದ ವೇಳೆ, ಕನ್ನಡ ಇದೆಯಲ್ಲ, ಹಿಂದಿಯಿದ್ದರೇನು ಎಂದು ಎಷ್ಟೋ ಅಲ್ಟ್ರಾ ದೇಶ ಭಕ್ತರು ಮಾತನಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕನ್ನಡಿಗರಿಗಾಗಿ ಕೈಯೆತ್ತುವವರು ಯಾರು? ಕನ್ನಡಿಗರಿಗಾಗಿ ಕನ್ನಡಿಗರಲ್ಲದೆ ಹೋರಾಟ ಮಾಡುವವರು ಯಾರು?
ಫೇಸ್ ಬುಕ್ ನಲ್ಲಿ ಅರುಣ್ ಜಾವಗಲ್ ಅವರು, ಕನ್ನಡಿಗರಿಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಪೋಸ್ಟನ್ನು ಹಾಕಿದ್ದಾರೆ. ಅದಕ್ಕೆ ಭಾನು ಅನ್ನುವವರು ಹಾಕಿರುವ ಪ್ರತಿಕ್ರಿಯೆ ಕೆಳಗಿನಂತಿದೆ.
ಇದೇ ಸರ್ ಕನ್ನಡಿಗರ ಕರ್ಮ. ನಮಗೆ ಯೋಗ್ಯತೆ ಇಲ್ಲದ ಹಾಗೆ ತೋರಿಸಿ, ಉತರ ಭಾರತೀಯರಿಗೆ ಮಣೆ ಹಾಕುವ ಹುನ್ನಾರ. 2017ನಲ್ಲಿ ನಡೆದ cgl ssc ಎಕ್ಸಾಮ್ಸ್ ನಲ್ಲೂ ಇದೇ ಗೋಳು. ನಮ್ಮ ಬ್ಯಾಂಕ್ ಗಳಲ್ಲೂ ಇದೆ ಗೋಳು. ಕನ್ನಡಿಗರ ಗೋಳು ಕೇಳಲು ಒಬ್ಬ ರಾಜಕೀಯ ವ್ಯಕ್ತಿ ರೆಡಿ ಇಲ್ಲ. ನಾವು ಇಲ್ಲಿ ಹುಟ್ಟಿದ್ದೇ ತಪ್ಪು ಎನಿಸುವಷ್ಟು ಮಟ್ಟಿಗೆ ನಮನ್ನ ತುಳಿಯುತ್ತಿದ್ದಾರೆ. ನಮಗೆ ನ್ಯಾಯ ಯಾವತ್ತೂ ಸಿಗಲಿದೆ ಹೇಳಿ?












Click it and Unblock the Notifications