ಇದೇನಿದು ಕುಮಾರಸ್ವಾಮಿ ಹೇಳಿಕೆ: ಬದಲಾಯಿತೇ ರಾಜಕೀಯ ಲೆಕ್ಕಾಚಾರ?
Recommended Video
ರಾಜ್ಯದ 224 ಕ್ಷೇತ್ರಗಳಲ್ಲೂ ಸಂಚರಿಸಿ ಪಕ್ಷವನ್ನು ಬಲಪಡಿಸುತ್ತೇನೆಂದು ಹೇಳಿದ್ದ ಜೆಡಿಎಸ್ ವರಿಷ್ಠ ದೇವೇಗೌಡರ ಮಾತಿಗೆ, ಕುಮಾರಸ್ವಾಮಿ ಕೂಡಾ ಹೌದುಹೌದು ಅಂದಿದ್ದರು. ಆದರೆ, ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗುವ ಮುನ್ನವೇ ತಮ್ಮ ಮಾತಿನಿಂದ ಅಪ್ಪಮಕ್ಕಳು ಹಿಂದಕ್ಕೆ ಸರಿದಂತೆ ಕಾಣುತ್ತಿದೆ.
ಸ್ವಂತ ಶಕ್ತಿಯಿಂದಲೇ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ
ಕಳೆದ ಚುನಾವಣೆಯಲ್ಲಿ ನಾವು ಬಹಳಷ್ಟು ಪಾಠವನ್ನು ಕಲಿತಿದ್ದೇವೆ, ಎಲ್ಲಿ ಪಕ್ಷಕ್ಕೆ ನೆಲೆಯಿದೆಯೋ ಅಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡುವ ಮೂಲಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ (ಕೆಲವು ಜಿಲ್ಲೆಗಳಲ್ಲಿ) ಮತ್ತು ಕರಾವಳಿ ಭಾಗದಲ್ಲಿ ಯುದ್ದಕ್ಕೆ ಮುನ್ನವೇ ಜೆಡಿಎಸ್ ಶಸ್ತ್ರತ್ಯಾಗ ಮಾಡಿತೇ ಎನ್ನುವ ಸಂದೇಹ ಮೂಡಲಾರಂಭಿಸಿದೆ.
ಕಷ್ಟ-ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಕುಮಾರಣ್ಣನಿಗೆ ಪತ್ರ ಬರೆಯಿರಿ
ಮನೆಯಲ್ಲಿ ಕೂತರೂ ಅರವತ್ತು, ಎಪ್ಪತ್ತು ಸೀಟು ಗ್ಯಾರಂಟಿ ಅಂದಿರುವ ಕುಮಾರಸ್ವಾಮಿ, ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಉತ್ತಮ ಅವಕಾಶವಿದೆ, ಹಾಗಾಗಿ ಆ ಭಾಗದಲ್ಲಿ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿಯವರ ಈ ನಿರ್ಧಾರದಿಂದ, ಜೆಡಿಎಸ್ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಪರೋಕ್ಷವಾಗಿ ಅವರೇ ಒಪ್ಪಿಕೊಂಡಂತಾಗಿದೆ. ಹಳೇ ಮೈಸೂರು ಮತ್ತು ಮಧ್ಯ ಕರ್ನಾಟಕದ ಭಾಗದಲ್ಲಿ ಮಾತ್ರ ಜೆಡಿಎಸ್ ಗಮನ ನೀಡಲಿದೆ ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಹಳೇ ಮೈಸೂರು (ಎ ಕೆಟಗರಿ), ಉತ್ತರ ಕರ್ನಾಟಕ (ಬಿ ಕೆಟಗರಿ) ಮತ್ತು ಇತರ ಭಾಗಗಳನ್ನು ಸಿ ಕೆಟಗರಿಯೆಂದು ವಿಂಗಡಿಸಿದ್ದೇವೆ. ಎ ಕೆಟಗರಿಯಲ್ಲಿ 80 ಕ್ಷೇತ್ರಗಳು, ಬಿ ಕೆಟಗರಿಯಲ್ಲಿ 90 ಕ್ಷೇತ್ರಗಳು ಮತ್ತು ಸಿ ಕೆಟಗರಿಯಲ್ಲಿ 54 ಕ್ಷೇತ್ರಗಳೆಂದು ಗುರುತಿಸಲಾಗಿದೆ. ಹಾಗಾಗಿ 170 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದೆ ಓದಿ...
ಪಕ್ಷಕ್ಕೆ ಗೆಲುವು ತಂದುಕೊಡಬಹುದಾದ ಕ್ಷೇತ್ರಗಳು
ಕುಮಾರಸ್ವಾಮಿಯವರ ಲೆಕ್ಕಾಚಾರದಂತೆ ಪಕ್ಷಕ್ಕೆ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜ ನಗರ, ತುಮಕೂರು ಜಿಲ್ಲೆಗಳಲ್ಲಿ ಗೆಲ್ಲುವ ಅವಕಾಶ ಉತ್ತಮವಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿನ ಒಟ್ಟು ಅಸೆಂಬ್ಲಿ ಕ್ಷೇತ್ರಗಳು - 85.
ಕರಾವಳಿ, ಹೈದರಾಬಾದ್ ಕರ್ನಾಟಕ
ಇನ್ನು ಕರಾವಳಿ ಭಾಗದ ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಕ್ಷೇತ್ರಗಳನ್ನು ಕುಮಾರಸ್ವಾಮಿ ಸಿ ಕೆಟಗರಿಗೆ ಸೇರಿಸಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಗುಲ್ಬರ್ಗ ಜಿಲ್ಲೆಗಳ ಕೆಲವು ಕ್ಷೇತ್ರಗಳನ್ನೂ ಕುಮಾರಸ್ವಾಮಿ ಈ ಕೆಟಗರಿಗೆ ಸೇರಿಸಿರಬಹುದು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ
ಎ,ಬಿ ಮತ್ತು ಸಿ ಕೆಟಗರಿಯಲ್ಲಿ ಯಾವ್ಯಾವ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳನ್ನು ಸೇರಿಸಲಾಗಿದೆ ಎನ್ನುವ ಮಾಹಿತಿಯನ್ನು ಕುಮಾರಸ್ವಾಮಿ ನೀಡಿಲ್ಲದಿದ್ದರೂ, ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ (ಮುಂಬೈ ಕರ್ನಾಟಕದ ಜಿಲ್ಲೆಗಳು)
ಅಭ್ಯರ್ಥಿಗಳ ಹೊಂದಾಣಿಕೆಯ ಕೊರತೆ
ಅಭ್ಯರ್ಥಿಗಳ ಹೊಂದಾಣಿಕೆಯ ಕೊರತೆಯಿಂದಾಗಿ ಸುಮಾರು ಮೂವತ್ತು ಕ್ಷೇತ್ರಗಳನ್ನು ಕಳೆದ ಚುನಾವಣೆಯಲ್ಲಿ ಸೋಲುವಂತಾಯಿತು ಎಂದಿರುವ ಕುಮಾರಸ್ವಾಮಿ, ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ (ದಾವಣಗೆರೆ, ಚಿತ್ರದುರ್ಗ) ಮತ್ತು ಮಲೆನಾಡು (ಶಿವಮೊಗ್ಗ, ಚಿಕ್ಕಮಗಳೂರು) ಮತ್ತು ಕೊಡಗು ಜಿಲ್ಲೆಗಳಲ್ಲಿನ ಕ್ಷೇತ್ರಗಳನ್ನು ಬಿ ಕೆಟಗರಿಗೆ ಸೇರಿಸಿರುವ ಸಾಧ್ಯತೆಯಿದೆ.
ಜೆಡಿಎಸ್ ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ
ಬಿ ಕೆಟಗರಿಯಲ್ಲಿನ ಸುಮಾರು ತೊಂಬತ್ತು ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ, ವ್ಯವಸ್ಥಿತ ಪ್ರಚಾರದಿಂದ ಮತ್ತು ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜಯ ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನು ಇಟ್ಟುಕೊಂಡಿದ್ದೇವೆ. ಇನ್ನು ಸಿ ಕೆಟಗರಿಯ ಸುಮಾರು 55 ಕ್ಷೇತ್ರಗಳಲ್ಲಿ ನಾವು ಜಯಗಳಿಸುವ ಸಾಧ್ಯತೆಯಿಲ್ಲ. ಅಲ್ಲಿ ಅಭ್ಯರ್ಥಿಯನ್ನು ಕಣಕ್ಕಿಸದೇ ಇರುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎನ್ನುವ ಮೂಲಕ, ರಾಜ್ಯದ ಕೆಲವು ಭಾಗಗಳಲ್ಲಿ ಜೆಡಿಎಸ್ ಚುನಾವಣೆಗೂ ಮುನ್ನವೇ ಶಸ್ತ್ರತ್ಯಾಗ ಮಾಡಿದಂತಾಗಿದೆ.