ಗೌಡ್ರ ರಾಜಕೀಯ ದಾಳಕ್ಕೆ ತತ್ತರಿಸಿದ ಸಪ್ತ ಬಂಡಾಯ ಶಾಸಕರು
ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ 7ಬಂಡಾಯ ಶಾಸಕರ ವಿರುದ್ದ ಜೆಡಿಎಸ್ ವರಿಷ್ಠ ದೇವೇಗೌಡ ಅಸಾಧಾರಣ ರಾಜಕೀಯ ತಂತ್ರಗಾರಿಕೆ?
ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದ ನಂತರ 'ಶ್ರೀಮಂತ' ಬೆಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಕಸರತ್ತು ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ವೇಳೆ, ಆರ್ ಅಶೋಕ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, 'ದೇವೇಗೌಡ್ರ ಮುಂದೆ ರಾಜಕೀಯ ಮಾಡೋಕೆ ಆಗುತ್ತಾ' ಎನ್ನುವ ಕಿವಿಮಾತನ್ನು ಹೇಳಿದ್ರಂತೆ.
ತನ್ನ ಕುಮಾರನ ಮೇಲೆ ಮುನಿಸಿಕೊಂಡು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಏಳು ಬಂಡಾಯ ಶಾಸಕರ ವಿರುದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅಸಾಧಾರಣ ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.[ಮೋದಿ ಸರಕಾರಕ್ಕೆ 3ವರ್ಷ: ಗೌಡ್ರು, ಕುಮಾರಣ್ಣ ನೀಡಿದ ಸರ್ಟಿಫಿಕೇಟ್]
ಒಂದು ಕಾಲದಲ್ಲಿ ಕುಮಾರಸ್ವಾಮಿ ಜೊತೆ ಚಡ್ಡಿದೋಸ್ತ್ ನಂತಿದ್ದ ಚೆಲುವರಾಯಸ್ವಾಮಿ, ಬಾಲಕೃಷ್ಣ ಮತ್ತು ಜಮೀರ್ ಸೇರಿದಂತೆ ಎಲ್ಲಾ ಬಂಡಾಯ ಮುಖಂಡರು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದು, ಯಾವ ಬಂಡಾಯ ಮುಖಂಡರಿಗೂ ಮುಂದಿನ ಚುನಾವಣೆಯಲಿ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದಂತೆ, ಗೌಡ್ರು ರಾಜಕೀಯ ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಅಂದರೆ ನಾಲ್ಕು ವರ್ಷಗಳ ಕೆಳಗೆ ಗೌಡ್ರು ಮತ್ತು ಸಿದ್ದು ನಡುವಿನ ಹಳಸಿದ್ದ ಸಂಬಂಧ, ನಂತರದ ದಿನಗಳಲ್ಲಿ ಸುಧಾರಿಸುತ್ತಾ ಬರುತ್ತಿರುವುದು, ಪ್ರಮುಖವಾಗಿ ಜೆಡಿಎಸ್ ಬಂಡಾಯ ಶಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.[ಹುಬ್ಬಳ್ಳಿಯಲ್ಲಿ ಮನೆ ಮಾಡಿದ ಎಚ್ಡಿಕೆ, ಧಾರವಾಡದಿಂದ ಸ್ಪರ್ಧೆ?]
ಇತ್ತೀಚೆಗೆ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸದೇ ಇದ್ದಾಗಲೇ, ಬಂಡಾಯ ಶಾಸಕರಿಗೆ ದೇವೇಗೌಡರಿಗೆ ಮುಂದಿನ ರಾಜಕೀಯ ತಂತ್ರಗಾರಿಕೆಯ ವಾಸನೆ ಅರಿವಾಗದೇ ಇರದು. ಮುಂದೆ ಓದಿ
ಅಸೆಂಬ್ಲಿ ಚುನಾವಣೆಗಾಗಿ ಗೌಡ್ರ ತಂತ್ರಗಾರಿಕೆ
ಜಾತ್ಯಾತೀತ ಮತಗಳು ಹರಿದುಹಂಚಿ ಹೋಗಬಾರದು ಎನ್ನುವುದು ಜೆಡಿಎಸ್ಸಿನ ಮೇಲ್ನೋಟದ ಸತ್ಯವಾಗಿದ್ದರೂ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ದೇವೇಗೌಡ್ರು, ಬಂಡಾಯ ಶಾಸಕರ ವಿರುದ್ದ ಗಟ್ಟಿ ನಿಲುವು ತಾಳಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯ ತ್ರಿಶಂಕು?
ಮುಂಬರುವ ಚುನಾವಣೆಯಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು, ಬಂಡಾಯ ಜೆಡಿಎಸ್ ಶಾಸಕರ ರಾಜಕೀಯ ಭವಿಷ್ಯವನ್ನು ತ್ರಿಶಂಕು ಮಾಡುವ ಮಾಸ್ಟರ್ ಪ್ಲಾನ್ ಸಿದ್ದವಾಗುತ್ತಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.[ಕುಮಾರಸ್ವಾಮಿಗೆ ಹೆಚ್ಚಾದ ಆತ್ಮರತಿ: ಬಿಜೆಪಿ ನಾಯಕಿ ಲೇವಡಿ]
ಮೇಲ್ಮನೆ ಸಭಾಪತಿ ವಿರುದ್ದ ಅವಿಶ್ವಾಸ ಗೊತ್ತುವಳಿ
ಇದಕ್ಕೆಲ್ಲಾ ಪೂರಕ ಎನ್ನುವಂತೆ ರಾಜ್ಯ ಮೇಲ್ಮನೆಯಲ್ಲಿ ಹಾಲೀ ಸಭಾಪತಿ ಡಿ ಎಚ್ ಶಂಕರಮೂರ್ತಿಯವರನ್ನು ಕೆಳಗಿಳಿಸಲು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನೇರ ಸಿದ್ದರಾಮಯ್ಯ ಆಖಾಡಕ್ಕಿಳಿದಿದ್ದಾರೆ ಎನ್ನುವ ಮಾತಿದೆ. ಜೂನ್ ಐದರಿಂದ ಆರಂಭವಾಗಲಿರುವ ಅಧಿವೇಶನದ ವೇಳೆ ಶಂಕರಮೂರ್ತಿಯವರ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಲಿದೆ.
ಬಂಡಾಯ ಶಾಸಕರಿಗೆ ಟಿಕೆಟ್ ನೀಡಬಾರದು
ಮೇಲ್ಮನೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದು, ಇದಕ್ಕೆ ತನ್ನ ಪಕ್ಷದ ಬಂಡಾಯ ಶಾಸಕರಿಗೆ ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎನ್ನುವ ಒಳಒಪ್ಪಂದ ನಡೆದಿದೆ ಎನ್ನುವ ಮಾಹಿತಿಯಿದೆ. ಈ ಹಿಂದೆ ನಡೆದ ಚುನಾವಣೆಯಲ್ಲಿ ಅಡ್ದಮತದಾನ ಮಾಡಿದ ಏಳು ಶಾಸಕರಿಗೆ ಟಿಕೆಟ್ ನೀಡಬಾರದು ಎನ್ನುವ ಷರತ್ತನ್ನು ದೇವೇಗೌಡ್ರು ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಗೌಡ್ರ ತಂತ್ರಗಾರಿಕೆಯ ಸುಳಿವು
ದೇವೇಗೌಡರ ತಂತ್ರಗಾರಿಕೆಯ ಸುಳಿವು ಪಡೆದಿರುವ ಬಾಲಕೃಷ್ಣ ಮತ್ತು ಚೆಲುವರಾಯಸ್ವಾಮಿ, ಬಿಜೆಪಿಯತ್ತ ಮುಖಮಾಡುವ ಸಾಧ್ಯತೆಯಿದೆ. ಇದಕ್ಕೆ ಪೂರಕ ಎನ್ನುವಂತೆ ಆರ್ ಅಶೋಕ್ ಜೊತೆ ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎನ್ನುವ ಮಾಹಿತಿಯಿದೆ. ಒಂದು ವೇಳೆ ಬಿಜೆಪಿಯಿಂದ ಅಥವಾ ಸ್ವತಂತ್ರವಾಗಿ ಏಳು ಬಂಡಾಯ ಶಾಸಕರು ಸ್ಪರ್ಧಿಸಿದರೂ ಪ್ರಭಲ ಪೈಪೋಟಿ ನೀಡಿ ಇವರನ್ನು ಸೋಲಿಸುವ ಗುರಿಯನ್ನು ಜೆಡಿಎಸ್ ಹೊಂದಿರುವುದಂತೂ ನಿಶ್ಚಿತ.