ಮನಸ್ಸಿಗೆ ನೋವಾಗಿದ್ದರಿಂದ ರಾಹುಲ್ ರಾಜೀನಾಮೆ ನೀಡಿರಬಹುದು: ದೇವೇಗೌಡ
ಬೆಂಗಳೂರು, ಜುಲೈ 3: ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಯುಪಿಎ ಮೈತ್ರಿಕೂಟದ ಇತರ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಾಹುಲ್ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡುತ್ತಾ ಜೆಡಿಎಸ್ ವರಿಷ್ಠ ದೇವೇಗೌಡ್ರು, ರಾಹುಲ್ ಅವರಲ್ಲಿ ಹೋರಾಟದ ಮನೋಭಾವವಿತ್ತು. ಮೋದಿಗಿಂತ ಹೆಚ್ಚು ಪ್ರಚಾರವನ್ನು ಅವರು ಕಳೆದ ಚುನಾವಣೆಯಲ್ಲಿ ಮಾಡಿದ್ದರು ಎಂದಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದ್ದು, ಖುದ್ದು ಅಮೇಥಿಯಲ್ಲಿ ಸೋಲು ಅನುಭವಿಸಿದ್ದರಿಂದ ಅವರಿಗೆ ಮನಸ್ಸಿಗೆ ನೋವಾಗಿರಬಹುದು. ಹಾಗಾಗಿ, ಅವರು ರಾಜೀನಾಮೆ ನೀಡಿದ್ದರೂ ನೀಡಿರಬಹುದು ಎಂದು ಗೌಡ್ರು, ರಾಹುಲ್ ರಾಜೀನಾಮೆಯನ್ನು ವ್ಯಾಖ್ಯಾನಿಸಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆ, ಮೋದಿ ವರ್ಚಸ್ಸು ಕಮ್ಮಿಯಾಗಿರುವುದು ಅತ್ಯಂತ ಸ್ಪಷ್ಟವಾಗಿತ್ತು. ರಾಷ್ಟ್ರೀಯತೆಯ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಚುನಾವಣೆ ಎದುರಿಸಿದರು. ಮಾಧ್ಯಮದವರು ಅದನ್ನೇ ಹೈಲೆಟ್ ಮಾಡಿದರು ಎಂದು ಗೌಡ್ರು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ, ಹಲವು ವಿಷಯಗಳ ಬಗ್ಗೆ ರಾಹುಲ್ ಮಾತನಾಡಿದ್ದರು. ಖಂಡಿತವಾಗಿಯೂ ಅವರಲ್ಲಿ ಹೋರಾಟದ ಮನೋಭಾವವಿದೆ ಎಂದು ಗೌಡ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಇನ್ನೂ ಯುವಕರಿದ್ದಾರೆ. ಅವರ ರಾಜೀನಾಮೆಯ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಕಾಂಗ್ರೆಸ್ಸಿನ ಎಲ್ಲಾ ಹಿರಿಯ ಮುಖಂಡರು ಈ ಬಗ್ಗೆ ನಿರ್ಧರಿಸಿದರೆ ಒಳ್ಳೆಯದು ಎಂದು ಗೌಡ್ರು ಹೇಳಿದ್ದಾರೆ.












Click it and Unblock the Notifications