ಅತಂತ್ರ ಫಲಿತಾಂಶ ಬಂದರೆ, ಪಕ್ಷದ ನಿಲುವೇನು? ಎಚ್ಡಿಕೆ ಸ್ಪಷ್ಟನೆ
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಜೆಡಿಎಸ್ ಪಕ್ಷ ನಿರ್ಣಾಯಕವಾಗಲಿದೆಯಾ - ಕುಮಾರಸ್ವಾಮಿ ಸ್ಪಷ್ಟನೆ.
ಬೆಂಗಳೂರು, ಮೇ 22: ಒಂದು ವೇಳೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಜೆಡಿಎಸ್ ಪಕ್ಷ ನಿರ್ಣಾಯಕವಾಗಲಿದೆಯಾ?
ಟ್ವೆಂಟಿ ಟ್ವೆಂಟಿ ಸಹವಾಸ ಸಾಕು, ವಚನಭ್ರಷ್ಟ ಎನ್ನುವ ಹೆಸರು ಯಾಕೆ ಬೇಕು ಎಂದು ನಿರ್ಧರಿಸಿದಂತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.[ಎಚ್ಡಿಕೆ ವಿರುದ್ಧ ಸಾಕ್ಷಿ ಒದಗಿಸಲು ಕಾಲಾವಕಾಶ ಕೇಳಿದ ಗಾಲಿ ರೆಡ್ಡಿ!]
ನಗರದ ಪ್ರೆಸ್ ಕ್ಲಬ್ ನಲ್ಲಿ ಭಾನುವಾರ (ಮೇ 21) ಅಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ, ಹಾಗಿದ್ದಾಗ್ಯೂ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೆ, ನಾವು ಮತ್ತೆ ಚುನಾವಣೆ ಎದುರಿಸುವುದೇ ನಮ್ಮ ಆಯ್ಕೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.[ಎಚ್ಡಿಕೆ ಗಣಿ ಲಂಚ ಸಿಡಿ ಪ್ರಕರಣಕ್ಕೆ ಮತ್ತೆ ಜೀವ, ಗಾಲಿ ರೆಡ್ಡಿಗೆ ನೋಟಿಸ್]
ಜೆಡಿಎಸ್ ಪಕ್ಷಕ್ಕೆ ನೆಟ್ಟಗೆ ಎಪ್ಪತ್ತು ಅಭ್ಯರ್ಥಿಗಳೇ ಇಲ್ಲ, ಇನ್ನು ಅವರು ಅಧಿಕಾರಕ್ಕೆ ಬರುವುದು ದೂರದ ಮಾತು ಎಂದು ಕೆಲವರು ಲೇವಡಿ ಮಾಡುತ್ತಿದ್ದಾರೆ. ಅವರಿಗೆಲ್ಲಾಇನ್ನು ಸ್ವಲ್ಪದಿನದಲ್ಲಿ ಉತ್ತರ ನೀಡುತ್ತೇವೆ. ರಾಜ್ಯದ ಎಲ್ಲಾ 224ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದೆ ಓದಿ..
ಜಂತಕಲ್ ಮೈನಿಂಗ್ ಕೇಸ್
ನಾನು ಹೋಗುತ್ತಿರುವ ಸ್ಪೀಡ್ ನೋಡಿ ಅದಕ್ಕೆ ಬ್ರೇಕ್ ಹಾಕಲು ಮುಖ್ಯಮಂತ್ರಿಗಳು ಜಂತಕಲ್ ಮೈನಿಂಗ್ ಕೇಸಿನಲ್ಲಿ ನನ್ನ ಹೆಸರು ಸಿಲುಕಿಸಲು ನೋಡುತ್ತಿದ್ದಾರೆ. ನಾನು ಇದಕ್ಕೆಲ್ಲಾ ತಲೆಕೆಡೆಸಿಕೊಳ್ಳುವವನಲ್ಲ. ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದೆ. ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ.
ರಾಜ್ಯ ಮತ್ತು ಕೇಂದ್ರದ ಗುಪ್ತಚರ ಸಂಸ್ಥೆಗಳ ವರದಿ
ರಾಜ್ಯ ಮತ್ತು ಕೇಂದ್ರದ ಗುಪ್ತಚರ ಸಂಸ್ಥೆಗಳ ವರದಿಯನ್ನು ನೋಡಿದ್ದೇನೆ. ಈಗಲೇ ಚುನಾವಣೆ ನಡೆದರೆ ಪಕ್ಷ ಅಧಿಕಾರಕ್ಕೆ ಬರಲು 20-25 ಸ್ಥಾನದ ಕೊರತೆಯಾಗಬಹುದು ಎಂದು ವರದಿ ಹೇಳಿದೆ. ಚುನಾವಣೆಗೆ ಇನ್ನೂ ಕಾಲಾವಕಾಶವಿರುವುದರಿಂದ, ಉತ್ತಮ ಪ್ರಚಾರ ನಡೆಸಿ ಮತದಾರರ ಮನಗೆಲ್ಲುವ ಕೆಲಸವನ್ನು ಮಾಡಲಿದ್ದೇವೆ - ಕುಮಾರಸ್ವಾಮಿ.
ಕಾರ್ಯಕರ್ತರು, ಸ್ಥಳೀಯ ಮುಖಂಡರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ
ವಿವಿಧ ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾರ್ಯಕರ್ತರು, ಸ್ಥಳೀಯ ಮುಖಂಡರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ವಿರುದ್ದ ಜನ ಬೇಸತ್ತು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಜನರು ಆಶೀರ್ವಾದಿಸಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದೇನೆಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ನನ್ನದೇ ಕನಸನ್ನು ಹೊಂದಿದ್ದೇನೆ
ಬೇರೆ ಪಕ್ಷದೊಂದಿಗೆ ಕೈಜೋಡಿಸಿ ಅಧಿಕಾರಕ್ಕೆ ಬಂದರೆ, ನಾವು ಬಯಸಿದಂತೆ ರಾಜ್ಯದ ಅಭಿವೃದ್ದಿ ಸಾಗುವುದಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ನನ್ನದೇ ಕನಸನ್ನು ಹೊಂದಿದ್ದೇನೆ. ಹಾಗಾಗಿ, ಅತಂತ್ರ ಫಲಿತಾಂಶ ಬಂದರೆ, ಮತ್ತೆ ಚುನಾವಣೆಗೆ ಹೋಗುವುದೇ ನಮ್ಮ ಆಯ್ಕೆ - ಕುಮಾರಸ್ವಾಮಿ.
ವಿಶ್ವನಾಥ್ ಗೆ ಸ್ವಾಗತ ಕೋರಿದ್ದೇವೆ
ಈಗಾಗಲೇ ನಾನು ಮತ್ತು ದೇವೇಗೌಡ್ರು ಸ್ಪಷ್ಟ ಪಡಿಸಿದಂತೆ, ಎಚ್ ವಿಶ್ವನಾಥ್ ಅವರು ಜೆಡಿಎಸ್ ಸೇರ್ಪಡೆಗೊಂಡರೆ ಅವರನ್ನು ನಾವು ಸ್ವಾಗತಿಸುತ್ತೇವೆ. ನಮಗೂ, ಹಿಂದುಳಿದ ನಾಯಕರೊಬ್ಬರ ಅವಶ್ಯಕತೆಯಿದೆ - ಕುಮಾರಸ್ವಾಮಿ.
{promotion-urls}