ಎಚ್ಡಿಕೆ ಗಣಿ ಲಂಚ ಸಿಡಿ ಪ್ರಕರಣಕ್ಕೆ ಮತ್ತೆ ಜೀವ, ಗಾಲಿ ರೆಡ್ಡಿಗೆ ನೋಟಿಸ್
2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರು ಗಣಿಧಣಿಗಳಿಂದ 150 ಕೋಟಿ ರು ಲಂಚ ಪಡೆದಿದ್ದರು ಎಂಬ ಆರೋಪ ಮಾಡಿದ್ದ ಅಂದಿನ ಬಿಜೆಪಿ ಎಂಎಲ್ ಸಿ ಜನಾರ್ದನ ರೆಡ್ಡಿಗೆ ಇಂದು ಎಸ್ ಐಟಿಯಿಂದ ನೋಟಿಸ್ ಜಾರಿಯಾಗಿದೆ.
ಬೆಂಗಳೂರು, ಮೇ 18: ಚಿತ್ರದುರ್ಗ ಜಿಲ್ಲೆಯ ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ತಲೆ ಮೇಲೆ ಹಳೆ ಕೇಸೊಂದು ಧುತ್ತೆಂದು ಬೀಳುವ ಲಕ್ಷಣಗಳು ಕಂಡು ಬಂದಿವೆ.
2006ರ ಗಣಿಲಂಚ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಎಂಎಲ್ ಸಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಾಕ್ಷ್ಯ ಒದಗಿಸುವಂತೆ ಎಸ್ ಐಟಿ ನೋಟಿಸ್ ನೀಡಿದೆ.
2006ರಲ್ಲಿ ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅಂದಿನ ಬಿಜೆಪಿ ಎಂಎಲ್ಸಿ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಗುರುತರ ಆರೋಪ ಮಾಡಿದ್ದರು. ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಕಂಡು ಕೇಳರಿಯದ ಸಿಡಿ ರಿಲೀಸ್ ಕಾರ್ಯಕ್ರಮ ಅಂದು ಟುಸ್ ಆಗಿತ್ತು.
ಆರೋಪವೇನು?: ಬಳ್ಳಾರಿ ಗಣಿ ಉದ್ಯಮಿಗಳಿಂದ ಮುಖ್ಯಮಂತ್ರಿ(2006ರಲ್ಲಿ ಎಂದು ಓದಿಕೊಳ್ಳಿ) ಕುಮಾರಸ್ವಾಮಿ, ಅರಣ್ಯ ಸಚಿವ ಸಿ ಚೆನ್ನಿಗಪ್ಪ ಹಾಗೂ ಗೃಹ ಸಚಿವ ಎಂ.ಪಿ ಪ್ರಕಾಶ್ ಅವರು 150 ಕೋಟಿ ರು ಲಂಚ ಪಡೆದಿದ್ದಾರೆ.
ಈ ಕುರಿತಂತೆ ನನ್ನ ಬಳಿ ಮಾತಕತೆ ನಡೆಸಿದ ವಿಡಿಯೋ ಸಿಡಿ ಲಭ್ಯವಿದೆ ಎಂದು ಎಂಎಲ್ಸಿ ಗಾಲಿ ರೆಡ್ಡಿ ಆರೋಪಿಸಿದ್ದರು. ಈ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ಸ್ಪಷ್ಟನೆ ಕೋರಿ, ಸಾಕ್ಷ್ಯ ಒದಗಿಸುವಂತೆ ಗಾಲಿ ರೆಡ್ಡಿಗೆ ನೋಟಿಸ್ ಜಾರಿ ಮಾಡಿದೆ.
ವಿಡಿಯೋ ಸಾಕ್ಷಿ ಎಲ್ಲಿ?
ಮೊಟ್ಟ ಮೊದಲ ಬಾರಿಗೆ ಈ ರೀತಿಯ ಒಂದು ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಪತ್ರಕರ್ತರು ಸಾಕ್ಷಿಯಾದರು. ಆದರೆ, ವಿಡಿಯೋ ಬಹುತೇಕ ಬ್ಲರ್ ಆಗಿದ್ದು ಯಾರಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ. ಗಣಿ ಉದ್ಯಮಿ, ರಫ್ತುದಾರರೊಬ್ಬರ ನಡುವೆ ಡೀಲ್ ಕುದುರಿಸುವ ಮಾತಕತೆ ಕೇಳಿ ಬಂದಿತು.
150 ಕೋಟಿ ರೂ. ಲಂಚ
ಬಳ್ಳಾರಿ ಜಿಲ್ಲೆಯ ಗಣಿ ಮಾಲೀಕರಿಂದ 150 ಕೋಟಿ ರೂ. ಲಂಚ ಸ್ವೀಕರಿಸಿದ ಆರೋಪ ಹೆಚ್ಡಿ ಕುಮಾರಸ್ವಾಮಿ ಮೇಲಿದೆ. ಈ ಆರೋಪ ಪ್ರಕರಣ ಸೇರಿದಂತೆ ಕುಮಾರಸ್ವಾಮಿ ವಿರುದ್ಧದ ಜಂತಕಲ್ ಅಕ್ರಮ ಗಣಿಗಾರಿಕೆ, ಲಕ್ಷ್ಮೀ ವೆಂಕಟೇಶ್ವರ ಗಣಿ ಅವ್ಯವಹಾರ ಪ್ರಕರಣ ಮತ್ತು ಸಹೋದರ ಬಾಲಕೃಷ್ಣ ಹೆಸರಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಪ್ರಕರಣವನ್ನು ತನಿಖೆ ನಡೆಸಲು ಎಸ್ಐಟಿ ಮುಂದಾಗಿದೆ.
ಹೆಚ್ಚಿನ ಸಾಕ್ಷಿ ನೀಡುವೆ: ರೆಡ್ಡಿ
ಬ್ಲರ್ ವಿಡಿಯೋ ತೋರಿಸಿ ಹೆಚ್ಚಿನ ಸಾಕ್ಷಿ ನೀಡುವೆ ಎಂದಿದ್ದ ಗಾಲಿ ರೆಡ್ಡಿ, ಯಾವುದೇ ಸಾಕ್ಷಿ ನೀಡಲಿಲ್ಲ. ಆದರೆ, ಅಪಾರ ಪ್ರಮಾಣದ ಲಂಚದ ಹಣವನ್ನು ಎಚ್ಡಿಕೆ ಸೋದರ ಎಚ್ಡಿ ಬಾಲಕೃಷ್ಣ ಅವರ ಖಾತೆಗೆ ವರ್ಗಾಯಿಸಲಾಗಿದೆ. ಗೌಡರ ಕುಟುಂಬದ ಒಡೆತನದ ಬಿ ಎಸ್ ಕೆ ಟ್ರೇಡಿಂಗ್ ಕಂಪನಿ ಅಕೌಂಟ್ ಪರಿಶೀಲಿಸಿ ಎಂದು ರೆಡ್ಡಿ ಹೇಳಿದ್ದರು.
ಸಿಕ್ಕಿಬಿದ್ದ ಚೆನ್ನಿಗಪ್ಪ
ದೇವೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರ್ರೀಯ ಶಾಲೆ ನಿರ್ಮಿಸಿದ್ದ ಅಂದಿನ ಅರಣ್ಯ ಸಚಿವ ಸಿ ಚೆನ್ನಿಗಪ್ಪ ಅವರು ಲಂಚ ಸ್ವೀಕಾರದ ಬಗ್ಗೆ ಮಾತನಾಡುವ ವಿಡಿಯೋ ಸಿಕ್ಕಿತು. ಆದರೆ, 25 ಕೋಟಿ ರು ಲಂಚದ ಆರೋಪವನ್ನು ಎದುರಿಸಿದ ಚೆನ್ನಿಗಪ್ಪ, ಈ ಮೊತ್ತಕ್ಕೂ ದೇವೇಗೌಡರ ಕುಟುಂಬಕ್ಕೂ ಸಂಬಂಧವಿಲ್ಲ ಎಂದು ಚೆನ್ನಿಗಪ್ಪ ಹೇಳಿದರು.