2018ರಲ್ಲಿ ದೇವೇಗೌಡರ ನಿವಾಸದ ಮುಂದೆ ಜಮಾಯಿಸಿದ್ದು ಮರೆತಿರಾ ಎಂದು ಜೆಡಿಎಸ್ ಕೇಳಿದ್ದು ಯಾರಿಗೆ?
ಬೆಂಗಳೂರು, ಏಪ್ರಿಲ್. 26: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಇನ್ನೇನು ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಾಧ್ಯಮಗಳು ಕೂಡ ರಾಷ್ಟ್ರೀಯ ಪಕ್ಷಗಳ ನಾಯಕರನ್ನು ಸಂದರ್ಶನ ಮಾಡುತ್ತಿವೆ. ಈಗ ಇದೇ ವಿಷಯಕ್ಕೆ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳ ಮಾಧ್ಯಮಗಳ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಚುನಾವಣೆ ನಡೆಯುತ್ತಿರುವ ರಾಜ್ಯದಲ್ಲಿ ಮಾಧ್ಯಮಗಳ ಪಾತ್ರ ಅಪಾರವಾದದ್ದು, ಪ್ರಜಾಪ್ರಭುತ್ವದ ಹಬ್ಬಕ್ಕಾಗಿಯೇ ರಾಷ್ಟ್ರೀಯ ಮಾಧ್ಯಮಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲಸಿವೆ. ಆದರೆ, ಈ ರಾಷ್ಟ್ರೀಯ ಮಾಧ್ಯಮಗಳು ರೈತರ, ಕನ್ನಡಿಗರ ಅಸ್ಮಿತೆಯ ಪಕ್ಷವಾದ ಜೆಡಿಎಸ್ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ, ಕಡೆಗಣಿಸುತ್ತಿವೆ ಎಂದು ಕೆಂಡಕಾರಿದೆ.

ಇದರ ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಪ್ರಕಟವಾದ ಮೇಲೆ ಎಲ್ಲಾ ಮಾಧ್ಯಮಗಳು ಮಾಜಿ ಪ್ರಧಾನಿ ದೇವೇಗೌಡರ ನಿವಾಸ ಮುಂದೆ ನಿಂತು ಕಾಯುತ್ತಿದ್ದ ಘಟನೆಯನ್ನು ಜೆಡಿಎಸ್ ಮೆಲಕು ಹಾಕಿದೆ. ಈ ಬಾರಿಯೂ ಫಲಿತಾಂಶದ ನಂತರ ಜೆಡಿಎಸ್ ಶಕ್ತಿ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಅರಿವಾಗಲಿದೆ ಎಂದು ವಾಗ್ದಾಳಿ ನಡೆಸಿದೆ.
ದೆಹಲಿಯ ಇಂತಹ ರಾಜಕೀಯ ಕನ್ನಡಿಗರಿಗೆ ಹೊಸದಲ್ಲ. ಚುನಾವಣೆಯ ಫಲಿತಾಂಶದ ಬಳಿಕ ಜೆಡಿಎಸ್ ನ ಶಕ್ತಿ ಅರಿವಿಗೆ ಬರಬಹುದೇನೊ! ಕಾಟಾಚಾರಕ್ಕೂ ಪ್ರಾದೇಶಿಕ ಪಕ್ಷಗಳನ್ನು ಪರಿಗಣಿಸದ ಈ ಇಂಗ್ಲಿಷ್, ಹಿಂದಿ ಸುದ್ದಿ ಸಂಸ್ಥೆಗಳು 2018ರ ಚುನಾವಣಾ ಫಲಿತಾಂಶದ ನಂತರ ದೇವೇಗೌಡರ ಪದ್ಮನಾಭ ನಗರದ ನಿವಾಸದ ಮುಂದೆ ಜಮಾಯಿಸಿದ್ದ ಸಂಗತಿ ಜನತೆ ಇನ್ನೂ ಮರೆತಿಲ್ಲ!4/4
— Janata Dal Secular (@JanataDal_S) April 25, 2023
ದೇಶದ ಅನೇಕ ಹಿಂದಿ, ಇಂಗ್ಲಿಷ್ ಮಾಧ್ಯಮಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂದರ್ಶನಗಳನ್ನು ನಡೆಸಿವೆ. ಅದರೆ, ಜಾತ್ಯಾತೀತ ಜನತದಳದ ಬಗ್ಗೆ ಒಂದೂ ಕಾರ್ಯಕ್ರಮ ಮಾಡಿಲ್ಲ. ಇದಕ್ಕೆಲ್ಲಾ ಕನ್ನಡಿಗರ ಪಕ್ಷದ ಬಗ್ಗೆ ಇರುವ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದೆ.

"ದೇಶದ ಅನೇಕ ರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ರಾಜ್ಯ ಚುನಾವಣೆ ವರದಿ ಮಾಡಲು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಿಂದಲೂ ದೆಹಲಿಯ ಮಾಧ್ಯಮದವರಿಗೆ ಜೆಡಿಎಸ್ ಬಗ್ಗೆ ದಿವ್ಯ ನಿರ್ಲಕ್ಷ್ಯ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಚುನಾವಣಾ ಅಖಾಡದಲ್ಲಿವೆ ಎಂದು ಭಾವಿಸಿದ್ದಾರೆ" ಎಂದು ಕಿಡಿಕಾರಿದೆ.
"ರೈತರ, ಕನ್ನಡಿಗರ ಅಸ್ಮಿತೆಯ ಪಕ್ಷವಾದ ಜೆಡಿಎಸ್ ಎಂದರೆ ಈ ದೆಹಲಿ ಮಾಧ್ಯಮಗಳಿಗೆ ಒಳಗೊಳಗೆ ಅಸಮಾಧಾನ. ಅದೇ ಕಾರಣಕ್ಕೆ ಸಾವಿರಾರು ಕಿಲೋಮೀಟರ್ ಸಂಚರಿಸಿ ಪಂಚರತ್ನ ಕಾರ್ಯಕ್ರಮ ಮಾಡಿದರೂ ಕನಿಷ್ಠ ಆಸಕ್ತಿಗಾಗಿ ಅದರ ಬಗ್ಗೆ ವಿಶೇಷ ವರದಿ ಮಾಡಲಿಲ್ಲ. ಪಂಚರತ್ನ ಕಾರ್ಯಕ್ರಮದ ಮಹತ್ವ ಅರಿಯುವ ಕೆಲಸವನ್ನೂ ಮಾಡಲಿಲ್ಲ" ಎಂದು ಅಸಮಾಧಾನ ಹೊರಹಾಕಿದೆ.

"ಈಗ, ರಾಜ್ಯ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರನ್ನು ಮಾತ್ರ ಸಂದರ್ಶಿಸುವ, ವಿಶೇಷ ಕಾರ್ಯಕ್ರಮ ಮಾಡುವ ಮೂಲಕ 'ದೆಹಲಿ' ರಾಜಕೀಯ ಪ್ರದರ್ಶಿಸುತ್ತಿವೆ ಈ ಸುದ್ದಿ ಸಂಸ್ಥೆಗಳು. ರಾಷ್ಟ್ರೀಯ ಮಾಧ್ಯಮಗಳಿಗೆ ರಾಷ್ಟ್ರೀಯ ಪಕ್ಷಗಳಷ್ಟೇ ಕಾಣಿಸುತ್ತದೆ!. ದೇವೇಗೌಡರನ್ನು ಕಡೆಗಣಿಸಿದಂತೆ, ಜೆಡಿಎಸ್ ಪಕ್ಷದ ಶಕ್ತಿ ನಿರಾಕರಿಸುತ್ತಿದ್ದಾರೆ" ಎಂದು ಆರೋಪಿಸಿದೆ.
"ದೆಹಲಿಯ ಇಂತಹ ರಾಜಕೀಯ ಕನ್ನಡಿಗರಿಗೆ ಹೊಸದಲ್ಲ. ಚುನಾವಣೆಯ ಫಲಿತಾಂಶದ ಬಳಿಕ ಜೆಡಿಎಸ್ ನ ಶಕ್ತಿ ಅರಿವಿಗೆ ಬರಬಹುದೇನೊ! ಕಾಟಾಚಾರಕ್ಕೂ ಪ್ರಾದೇಶಿಕ ಪಕ್ಷಗಳನ್ನು ಪರಿಗಣಿಸದ ಈ ಇಂಗ್ಲಿಷ್, ಹಿಂದಿ ಸುದ್ದಿ ಸಂಸ್ಥೆಗಳು 2018ರ ಚುನಾವಣಾ ಫಲಿತಾಂಶದ ನಂತರ ದೇವೇಗೌಡರ ಪದ್ಮನಾಭ ನಗರದ ನಿವಾಸದ ಮುಂದೆ ಜಮಾಯಿಸಿದ್ದ ಸಂಗತಿ ಜನತೆ ಇನ್ನೂ ಮರೆತಿಲ್ಲ!" ಎಂದು ಮಾಧ್ಯಮಗಳ ಬಗ್ಗೆ ವ್ಯಂಗ್ಯವಾಡಿದೆ.
ಕಳೆದ 2018ರ ಚುನಾವಣೆಯ ಫಲಿತಾಂಶದ ನಂತರ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದ ಜೆಡಿಎಸ್ ಬಗ್ಗೆ ಎಲ್ಲಾ ಮಾಧ್ಯಮಗಳು ಸಾಲು ಸಾಲು ವರದಿ ಮಾಡಿದ್ದವು. ಜೆಡಿಎಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡರ ನಿವಾಸದ ಮುಂದ ಠಿಕಾಣಿ ಹೂಡಿದ್ದರು. ಈ ಬಾರಿಯೂ ಹಲವು ಸಮೀಕ್ಷೆಗಳು ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಬೆನ್ನಲ್ಲೇ ರಾಷ್ಟ್ರೀಯ ಮಾಧ್ಯಮಗಳ ಮೇಲೆ ಪಕ್ಷ ಕಿಡಿಕಾರಿದೆ.












Click it and Unblock the Notifications