'ಮೋದಿ ಮೋದಿ ಎಂದು ಬರುವವರ ದವಡೆಗೆ ಎತ್ತಿ ಹೊಡೆಯಬೇಕು'
ಹಾಸನ, ಮಾರ್ಚ್ 24 : ಹಾಸನ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಶಾಸಕರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಬಿಜೆಪಿ ಹೇಳಿದೆ.
ಅರಸೀಕೆರೆಯಲ್ಲಿ ಭಾನುವಾರ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, 'ಮೋದಿ ಅವರು ದೊಡ್ಡ ರಾಜಕಾರಣಿ. ಆದರೆ, ಚುನಾವಣಾ ಪೂರ್ವದಲ್ಲಿ ರೈತರಿಗೆ ಕೊಟ್ಟ ವಾಗ್ದಾನ ಏನಾಯಿತು?' ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಮತ್ತು ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಶಾಸಕರು, 'ಮೋದಿ ಮೋದಿ ಎಂದು ಹೇಳತ್ತಾ ಬರುವವರ ದವಡೆಗೆಎತ್ತಿ ಹೊಡೆಯಬೇಕು' ಎಂದು ಹೇಳಿದರು. ಶಾಸಕರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ ಬಿಜೆಪಿ ಕೆ.ಎಂ.ಶಿವಲಿಂಗೇಗೌಡ ಹೇಳಿಕೆಯನ್ನು ಖಂಡಿಸಿದೆ. ಶಾಸಕರ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಕೆ.ಎಂ.ಶಿವಲಿಂಗೇಗೌಡ ಹೇಳಿದ್ದೇನು?
'ಮೋದಿ ಎಂದು ಹೇಳುತ್ತಾ ಬರುವ ಬಿಜೆಪಿಯವರ ಬಳಿ ನೀವೆಲ್ಲ ಪ್ರಶ್ನೆ ಮಾಡಬೇಕು. ಕಪ್ಪು ಹಣ ವಾಪಸ್ ತರುತ್ತೇನೆ ಎಂದರು. ಆ ಹಣ ಎಲ್ಲಿ ಹೋಯಿತು. ಬಡವರ ಖಾತೆಗೆ 15 ಲಕ್ಷ ರೂಪಾಯಿ ಬಂತಾ?. ಕಳ್ಳದುಡ್ಡು ತರಲು ನೋಟ್ ಬ್ಯಾನ್ ಮಾಡಿದರು. ಆದರಿಂದ ಏನಾದರೂ ಉಪಯೋಗವಾಗಿದೆಯೇ? ಎಂದು ಅವರ ಬಳಿ ಕೇಳಬೇಕು' ಎಂದು ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಜನರು ತಕ್ಕಪಾಠ ಕಲಿಸಬೇಕು
ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, 'ಜನಪ್ರತಿನಿಧಿಗಳು ಇಂತಹ ಹೇಳಿಕೆ ನೀಡುವುದು ಎಷ್ಟು ಶೋಭೆ ತರುತ್ತದೆ. ಸೊಕ್ಕು, ಧಿಮಾಕಿನಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಜನರು ಇಂಥಹವರಿಗೆ ತಕ್ಕಪಾಠ ಕಲಿಸಬೇಕು' ಎಂದು ಹೇಳಿದರು.
|
ಪ್ರಜಾಪ್ರಭುತ್ವದ ಕೊಲೆ
ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿಕೆಯನ್ನು ಕರ್ನಾಟಕ ಬಿಜೆಪಿ ಖಂಡನೆ ಮಾಡಿದೆ. ಶಾಸಕನನ್ನು ಗೂಂಡಾ ಎಂದು ಕರೆದಿದೆ. ಮೈತ್ರಿ ಸರ್ಕಾರದವರು ಬಹಿರಂಗವಾಗಿ ಪ್ರಧಾನಿಗಳನ್ನು ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಚುನಾವಣಾ ಆಯೋಗಕ್ಕೆ ದೂರು
ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಸುರೇಶ್ ಕುಮಾರ್ ಅವರು, 'ಎರಡೂ ಪಕ್ಷಗಳಿಗೆ ನರೇಂದ್ರ ಮೋದಿ ಅವರ ಮೇಲಿರುವ ಕೋಪ, ದ್ವೇಷ ಮಾತುಗಳ ಮೂಲಕ ಹೊರಬರುತ್ತಿದೆ. ಈ ಹೇಳಿಕೆ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಿದ್ದೇವೆ' ಎಂದು ಹೇಳಿದರು.












Click it and Unblock the Notifications