'ಜೆಡಿಎಸ್ ದೇವೇಗೌಡ ಕುಟುಂಬದ ಸ್ವಂತ ಬಸ್ ಇದ್ದಂತೆ'
ಕೊಪ್ಪಳ, ನ.7 : 'ಜೆಡಿಎಸ್ ಪಕ್ಷ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಮಕ್ಕಳ ಸ್ವಂತ ಬಸ್ ಇದ್ದ ಹಾಗೆ. ತಾವೆಲ್ಲ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೆ ಎಂದು' ಶಾಸಕ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ. ಜೆಡಿಎಸ್ ಪಕ್ಷದ ವಿದ್ಯಾಮಾನಗಳು ಬೇಸರ ಮೂಡಿಸಿವೆ, ಆದರೆ ಪಕ್ಷ ಬಿಡುವ ಬಗ್ಗೆ ಯಾವುದೇ ನಿರ್ಧಾರವನ್ನು ಸದ್ಯ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸದ್ಯಕ್ಕೆ ಜೆಡಿಎಸ್ ಪಕ್ಷ ಸಂಘಟನೆ ಕುರಿತು ಯಾವುದೇ ಚಿಂತನೆ ಮಾಡುತ್ತಿಲ್ಲ. ಅಭಿಮಾನಿಗಳು, ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆದು ಮುಂದಿನ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. [ಜೆಡಿಎಸ್ ಬಿಟ್ಟು ಹೋಗುವವರು ಸಂತೋಷದಿಂದ ಹೋಗಿ]

ಜೆಡಿಎಸ್ ಪಕ್ಷ ದೇವೇಗೌಡ ಮತ್ತು ಅವರ ಮಕ್ಕಳ ಸ್ವಂತ ಬಸ್ ಇದ್ದ ಹಾಗೆ. ತಾವೆಲ್ಲ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಂತೆ. ಜೆಡಿಎಸ್ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರೆ, ದೇವೇಗೌಡರು ಅವರನ್ನು ದೂರವಿಡುತ್ತಿದ್ದಾರೆ ಎಂದು ಆರೋಪಿಸಿದರು. [ಸೈಕಲ್ ಏರಲು ಧನಂಜಯ್ ಕುಮಾರ್ ತಯಾರಿ?]
ಪಕ್ಷ ತೊರೆಯುವ ನಾಯಕರು ಸಂತೋಷದಿಂದ ಹೋಗಬಹುದು ಎಂದು ದೇವೇಗೌಡರು ಹೇಳಿರುವ ಮಾತು ನೋವು ತಂದಿದೆ. ಸ್ವತಃ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ತಮಗಿಷ್ಟ ಬಂದವರನ್ನು ಭೇಟಿ ಮಾಡುತ್ತಾರೆ, ಇಂತಹ ತಾರತಮ್ಯ ನೀತಿಯನ್ನು ಮೊದಲು ಬಿಡಲಿ ಎಂದು ಅನ್ಸಾರಿ ಹೇಳಿದರು.
ಕುಮಾರಸ್ವಾಮಿ ಅವರ ಪರವಾಗಿ ಹಲವು ಬಾರಿ ಹೇಳಿಕೆ ನೀಡಿದ್ದೆ ನಿಜ, ಅವರು ಉತ್ತಮ ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿದ್ದೆ. ಈಗ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅನ್ಸಾರಿ ದೂರಿದರು.
ಉತ್ತಮ ಸಂಬಂಧವಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ. ಲೋಕಸಭೆ ಚುನಾವಣೆ ಸಮಯದಲ್ಲಿ ಅವರಿಗೆ ಕೊಟ್ಟ ಮಾತಿನಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದೇನೆ. ಆದ್ದರಿಂದ ಅವರು ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅನ್ಸಾರಿ ಅವರು ಹೇಳಿದ್ದು, ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಅಂದಹಾಗೆ ಹಳಿಯಾಳ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ನ ನಾಯಕ ಸುನೀಲ್ ವಿ.ಹೆಗಡೆ ಹಾಗೂ ಮಾಜಿ ಮೇಲ್ಮನೆ ಸದಸ್ಯ ವಿ.ಡಿ.ಹೆಗಡೆ ಅವರು ಬಿಜೆಪಿಗೆ ಗುರುವಾರ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಪ್ರಹ್ಲಾದ್ ಜೋಶಿ ಇಬ್ಬರು ನಾಯಕರನ್ನು ಬರಮಾಡಿಕೊಂಡಿದ್ದಾರೆ.












Click it and Unblock the Notifications