ಮಂಡ್ಯ : ಗೆಲುವಿಗೆ ಜೆಡಿಎಸ್ ತಂತ್ರ, ಎಚ್.ಡಿ.ರಮೇಶ್ ಉಸ್ತುವಾರಿ!
ಮಂಡ್ಯ, ಜನವರಿ 14 : ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಕಡಿಮೆಯಾಗುತ್ತಿದೆ. ವಿರೋಧಿಗಳು ಹೆಚ್ಚಾಗುತ್ತಿದ್ದಾರೆ, ಹೀಗಾಗಿ ಹೇಗಾದರು ಮಾಡಿ ಮತ್ತೆ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಲು ನಾಯಕರು ಮುಂದಾಗಿದ್ದಾರೆ.
ಕುಮಾರಪರ್ವ ಕಾರ್ಯಕ್ರಮದ ಮೂಲಕ ಮತ್ತೆ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದು ಮತ್ತು ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಸೇರಿದಂತೆ ಇತರೆ ನಾಯಕರಿಗೆ ಸೆಡ್ಡು ಹೊಡೆಯುವ ಯತ್ನವೂ ಪಕ್ಷದ ಕಡೆಯಿಂದ ನಡೆಯುತ್ತಿದೆ.
ಶನಿವಾರ ಮಂಡ್ಯದ ಕಾಳಿಕಾಂಭ ದೇವಸ್ಥಾನದ ಬಳಿ ಮಂಡ್ಯ ವಿಧಾನಸಭಾ ವ್ಯಾಪ್ತಿಯಲ್ಲಿ ಕುಮಾರಪರ್ವ ಕಾರ್ಯಕ್ರಮದ ಅಂಗವಾಗಿ ಬೈಕ್ ಜಾಥಾ ನಡೆಸಲಾಯಿತು. ದೇವೇಗೌಡರ ಪುತ್ರ ಡಾ.ಎಚ್.ಡಿ. ರಮೇಶ್ ಅವರು ಚಾಲನೆ ಜಾಥಾಕ್ಕೆ ಚಾಲನೆ ನೀಡಿದರು. ಇದುವರೆಗೆ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ರಮೇಶ್ ಇದೀಗ ಕಾಣಿಸಿಕೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಈ ಬಾರಿ ಜೆಡಿಎಸ್ ಪಕ್ಷವನ್ನು ಹೇಗಾದರೂ ಮಾಡಿ ಅಧಿಕಾರಕ್ಕೆ ತರಲೇಬೇಕು ಎಂದು ದೇವೇಗೌಡರು ಹಠ ತೊಟ್ಟಿದ್ದಾರೆ. ಆದ್ದರಿಂದ, ದೇವೇಗೌಡರು, ಎಚ್.ಡಿ.ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಎಲ್ಲರೂ ಚುನಾವಣಾ ಕಣಕ್ಕಿಳಿದಿದ್ದಾರೆ.
ಹಾಗೆ ನೋಡಿದರೆ ಮಂಡ್ಯ ಜಿಲ್ಲೆ ಜೆಡಿಎಸ್ನ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಎರಡು ಪಕ್ಷಗಳು ಕೂಡ ಮಂಡ್ಯದಲ್ಲಿ ಗೆಲುವು ಸಾಧಿಸಲೇ ಬೇಕೆಂದು ಹೊರಟಿವೆ. ಹೀಗಾಗಿ ಜೆಡಿಎಸ್ ವಿರುದ್ಧ ರಾಜಕೀಯ ಪಿತೂರಿಗಳು ಹೆಚ್ಚಾಗುತ್ತಿದ್ದು, ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ.
ಕೆಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವೆಯೂ ಭಿನ್ನಾಭಿಪ್ರಾಯಗಳು ಎದ್ದು ಕಾಣುತ್ತಿದೆ. ಇದೆಲ್ಲವನ್ನೂ ಬಗೆಹರಿಸಿಕೊಂಡು ಪಕ್ಷ ಸಂಘಟನೆ ಹೇಗೆ ಮಾಡುತ್ತಾರೆ? ಎಂಬುದು ಎಲ್ಲರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಮಂಡ್ಯದತ್ತ ಹೆಚ್ಚಿನ ಒಲವು ತೋರುತ್ತಿರುವ ಜೆಡಿಎಸ್ನ ನಾಯಕರು ಗೆಲುವಿಗಾಗಿ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ? ಎಂಬುದನ್ನು ಮಾತ್ರ ಕಾಲವೇ ಹೇಳಬೇಕಾಗಿದೆ.












Click it and Unblock the Notifications