ಜನವರಿ 3ರಂದು ಜೆಡಿಎಸ್ ಮಹತ್ವದ ಸಭೆ, ಕಾಂಗ್ರೆಸ್ಗೆ ತಳ-ಮಳ
ಬೆಂಗಳೂರು, ಡಿಸೆಂಬರ್ 29: ಸಂಪುಟ ವಿಸ್ತರಣೆ ಬಳಿಕ ಜೆಡಿಎಸ್-ಕಾಂಗ್ರೆಸ್ ನಡುವೆ ಅಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವ ಬೆನ್ನಲ್ಲೆ ಜೆಡಿಎಸ್ ಪಕ್ಷವು ಪ್ರಮುಖ ಸಭೆಯೊಂದನ್ನು ನಡೆಸಲು ದಿನಾಂಕ ನಿಗದಿ ಮಾಡಿದೆ.
ಜನವರಿ 3 ರಂದು ಜೆಡಿಎಸ್ ಪಕ್ಷದ ಪ್ರಮುಖರ ಸಭೆ ನಿಗದಿ ಮಾಡಲಾಗಿದ್ದು, ಮೈತ್ರಿ ಸರ್ಕಾರದ ಬಗ್ಗೆ ಪ್ರಮುಖ ವಿಷಯಗಳು ಚರ್ಚೆ ಆಗಲಿವೆ. ಜೊತೆಗೆ ಲೋಕಸಭೆ ಚುನಾವಣೆ ಮೈತ್ರಿಯ ಬಗ್ಗೆಯೂ ಪ್ರಮುಖ ಚರ್ಚೆ ಆಗಲಿದೆ.
ಪಕ್ಷದ ವರಿಷ್ಠ ದೇವೇಗೌಡ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ರಾಜ್ಯಾಧ್ಯಕ್ಷ ವಿಶ್ವನಾಥ ಹಾಗೂ ಪಕ್ಷದ ಇತರ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರೇವಣ್ಣ, ಬಸವರಾಜ ಹೊರಟ್ಟಿ ಹಾಗೂ ಇನ್ನೂ ಕೆಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಬಗ್ಗೆ ಬಹಿರಂಗ ಆಕ್ಷೇಪ ಎತ್ತಿದ ಬೆನ್ನಲ್ಲೇ ಈ ಸಭೆ ನಡೆಯುತ್ತಿರುವುದು ಕಾಂಗ್ರೆಸ್ನಲ್ಲೂ ತಳ-ಮಳ ಹುಟ್ಟಿಸಿದೆ. ಸಿದ್ದರಾಮಯ್ಯ ಪ್ರಭಾವ ತಗ್ಗಿಸಲು ಒಳಯೋಜನೆ ರೂಪಿಸಲು ಈ ಸಭೆ ಕರೆಯಲಾಗುತ್ತಿದೆ ಎಂಬ ಸುದ್ದಿಯೂ ಇದೆ.

ನಿಗಮ ಮಂಡಳಿ ನೇಮಕದಲ್ಲಿ ಅಸಮಾಧಾನ
ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ನಡುವೆ ಸಣ್ಣ ಅಸಮಾಧಾನದ ಗೆರೆ ಮೂಡಿದ್ದು, ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಒಮ್ಮತ ಮೂಡಿಲ್ಲ, ಸಿದ್ದರಾಮಯ್ಯ ಅವರ ಪ್ರಭಾವ ಸಹ ಹೆಚ್ಚಾಗಿರುವುದು ಸಹ ಜೆಡಿಎಸ್ಗೆ ತಲೆನೋವು ತಂದಿದೆ ಹಾಗಾಗಿ ಈ ವಿಷಯಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಗುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ ಮೈತ್ರಿ ಚರ್ಚೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಮಾಡಲಾಗುತ್ತದೆ. ಸೀಟು ಹಂಚಿಕೆ, ಕ್ಷೇತ್ರಗಳ ಬಗ್ಗೆ ಸಭೆಯಲ್ಲಿ ಮಾತನಾಡಲಾಗುತ್ತದೆ.

ನಿಗಮ ಮಂಡಳಿಯಲ್ಲಿ ಅನ್ಯಾಯ
ನಿಗಮ ಮಂಡಳಿ ಸ್ಥಾನ ಹಂಚಿಕೆಯಲ್ಲಿ ಜೆಡಿಎಸ್ಗೆ ಅನ್ಯಾಯವಾಗಿದೆ ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯವಾಗಿ ಸಹ ಬಹುಮುಖ್ಯ ಚರ್ಚೆ ಆಗಲಿದೆ. ಅಲ್ಲದೆ ಜೆಡಿಎಸ್ ಬಳಿ ಮೂರು ಸಚಿವ ಖಾತೆ ಖಾಲಿ ಇದ್ದು, ಆ ಖಾತೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಜನವರಿ ಮೂರರಂದು ಸಭೆ
ಪ್ರಸ್ತುತ ರಾಜಕೀಯ ಸನ್ನಿವೇಶದಿಂದಾಗಿ ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಜನವರಿ ಮೂರರಂದು ಸಭೆಯು ನಗರದ ಖಾಸಗಿ ಹೊಟೆಲ್ನಲ್ಲಿ ನಡೆಯಲಿದೆ. ಕಳೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪಕ್ಷದ ಪ್ರತಿನಿಧಿಗಳು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ ಎಂದು ಜೆಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications