ಬೆಳಗಾವಿ ವಿವಾದದ ಹಿಂದೆ ರಾಜ್ಯ ಸರಕಾರದ ಕೈವಾಡ: ಎಚ್ಡಿಕೆ ಶಂಕೆ
ಚಿಕ್ಕಬಳ್ಳಾಪುರ, ನವೆಂಬರ್ 26: ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದದಲ್ಲಿ ಬಿಜೆಪಿಯ ಕೈವಾಡವಿದೆ ಎಂಬ ಶಂಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ನಡೆದ ಪಂಚರತ್ನಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಹರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದದ ಕಾವು ಹೆಚ್ಚಾಗಿದ್ದು, ಬೆಳಗಾವಿ ಗಡಿ ಭಾಗದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಹೆಚ್ಚಿದೆ. ಹೆಚ್ಚು ಸಕ್ಕರೆ ಕಾರ್ಖಾನೆಗಳು, ಸುವರ್ಣಸೌಧ, ನೀರಾವರಿ ಸೌಲಭ್ಯ ಕೊಟ್ಟಿದ್ದೇವೆ. ಶಿಕ್ಷಣ, ಭಾಷಾವಾರು ಸೌಲಭ್ಯದಲ್ಲಿ ಸ್ವಲ್ಪ ಸಮಸ್ಯೆ ಇರೋದು ನಿಜ. ಅಲ್ಲಿನ ಆರ್ಥಿಕ ಚಟುವಟಿಕೆಗಳನ್ನ ಮಹಾರಾಷ್ಟ್ರಕ್ಕೆ ಸೆಳೆಯಲು ಪ್ರಯತ್ನ. ಮಹಾರಾಷ್ಟ್ರದ ಧ್ವನಿಗೆ ಕರ್ನಾಟಕ ಬಿಜೆಪಿಯವರ ಕುಮ್ಮಕ್ಕು ಇದೆಯಾ ಎಂಬ ಅನುಮಾನ ಎಂದು ಹೇಳದರು.
ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿ
ಶಿವಸೇನೆ ಒಡೆದು ಬಿಜೆಪಿ ಜೊತೆ ಸೇರಿದ ಗುಂಪು ಗಡಿ ತಗಾದೆ ತೆಗೆದಿದೆ. ಎಂಟು ದಿನದ ಕೋಲಾರ ಚಿಕ್ಕಬಳ್ಳಾಪುರ ಪ್ರವಾಸದಲ್ಲಿ ತೆಲುಗು ಭಾಷಿಕರು, ಆಂದ್ರ ಪರವಾನಗಿ ವಾಹನಗಳನ್ನ ನೋಡಿದೆ. ಆನೆಕಲ್ ಭಾಗದಲ್ಲಿ ತಮಿಳುನಾಡು, ಮಂಗಳೂರು ಭಾಗದಲ್ಲಿ ಕೇರಳ ಗಡಿ ಇದೆ. ಆದರೆ ಇಲ್ಲೆಲ್ಲೂ ಗಡಿ ವಿವಾದ , ಅಶಾಂತಿ ಇಲ್ಲ. ಬೆಳಗಾವಿಯ ಬಗ್ಗೆ ಮಹಾರಾಷ್ಟ್ರ ಕಣ್ಣು ಯಾಕೆ ಎಂದು ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿ
ಶಿವರಾಜ್ ಪಾಟೀಲ್ ರನ್ನ ಗಡಿ ಆಯೋಗಕ್ಕೆ ನೇಮಕ ಮಾಡಿದ್ದಾರೆ. ಇವತ್ತು ಶರತ್ ಪವಾರ್ ಹೇಳಿಕೆಯನ್ನೂ ಗಮನಿಸಿದ್ದೇನೆ. ಬೆಳಗಾವಿ ಪಡೆದು ಬೇರೆ ಜಾಗ ಬಿಟ್ಟುಕೊಡ್ತೀವಿ ಎನ್ನುತ್ತಿದ್ದಾರೆ. ಪದೇ ಪದೇ ಯಾಕೆ ಕೆದಕುತ್ತಿದ್ದೀರಿ. ಬಿಜೆಪಿ ಸರಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತೆ. ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿ. ಹೊರನೋಟಕ್ಕೆ ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ. ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ ಎಂದು ಆರೋಪಿಸಿದರು.
25 ಸಂಸದರು ಅಮಿತ್ ಶಾ ಮೋದಿ ಮುಂದೆ ಮಾತನಾಡುವ ಶಕ್ತಿ ಇಲ್ಲ
ಇನ್ನೂ ಕೇಂದ್ರ ಸರಕಾರ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಜೋಡಣೆ ತೀರ್ಮಾನ ಮಾಡಿದೆ. ಎರಡೂ ನದಿಗಳ ಉಗಮಸ್ಥಾನ ಕರ್ನಾಟಕಕ್ಕೆ ಏನೂ ಹಂಚಿಕೆ ಮಾಡಿಲ್ಲ. ಈಗ ಮತ್ತೊಂದು ನ್ಯಾಯಾಧಿಕರಣ ಸ್ಥಾಪನೆ ಮಾಡಲು ಮುಂದಾಗಿದೆ. ನಿಮ್ಮ ಒಳ ಆಂತರಿಕ ವ್ಯವಹಾರದ ಮೂಲಕ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಬೇಡ. 25 ಸಂಸದರು ಅಮಿತ್ ಶಾ ಮೋದಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದು ಕುಟುಕಿದರು.
ಮಹಾರಾಷ್ಟ್ರದವರಿಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಈ ವಿಚಾರ ಬೇಕು. ಕರ್ನಾಟಕದಲ್ಲಿ ಮೂರುವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿಗೆ ಜನರ ಬಳಿ ಹೋಗಲು ವಿಷಯ ಸರಕು ಇಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ. ಯಾರೋ ಮಾಡಿದ ಕೆಲಸಗಳ ಬಗ್ಗೆ ಭಾಷಣ ಮಾಡಬಹುದು. ಜನರ ನೆಮ್ಮದಿ ಕೆಡಿಸಿ ಧರ್ಮದ ವಿಚಾರ ಇಟ್ಕೊಂಡು ಹೋಗ್ತೀರಾ. ಗೋಡಂಬಿ, ಬಾದಮಿ ಕೊಟ್ಟು ಕಳುಹಿಸೋಕೆ ಸರ್ವಪಕ್ಷ ಸಭೆಯನ್ನ ಯಾಕೆ ಕರೆಯುತ್ತೀರಿ. ಎರಡೂ ಕಡೆ ನಿಮ್ಮದೆ ಸರ್ಕಾರ, ಅಲ್ಲಿ ಮಾತನಾಡಿಕೊಳ್ಳಿ ಎಂದು ರಾಜ್ಯ ಸರ್ಕಾರ ವಿರುದ್ದ ಕಿಡಿಕಾರಿದರು.
ಇನ್ನೂ ಗಡಿ ವಿವಾದದ ವಿಚಾರವಾಗಿ ಮುಂದಿನ ವಾರ ಸರ್ವಪಕ್ಷ ಸಭೆ ಕರೆದಿರುವ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಕರೆದು ಏನು ಮಾಡುತ್ತೀರಿ. ಇದು ನಿಮ್ಮ ಜವಾಬ್ದಾರಿ, ಅಲ್ಲೂ ನಿಮ್ಮದೆ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಇದ್ದರೇನು, ಇಲ್ಲಿದ್ದರೇನು ಬೆಳಗಾವಿ. ನಾವೆಲ್ಲರೂ ಭಾರತೀಯರು ಎನ್ನುತ್ತೀರಾ ಅಲ್ವೆ ಎಂದು ಪ್ರಶ್ನಿಸಿದರು.
ಏಕರೂಪ ನಾಗರೀಕ ಸಂಹಿತೆ ಜಾರಿಗೆ ತರೋಕೆ ಹೊರಟಿದ್ದೀರಲ್ಲ ಇದನ್ನೂ ಹೇಳಿ. ಬೆಳಗಾವಿ ಅಲ್ಲಿದ್ದರೇನಿ ಇಲ್ಲಿದ್ದರೇನು ಎಂದು ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದರು.