ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ: ಕುಮಾರಸ್ವಾಮಿ ಕೊಟ್ಟರು ಅಪ್ಡೇಟ್
ಬೆಂಗಳೂರು, ಜನವರಿ 12: ಕರ್ನಾಟಕ ಜೆಡಿಎಸ್ ರಾಜ್ಯಾಧ್ಯಕ್ಷರು ಯಾರು?. 2024ರ ಲೋಕಸಭೆ ಚುನಾವಣೆ ಮುಗಿದು, ಎಚ್. ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಕೇಳಿ ಬರುತ್ತಿರುವ ಪ್ರಶ್ನೆ ಇದು. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಪಕ್ಷ ಮುಂದಾಗಿದೆ. ಸದ್ಯ ಮಂಡ್ಯ ಸಂಸದ, ಕೇಂದ್ರ ಸಚಿವರ ಎಚ್. ಡಿ. ಕುಮಾರಸ್ವಾಮಿ ಅವರೇ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಭಾನುವಾರ ಸಭೆ ನಡೆಯಿತು. ಸಭೆಯ ಬಳಿಕ ಎಚ್. ಡಿ. ಕುಮಾರಸ್ವಾಮಿ ಮುಂದಿನ ಅಧ್ಯಕ್ಷರ ಆಯ್ಕೆ, ಸಭೆಯ ತೀರ್ಮಾನಗಳ ಕುರಿತು ಮಾತನಾಡಿದರು.

ಕುಮಾರಸ್ವಾಮಿ ಹೇಳಿದ್ದೇನು?; ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, "ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯಬೇಕಿದೆ ಮತ್ತು ಪಕ್ಷದಲ್ಲಿ ಬೂತ್ ಮಟ್ಟದ ಸದಸ್ಯತ್ವ ನೋಂದಣಿ ಕಾರ್ಯಕ್ರಮಗಳು ನಡೆಯಬೇಕಿದೆ" ಎಂದು ಹೇಳಿದರು.
"ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ನಡೆಯಲಿದೆ. ಅಲ್ಲದೇ ಆನ್ಲೈನ್ ಮೂಲಕವೂ ಪಕ್ಷದ ಸದಸ್ಯತ್ವ ನೋಂದಣಿ ಮಾಡಲು ಹೊಸ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತದೆ. ಇದರ ಮೂಲಕ ಪರಿಣಾಮಕಾರಿಯಾಗಿ ಸದಸ್ಯತ್ವ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.
"ಬರುವ ಏಪ್ರಿಲ್ ತಿಂಗಳ ಒಳಗೆ ರಾಜ್ಯದ ಘಟಕದ ಅಧ್ಯಕ್ಷರ ನೇಮಕವನ್ನು ಚುನಾವಣೆ ಮೂಲಕವೇ ಮಾಡುವುದು. ಅದರ ಜೊತೆಗೆ ತಾಲೂಕು, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಪದಾಧಿಕಾರಿಗಳ ನೇಮಕವನ್ನು ಆಯಾ ಹಂತದಲ್ಲಿಯೇ ಮಾಡಲು ತೀರ್ಮಾನ ಮಾಡಲಾಗಿದೆ" ಎಂದರು.
"ಇವತ್ತು ಪಕ್ಷದ ಎಲ್ಲಾ ಪ್ರಮುಖರಿಗೆ ಅತ್ಯಂತ ಕಠಿಣವಾದ ರೀತಿಯಲ್ಲಿ ಹೇಳಿದ್ದೇನೆ. ಪಕ್ಷದ ಸಂಘಟನೆ ಆಗಬೇಕು ಎಂದು ನಿಮ್ಮೆಲ್ಲರ ಆಸೆ ಇದ್ದರೆ ಬೂತ್ ಮಟ್ಟದಲ್ಲಿ ಸಂಘಟನೆಗೆ ತಮ್ಮೆಲ್ಲರ ಶ್ರಮ ಅತ್ಯಂತ ಅವಶ್ಯಕವಾಗಿದೆ, ಅನಿವಾರ್ಯತೆ ಇದೆ. ಯಾರೂ ಪ್ರಮಾಣಿಕವಾಗಿ ಸಂಘಟನೆಗೆ ದುಡಿಮೆ ಮಾಡುತ್ತಾರೋ ಅಂತಹವರನ್ನು ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ ಎಂದು ಹೇಳಿದ್ದೇವೆ" ಎಂದು ಕುಮಾರಸ್ವಾಮಿ ಹೇಳಿದರು.
ಮಂಡ್ಯ ಕ್ಷೇತ್ರದ ಕೆಲಸ, ಪಕ್ಷದ ಕೆಲಸ, ಸಚಿವ ಸ್ಥಾನ ನಿಭಾಯಿಸುವ ಕುರಿತು ಮಾತನಾಡಿದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ, "ನಾನು ನನ್ನದೇ ಆದ ವೇಳಾಪಟ್ಟಿ ಹಾಕಿಕೊಂಡು ಎಲ್ಲಾ ಕಾರ್ಯಗಳನ್ನು ಮಾಡುತ್ತೇನೆ" ಎಂದು ತಿಳಿಸಿದರು.
"ವಾರದ 4 ದಿನಗಳ ಕಾಲ ನವದೆಹಲಿಯಲ್ಲಿ ಕಛೇರಿ ಕೆಲಸಗಳಲ್ಲಿ ತೊಡಗಿರುತ್ತೇನೆ. ಒಂದು ಅಥವಾ ಎರಡು ದಿನ ದೇಶದ ಕೈಗಾರಿಕಾ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಪಡೆಯುತ್ತೇನೆ" ಎಂದರು.
"ಉಳಿದ ಸಮಯದಲ್ಲಿ ಇತರ ಕೆಲಸಗಳ ಬಗ್ಗೆ ಗಮನ ಕೊಡುತ್ತೇನೆ. ಪಕ್ಷ ಸಂಘಟನೆಗೆ, ಮಂಡ್ಯ ಕ್ಷೇತ್ರಕ್ಕೂ ಗಮನ ಕೊಡುತ್ತೇನೆ. ನನ್ನ ಪಕ್ಷದ ಶಾಸಕರ ಸೆಳೆಯುವ ಕೆಲಸ ಎಲ್ಲೂ ಆಗುತ್ತಿಲ್ಲ. ಯಾವ ಜೆಡಿಎಸ್ ಶಾಸಕರೂ ಸಹ ಪಕ್ಷ ಬಿಡುವುದಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಚನ್ನಪಟ್ಟಣದ ಉಪ ಚುನಾವಣೆ ಬಳಿಕ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ಅವರು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು. ಆದರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇರೆ ನಾಯಕರನ್ನು ಆಯ್ಕೆ ಮಾಡಿ ಎಂದು ಪಕ್ಷದ ಹಿರಿಯ ನಾಯಕರು ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications