BREAKING: ದಿಢೀರ್ ಜೆಡಿಎಸ್ ಶಾಸಕಾಂಗ ಸಭೆ ಕರೆದ ದೇವೇಗೌಡ
ಬೆಂಗಳೂರು, ಸೆಪ್ಟೆಂಬರ್ 08: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಚಕ-ಚಕನೆ ನಡೆಯುತ್ತಿವೆ. ಜೆಡಿಎಸ್ ವರಿಷ್ಠ ದೇವೇಗೌಡರು ಇಂದು ಹಠಾತ್ತನೆ ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಇದು ರಾಜಕೀಯ ಮಹತ್ತರ ಘಟನೆಗೆ ಮುನ್ಸೂಚನೆಯಂತೆ ಕಾಣುತ್ತಿದೆ.
ದೇವೇಗೌಡ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ತಡ ಸಂಜೆ ನಗರದ ಖಾಸಗಿ ಹೊಟೆಲ್ ಒಂದರಲ್ಲಿ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆಯಲಿದೆ.
ಡಿ.ಕೆ.ಶಿವಕುಮಾರ್ ಅವರ ಬಂಧನ ಸಾಧ್ಯತೆ, ಬಿಜೆಪಿಯ ಸರ್ಕಾರ ಉರುಳಿಸುವ ತಂತ್ರಗಳು, ಕಾಂಗ್ರೆಸ್ನ ಅತೃಪ್ತ ಶಾಸಕರ ಕೈ ಮೇಲು, ಬೆಳಗಾವಿಯಲ್ಲಿ ಭಾರಿ ರಾಜಕೀಯ ಮೇಲಾಟ ಇದೆಲ್ಲದರ ನಡುವೆ ಜೆಡಿಎಸ್ ಹಠಾತ್ತನೆ ಶಾಸಕಾಂಗ ಸಭೆ ಕರೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸೆಪ್ಟೆಂಬರ್ 6 ನೇ ತಾರೀಖಿನಂದೇ ಸಭೆ ಇತ್ತು. ಆದರೆ ಅನಿವಾರ್ಯ ಕಾರಣದಿಂದ ಸಭೆ ನಡೆದಿರಲಿಲ್ಲ. ಹಾಗಾಗಿ ಇಂದು ಮೌಖಿಕವಾಗಿ ಎಲ್ಲ ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಜೆಡಿಎಸ್ ಪಕ್ಷ ಸ್ಪಷ್ಟೀಕರಣ ನೀಡಿದೆ.
ಜೆಡಿಎಸ್ ಸಭೆ ಕರೆದಿರುವುದು ಹಾಗೂ ಸಭೆಯಲ್ಲಿ ಖುದ್ದು ದೇವೇಗೌಡ ಜೊತೆಗೆ ಕುಮಾರಸ್ವಾಮಿ ಸಹ ಭಾಗಿ ಆಗುತ್ತಿರುವುದು ಮುಂದಾಗಬಹುದಾದ ರಾಜಕೀಯ ಬೆಳವಣಿಗೆಗಳಿಗೆ ಎಚ್ಚರಿಕೆ ದೃಷ್ಠಿಯಿಂದ ಈ ಸಭೆ ಕರೆಯಲಾಗಿದೆ ಎಂಬುದು ಖಾತ್ರಿ.
ಬಿಜೆಪಿಯು ಈಗಾಗಲೇ ಕೆಲವು ಕಾಂಗ್ರೆಸ್ ಶಾಸಕರ ಸಂಪರ್ಕ ಸಾಧಿಸಿದೆ ಎನ್ನಲಾಗಿದೆ. ಜೊತೆಗೆ ಜೆಡಿಎಸ್ ಶಾಸಕರನ್ನೂ ಸಂಪರ್ಕಿಸಿದೆ ಎಂಬ ಸುದ್ದಿ ಇದೆ ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜೆಡಿಎಸ್ ತನ್ನ ಶಾಸಕರನ್ನು ಒಂದು ಕಡೆ ಸೇರಿಸಿದೆ.