ಜಯಾ ಕೇಸ್ : ಕರ್ನಾಟಕ ಸುಪ್ರೀಂ ಮೊರೆ ಹೋಗಲಿದೆಯೇ?
ಬೆಂಗಳೂರು, ಮೇ 12 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲಾವಕಾಶವಿದೆ. ಕರ್ನಾಟಕ ಸರ್ಕಾರ ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲಿದೆಯೇ? ಕಾದು ನೋಡಬೇಕು.
ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ತೀರ್ಪಿನ ಸಂಪೂರ್ಣ ಪ್ರತಿಯನ್ನು ಓದಿದ ನಂತರ ಈ ಕುರಿತು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯದ ಕಾನೂನು ಇಲಾಖೆಯ ಅಧಿಕಾರಿಗಳು ಎಸ್ಪಿಪಿ ಬಿ.ವಿ.ಆಚಾರ್ಯ ಅವರೊಂದಿಗೆ ಚರ್ಚೆ ನಡೆಸುತ್ತಿದ್ದು, ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']

ಕರ್ನಾಟಕ ಮೇಲ್ಮನವಿ ಸಲ್ಲಿಸುವುದೇ? : ಕರ್ನಾಟಕ ಮೇಲ್ಮನವಿ ಸಲ್ಲಿಸಲಿದೆಯೇ? ಎಂಬುದು ಸದ್ಯದ ಪ್ರಶ್ನೆ. ಕಾನೂನು ಅಂಶಗಳ ಜೊತೆ ಮೇಲ್ಮನವಿ ಸಲ್ಲಿಸುವುದರಲ್ಲಿ ರಾಜಕೀಯ ಕಾರಣಗಳು ಸೇರಿವೆ. ಕಾಂಗ್ರೆಸ್ ಹೈಕಮಾಂಡ್ ನಾಯಕರಿಂದ ಒಪ್ಪಿಗೆ ಸಿಕ್ಕಿದರೆ ಮಾತ್ರ ಸರ್ಕಾರ ಮೇಲ್ಮನವಿ ಕುರಿತು ತೀರ್ಮಾನ ಕೈಗೊಳ್ಳಲಿದೆ. [ಜಯಲಲಿತಾ ಆರೋಪ ಮುಕ್ತ, ಬಿ.ವಿ.ಆಚಾರ್ಯ ಸಂದರ್ಶನ]
ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಎರಡೂ ರಾಜ್ಯಗಳ ನಡುವೆ ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ವಿವಾದ ಉಂಟಾಗಿದೆ. ಒಂದು ವೇಳೆ ಸರ್ಕಾರ ಮೇಲ್ಮನವಿ ಸಲ್ಲಿಸದೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು, ಜಯಲಲಿತಾ ಅವರನ್ನು ಗುರಿಮಾಡಿಕೊಂಡು, ತೀರ್ಪನ್ನು ಪ್ರಶ್ನಿಸಬಹುದು.
90 ದಿನಗಳ ಅವಧಿ ಇದೆ : ಕಾನೂನಿನ ಪ್ರಕಾರ ಹೈಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಲು 90 ದಿನಗಳ ಕಾಲಾವಕಾಶವಿದೆ.
ಪ್ರೊ.ರವಿವರ್ಮ ಕುಮಾರ್ ಅವರು ತೀರ್ಪಿನ ಪ್ರತಿಯನ್ನು ಸಂಪೂರ್ಣವಾಗಿ ಓದಿದ ನಂತರ ಮೇಲ್ಮನವಿ ಸಲ್ಲಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಡಿಎಂಕೆ ಮುಖಂಡ ಅನ್ಬಳಗನ್ ಮತ್ತು ದೂರುದಾರ ಸುಬ್ರಮಣ್ಯ ಸ್ವಾಮಿ ಅವರು ಸಹ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಕಾನೂನು ತಜ್ಞರ ಪ್ರಕಾರ ಪ್ರಾಸಿಕ್ಯೂಷನ್ ಏಜೆನ್ಸಿ ಮೇಲ್ಮನವಿ ಸಲ್ಲಿಸುವುದು ಸೂಕ್ತ. ಪ್ರಕರಣದಲ್ಲಿ ಕರ್ನಾಟಕ ಪ್ರಾಸಿಕ್ಯೂಷನ್ ಏಜೆನ್ಸಿಯಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಲಿದೆಯೇ?












Click it and Unblock the Notifications