ಮಠಕ್ಕೆ ಭೇಟಿ, ಪತ್ರಿಕಾಗೋಷ್ಠಿ; ಜರ್ನಾರ್ದನ ರೆಡ್ಡಿ ನಡೆ ಎತ್ತ?
ಬೆಂಗಳೂರು, ಡಿಸೆಂಬರ್ 18; ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ. ಡಿಸೆಂಬರ್ 25ರಂದು ಅವರು ಮಹತ್ವದ ಪತ್ರಿಕಾಗೋಷ್ಠಿ ಕರೆದಿದ್ದು, ಮುಂದಿನ ನಡೆ ಏನು? ಎಂದು ಚರ್ಚೆ ಆರಂಭವಾಗಿದೆ.
ಬಿಜೆಪಿ ನಾಯಕರಿಂದ ಕಡೆಗಣನೆ, ದೆಹಲಿಯಲ್ಲಿ ಸರಣಿ ಸಭೆಗಳು, ಗಂಗಾವತಿಯಲ್ಲಿ ಹೊಸ ಮನೆ ಗೃಹ ಪ್ರವೇಶ ಹೀಗೆ ಜನಾರ್ದನ ರೆಡ್ಡಿ ಚಟುವಟಿಕೆಗಳು ಮುಂದಿನ ವಿಧಾನಸಭೆ ಚುಣಾವಣೆ ತಯಾರಿ ಎಂಬ ಮಾತುಗಳು ಹಬ್ಬಿವೆ. ಚುನಾವಣೆಗೆ ಕೆಲವು ತಿಂಗಳು ಇರುವಾಗ ಅವರು ಸಕ್ರಿಯರಾಗಿದ್ದಾರೆ.
ಜನಾರ್ದನ ರೆಡ್ಡಿ ಹೊಸ ಮನೆ ಗೃಹ ಪ್ರವೇಶದ ಬಳಿಕ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಹಿನ್ನಲೆಯಲ್ಲಿ ಡಿಸೆಂಬರ್ 25ರಂದು ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಯಾವ ಘೋಷಣೆ ಮಾಡಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಡಿಸೆಂಬರ್ 25ರ ಬೆಳಗ್ಗೆ 10 ಗಂಟೆಗೆ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಡಿಸೆಂಬರ್ 19ರಿಂದ ಅವರು ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ.

ಜನಾರ್ದನ ರೆಡ್ಡಿ ಪ್ರವಾಸದ ವಿವರ
ಡಿಸೆಂಬರ್ 19ರಿಂದ ಜನಾರ್ದನ ರೆಡ್ಡಿ ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಹುಬ್ಬಳ್ಳಿಯ ಶ್ರೀ ಸಿದ್ಧರೂಢ ಮಠಕ್ಕೆ ಭೇಟಿ ಕೊಡಲಿದ್ದಾರೆ. ಈ ಕುರಿತು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿವರ ಪ್ರಕಟಿಸಿದ್ದಾರೆ.
ಡಿಸೆಂಬರ್ 20ರಂದು ಅವರು ಬೆಳಗ್ಗೆ 10 ಗಂಟೆಗೆ ಗದಗಕ್ಕೆ ಭೇಟಿ ನೀಡಲಿದ್ದಾರೆ. ತೋಂಟದಾರ್ಯ ಶ್ರೀಗಳ ಗದ್ದುಗೆ ಹಾಗೂ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಮಾಡಲಿದ್ದಾರೆ.

ಡಿಸೆಂಬರ್ 21, 22ರ ಕಾರ್ಯಕ್ರಮಗಳು
ಜನಾರ್ದನ ರೆಡ್ಡಿ ಡಿಸೆಂಬರ್ 21ರಂದು ಮಸ್ಕಿಯಲ್ಲಿ ಪ್ರಮುಖ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಡಿಸೆಂಬರ್ 22ರಂದು ಗಂಗಾವತಿಗೆ ಭೇಟಿ ನೀಡಲಿದ್ದಾರೆ. ಗ್ರಾಮ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡಲಿದ್ದಾರೆ.
ಡಿಸೆಂಬರ್ 25ರಂದು ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಇರುವ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ.

ಗಂಗಾವತಿಯಲ್ಲಿ ಗೃಹ ಪ್ರವೇಶ
ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ 'ಪಂಚವಟಿ' ಹೆಸರಿನ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಈ ಕುರಿತು ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದರು. 'ತಮಗೆಲ್ಲರಿಗೂ ಈ ಹಿಂದೆ ತಿಳಿಸಿದಂತೆ ನಾನು ಬಳ್ಳಾರಿಗೆ ಆಗಮಿಸಲು ಆಗದ ಕಾರಣ ಸಾರ್ವಜನಿಕ ಬದುಕಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು, ಇಂದು ಗಂಗಾವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶದ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನನ್ನ ಹುಟ್ಟೂರು ಬಳ್ಳಾರಿಗೆ ಹತ್ತಿರದಲ್ಲಿರುವ ಗಂಗವತಿಯಲ್ಲಿ ನನ್ನ ಹೊಸ ನಿವಾಸದ ಗೃಹಪ್ರವೇಶವು ಗೋಪೂಜೆ, ದೇವತಾ ಪೂಜೆ, ರುದ್ರಾಭಿಷೇಕ, ಶಿವಪಂಚಾಕ್ಷರಿ ಪೂಜೆ, ಹೋಮ, ಮಂತ್ರಗಳ ಮೂಲಕ ಶಾಸ್ತ್ರೋಕ್ತವಾಗಿ ಸರಳವಾಗಿ ನೆರವೇರಿತು' ಎಂದು ಹೇಳಿದ್ದರು.
'ಹಿಂದೂ, ವೀರಶೈವ ಲಿಂಗಾಯಿತ ಸಾಂಪ್ರದಾಯದ ಪ್ರಕಾರ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾರವರು, ಕುಟುಂಬ ಸದ್ಯಸರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಯಾರು ಸಹ ಅನ್ಯಥಾ ಭಾವಿಸದೆ ತಮ್ಮ ಶುಭ ಹಾರೈಕೆಗಳನ್ನು ತಾವು ಇದ್ದಲ್ಲಿಯೇ ತಿಳಿಸಬೇಕೆಂದು ವಿನಂತಿಸುತ್ತೇನೆ' ಎಂದು ಪೋಸ್ಟ್ ಹಾಕಿದ್ದರು.

ಮನವೊಲಿಕೆ ಯತ್ನ ವಿಫಲವಾಗಿದೆ?
ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡುವ ಸುಳಿವು ಸಿಕ್ಕ ಬಳಿಕ ಬಿಜೆಪಿ ಅವರ ಮನವೊಲಿಕೆಗೆ ಮುಂದಾಗಿತ್ತು. ರೆಡ್ಡಿ ಆಪ್ತರಾದ ಸಚಿವ ಬಿ. ಶ್ರೀರಾಮುಲು ಮೂಲಕ ಮನವೊಲಿಕೆಗೆ ಮುಂದಾಗಿತ್ತು. ದೆಹಲಿಯಲ್ಲಿ ಶ್ರೀರಾಮುಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದರು. ಆದರೆ ಬಿಜೆಪಿ ಟಿಕೆಟ್ಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ತಯಾರಿ ಆರಂಭಿಸಿದ್ದಾರೆ ಎಂಬುದು ಸದ್ಯದ ಸುದ್ದಿ.












Click it and Unblock the Notifications