ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?
ಬೆಂಗಳೂರು, ನವೆಂಬರ್ 08: ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರ ವಿರುದ್ಧ ಯಾವ ಪ್ರಕರಣ ದಾಖಲಾಗದಿದ್ದರೂ ಸಹ ಸಿಸಿಬಿಯು ರಾಜಕೀಯ ಒತ್ತಡಕ್ಕೆ ಸಿಲುಕಿ ಉದ್ದೇಶಪೂರ್ವಕವಾಗಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸುವ ಯತ್ನ ನಡೆಸುತ್ತಿದೆ ಎಂದು ರೆಡ್ಡಿ ಪರ ವಕೀಲ ಆರ್.ಪಿ.ಚಂದ್ರಶೇಖರ್ ಅವರು ಹೇಳಿದರು.
ನಗರದಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಆಂಬಿಡೆಂಟ್ ಕಂಪೆನಿಯ ವಂಚನೆ ಪ್ರಕರಣದ ತನಿಖೆ ಮಾಡಲೆಂದು ವ್ಯಾಪ್ತಿ ನಿಗದಿಪಡಿಸಿ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು ಆದರೆ ಸಿಸಿಬಿಯು ವ್ಯಾಪ್ತಿಯನ್ನು ಬಿಟ್ಟು ಒಂದು ಚಿತ್ರವನ್ನು ಹಿಡಿದುಕೊಂಡು ಜನಾರ್ದನ ರೆಡ್ಡಿ ಅವರ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.
ಆಂಬಿಡೆಂಟ್ ಕಂಪೆನಿಯು ಹೂಡಿಕೆದಾರರಿಗೆ ಹಣ ವಂಚನೆ ಮಾಡಿದೆ, ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಿಸಿಬಿ ಮಾಡದೆ, ಪ್ರಕರಣಕ್ಕೆ ಸಂಬಂಧವೇ ಇಲ್ಲದ ಜನಾರ್ದನ ರೆಡ್ಡಿ ಅವರ ಹಿಂದೆ ಸಿಸಿಬಿ ಬಿದ್ದಿದೆ. ಸಿಸಿಬಿ ತನಿಖೆ ಮಾಡುತ್ತಿರುವ ಆಂಬಿಡೆಂಟ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರ ಮೇಲೆ ಯಾರೂ ದೂರು ನೀಡಿಲ್ಲ ಹಾಗಿದ್ದ ಮೇಲೆ ಅವರ ಬಂಧನದ ಅಗತ್ಯ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ದಂಡ ಕಟ್ಟಿಸಿಕೊಂಡಿದೆ ಇಡಿ
ಆಂಬಿಡೆಂಟ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಇಡಿ ಸಂಸ್ಥೆಯೇ ಆಂಬಿಡೆಂಟ್ ಇಂದ ಕಾನೂನು ರೀತಿ ದಂಡ ಕಟ್ಟಿಸಿಕೊಂಡಿದ್ದೇವೆ ಎಂದು ಹೇಳಿದೆ ಹಾಗಿದ್ದ ಮೇಲೆ ಇಡಿ ಇಂದ ಆರೋಪಿಯನ್ನು ತಪ್ಪಿಸಲು ಹೊರಗಿನ ವ್ಯಕ್ತಿಗೆ ಲಂಚ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ವಕೀಲರು ಪ್ರಶ್ನೆ ಮಾಡಿದರು.

ಚಿತ್ರವನ್ನು ಇಟ್ಟುಕೊಂಡು ಕತೆ ಹೆಣೆಯುತ್ತಿದ್ದಾರೆ
ಒಂದು ಚಿತ್ರವನ್ನು ಇಟ್ಟುಕೊಂಡು ಅದರ ಹಿಂದೆ ಸುಳ್ಳು ಕತೆಗಳನ್ನು ಹೆಣೆದು ಜನಾರ್ದನ ರೆಡ್ಡಿ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದಲೇ ಏಕಪಕ್ಷೀಯವಾಗಿ ತನಿಖೆ ಮಾಡುತ್ತಿದ್ದಾರೆ. ಸಿಸಿಬಿ ಹೆಣೆದಿರುವ ಲಂಚದ ಕತೆಗೆ ಎಳ್ಳಷ್ಟೂ ಆಧಾರಗಳಿಲ್ಲ ಎಂದು ಅವರು ಹೇಳಿದರು. ಆರೋಪದ ಬಗ್ಗೆ ರಿಮಾಂಡ್ ರಿಪೋರ್ಟ್ನಲ್ಲೂ ಹೇಳಲಾಗಿಲ್ಲ.

ಖಂಡಿತ ಜಾಮೀನು ಸಿಗುತ್ತೆ
ಆಂಬಿಡೆಂಟ್ ಕಂಪೆನಿಯ ಪ್ರಮುಖ ಆರೋಪಿ ಫರೀದ್ಗೆ ಜಾಮೀನು ದೊರೆತಿದೆ, ದಸ್ತಗಿರಿ ಆಗಿದ್ದ ರಮೇಶ್ಗೂ ಜಾಮೀನು ದೊರೆತಿದೆ ಎರಡನೇ ಆರೋಪಿಗೂ ಜಾಮೀನು ದೊರೆತಿದೆ ಅಲ್ಲದೆ ರೆಡ್ಡಿ ಅವರಿಗೆ ಬಂಧನದ ಭೀತಿ ಇರುವ ಕಾರಣ ಹಾಗೂ ಅವರ ಮೇಲ್ನೋಟದ ಅಪರಾಧ ಮಾತ್ರ ಆಗಿರುವ ಕಾರಣ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ದೊರಕುತ್ತದೆ ಎಂದು ವಕೀಲ ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಸುಳ್ಳು ಆರೋಪದಲ್ಲಿ ಬಂಧನ ಭೀತಿ
ಜನಾರ್ದನ ರೆಡ್ಡಿ ಅವರು ತಲೆಮರೆಸಿಕೊಂಡಿದ್ದಾರೆ ಎನ್ನುವುದು ಸರಿ ಅಲ್ಲ. ಸುಳ್ಳು ಆರೋಪದ ಮೂಲಕ ಬಂಧಿಸಲು ಮಾಡಿರುವ ಹುನ್ನಾರದಿಂದ ಕಾನೂನು ರಕ್ಷಣೆ ಪಡೆಯಲು ಮಾಡುತ್ತಿರುವ ಯತ್ನ ಎಂದು ಅದನ್ನು ನೋಡಬೇಕು. ಅವರು ತಲೆಮರೆಸಿಕೊಂಡಿದ್ದಾರೆ ಎಂಬುದು ಎಷ್ಟು ನಿಜವೋ ಅವರನ್ನು ಸುಳ್ಳು ಕೇಸಿನಲ್ಲಿ ಬಂಧಿಸಲು ಯತ್ನಿಸುತ್ತಿರುವುದೂ ಅಷ್ಟೆ ನಿಜ ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ.












Click it and Unblock the Notifications