Jan Ki Baat Suvarna News Survey: ಮೋದಿ ಮೋಡಿ; ಬಿಜೆಪಿಗೆ ಸಂಪೂರ್ಣ ಬಹುಮತ
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು, ಅಧಿಕಾರದ ಗದ್ದುಗೆಗಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಗೊಳ್ಳಲಿದೆ.
ಇದೀಗ ಮತದಾನಕ್ಕೆ ಕೆಲವೇ ದಿನಗಳ ಮುನ್ನ ಜನ್ ಕೀ ಬಾತ್-ಸುವರ್ಣನ್ಯೂಸ್ ಮಹಾ ಸಮೀಕ್ಷೆ ಹೊರಬಿದ್ದಿದ್ದು, ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಸಿಗಲಿದೆ ಎಂದು ಹೇಳಿದೆ. ಕರ್ನಾಟಕದಲ್ಲಿ ಮೊದಲ ಬಾರಿ ತನ್ನ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಜನ್ ಕೀ ಬಾತ್ ಸಹಯೋಗದಲ್ಲಿ ನಡೆದ ಸಮೀಕ್ಷೆಯ 2ನೇ ಹಂತದಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆಯದಿದ್ದರೂ, ಸರಳ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೇರಲಿದೆ.
ಒಂದು ವೇಳೆ ಸರಳ ಬಹುಮತ ಪಡೆಯದಿದ್ದರೂ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದೇ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಜನ್ ಕೀ ಬಾತ್ ಸಮೀಕ್ಷೆಯ ಮೊದಲ ಹಂತದಲ್ಲಿ ಬಿಜೆಪಿಗೆ 98ರಿಂದ 109 ಸ್ಥಾನಗಳು ಬರಲಿವೆ ಎಂದು ಹೇಳಿತ್ತು.

ಬಿಜೆಪಿಗೆ 100ರಿಂದ 114 ಸ್ಥಾನ
ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆಯ 2ನೇ ಹಂತದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಪಕ್ಷ 100ರಿಂದ 114 ಸ್ಥಾನಗಳನ್ನು ಏಕಾಂಗಿಯಾಗಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೇರಲು 113 ಸ್ಥಾನಗಳನ್ನು ಗೆಲ್ಲಬೇಕಿದೆ. ಹೀಗಾಗಿ ಬಿಜೆಪಿ 114 ಸ್ಥಾನಗಳನ್ನು ಪಡೆದರೆ ಸರಳ ಬಹುಮತ ಮತ್ತು ಏಕಾಂಗಿಯಾಗಿ ಸರ್ಕಾರ ರಚಿಸಲಿದೆ.
ಇನ್ನು ಈ ಬಾರಿ ಅಧಿಕಾರಕ್ಕೇರುವ ಆಸೆಯಲ್ಲಿದ್ದ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ವಿಪಕ್ಷ ಕಾಂಗ್ರೆಸ್ 86ರಿಂದ 98 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಜನ್ ಕೀ ಬಾತ್ ಸುವರ್ಣನ್ಯೂಸ್ ಮಹಾ ಸಮೀಕ್ಷೆಯಲ್ಲಿ ಹಳೆ ಮೈಸೂರು ಭಾಗದ ಪ್ರಮುಖ ಪಕ್ಷವಾದ ಜೆಡಿಎಸ್ 20ರಿಂದ 26 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಹೇಳಿದ್ದರೆ, ಪಕ್ಷೇತರ ಅಭ್ಯರ್ಥಿಗಳು ಗರಿಷ್ಠ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಲಾಗಿದೆ.
ನರೇಂದ್ರ ಮೋದಿ ಮೋಡಿ; ಗೆಲುವಿನ ಗಡಿ ದಾಟಲಿರುವ ಬಿಜೆಪಿ
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಹಲವು ಮಾಧ್ಯಮ ಸಂಸ್ಥೆಗಳಿಂದ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬಿದ್ದಿವೆ. ಈವರೆಗೆ ವಿಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಅಥವಾ ಅತಿ ದೊಡ್ಡ ಪಕ್ಷವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಚುನಾವಣಾ ಕಣದ ಚಿತ್ರಣ ಬದಲಾಗುತ್ತಿದೆ.
ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣತೊಟ್ಟಿರುವ ಬಿಜೆಪಿ, ನರೇಂದ್ರ ಮೋದಿ ಮೂಲಕ ಪ್ರಚಾರ ಕಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಏಪ್ರಿಲ್ 29ರಿಂದ ಆರಂಭವಾಗಿರುವ ನರೇಂದ್ರ ಮೋದಿ ದಂಡಯಾತ್ರೆ ಮೇ 7ರವರೆಗೂ ನಡೆಯಲಿದೆ.
ಈಗಾಗಲೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಮತ್ತು ರೋಡ್ ಶೋ ಮೂಲಕ ಬಿಜೆಪಿ ಪರ ಎರಡು ಹಂತದ ಪ್ರಚಾರ ನಡೆಸಿದ್ದಾರೆ.
ವಿಪಕ್ಷಗಳಿಂದ ಹಲವು ಆರೋಪಗಳನ್ನು ಎದುರಿಸಿದ್ದ ಬಿಜೆಪಿ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆ ಮತ್ತು ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಲಿದೆ ಎಂದು ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳ ಸಮೀಕ್ಷೆಗಳು ತಿಳಿಸಿದ್ದವು.
ಚುನಾವಣೆಯ ಹತ್ತಿರವಾಗುತ್ತಿದ್ದಂತೆಯೇ ವಿಭಿನ್ನ ಪ್ರಚಾರದ ತಂತ್ರದ ಮೊರೆ ಹೋಗಿರುವ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿಯೇ ದೊಡ್ಡ ಬ್ರಹ್ಮಾಸ್ತ್ರವಾಗಿದ್ದಾರೆ. ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್, ಅಮಿತ್ ಶಾ, ಜೆಪಿ ನಡ್ಡಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಬಿಜೆಪಿಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಬಿಜೆಪಿಗೆ ಹಂತ ಹಂತವಾಗಿ ಲಾಭ ತಂದುಕೊಡುತ್ತಿದೆ. ಅವರ ಭಾಷಣದ ಶೈಲಿ, ವಿಪಕ್ಷಗಳ ವಿರುದ್ಧ ಜಾಣ್ಮೆಯ ಆರೋಪಗಳು ಜನರನ್ನು ಮೋಡಿ ಮಾಡುತ್ತಿವೆ. ಸಮಾವೇಶ ಮತ್ತು ರೋಡ್ ಶೋಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ.
ವಿಪಕ್ಷಗಳ ನಿಂದನೆ ಬಿಜೆಪಿಗೆ ಅಸ್ತ್ರ
ಚುನಾವಣಾ ಪ್ರಚಾರದಲ್ಲಿ ವಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಮತ್ತು ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಹೇಳಿಕೆಗಳು ಬಿಜೆಪಿಗೆ ಚುನಾವಣಾ ಅಸ್ತ್ರಗಳಾಗಿವೆ. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಉಲ್ಲೇಖವೂ ಹಿಂದೂಗಳ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications