ರಾಜ್ಯಸಭಾ ಚುನಾವಣೆ: ಡಿಕೆ ಶಿವಕುಮಾರ್ ಭೇಟಿಯಾದ ಜೈರಾಮ್ ರಮೇಶ್
ಬೆಂಗಳೂರು, ಮೇ 26: ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿ ಮಾಡಿದರು.
ರಾಜ್ಯಸಭಾ ಚುನಾವಣೆಯ ಅಧಿಸೂಚನೆ ಹೊರಡಿಸಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಕರ್ನಾಟಕದಿಂದ ಜೈರಾಂ ರಮೇಶ್ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಜೈರಾಮ್ ರಮೇಶ್ 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಜೈರಾಮ್ ರಮೇಶ್ ಅವರೇ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿರುವ ಜೈರಾಮ್ ರಮೇಶ್ ಡಿ.ಕೆ. ಶಿವಕುಮಾರ್ ಸಹಿತ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ರಾಜ್ಯಸಭಾ ಚುನಾವಣೆ:
ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಗೊಂಡ ನಾಲ್ಕು ಸದಸ್ಯರುಗಳ ಪೈಕಿ ಮೂವರು ಸದಸ್ಯರುಗಳು ಅಂದರೆ ನಿರ್ಮಲಾ ಸೀತಾರಾಮನ್, ಜೈರಾಮ್ ರಮೇಶ್ ಮತ್ತು ಕೆ.ಸಿ. ರಾಮಮೂರ್ತಿ ಅವರು ಜೂನ್ 30ರಂದು ನಿವೃತ್ತರಾಗಲಿರುವುದರಿಂದ ಹಾಗೂ 2021ರ ಸೆಪ್ಟೆಂಬರ್ 13ರಂದು ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ತೆರವಾಗಿರುವ ಸ್ಥಾನಗಳನ್ನು ತುಂಬಲು ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಭಾರತದ ಚುನಾವಣಾ ಆಯೋಗವು ಚುನಾವಣೆಯನ್ನು ಘೋಷಿಸಿ, ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಚುನಾವಣಾ ವೇಳಾಪಟ್ಟಿಯಂತೆ ಮೇ 24ರ ಮಂಗಳವಾರದಂದು ಅಧಿಸೂಚನೆಯನ್ನು ಹೊರಡಿಸಿದ್ದು, ಮೇ 31ರ ಮಂಗಳವಾರದಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜೂನ್ 01ರ ಬುಧವಾರದಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಜೂನ್ 03ರ ಶುಕ್ರವಾರದಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅವಶ್ಯವಿದ್ದಲ್ಲಿ ಜೂನ್ 10ರ ಶುಕ್ರವಾರದಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಮತದಾನವನ್ನು ನಡೆಸಲಾಗುವುದು. 2022ರ ಜೂನ್ 10ರ ಶುಕ್ರವಾರ ಸಂಜೆ 5:00 ಗಂಟೆಯಿಂದ ಮತಗಳ ಏಣಿಕೆ ನಡೆಯಲಿದ್ದು, ಜೂನ್ 13ರ ಸೋಮವಾರದಂದು ಚುನಾವಣೆ ಮುಕ್ತಾಯಗೊಳ್ಳಲಿದೆ.