ಷರೀಫ್ ಅತೃಪ್ತಿ, ಸೆಡ್ಡು ಹೊಡೆಯಲಿರುವ ಹುಕ್ಕೇರಿ!
ಬೆಂಗಳೂರು, ಮಾ.14 : ಕರ್ನಾಟಕ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಅಸಮಧಾನದ ಹೊಗೆ ಎದ್ದಿದೆ. ಟಿಕೆಟ್ ನೀಡದಿರುವುದಕ್ಕೆ ಜಾಫರ್ ಷರೀಫ್ ಮುನಿಸಿಕೊಂಡಿದ್ದರೆ, ನನಗೆ ಟಿಕೆಟ್ ಬೇಡ ಎಂದು ಹೇಳುವ ಮೂಲಕ ಪ್ರಕಾಶ್ ಹುಕ್ಕೇರಿ ಹೈ ಕಮಾಂಡ್ ನಾಯಕರಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಪಕ್ಷದ ಹಿರಿಯ ಮುಖಂಡ ಸಿಕೆ ಜಾಫರ್ ಷರೀಫ್ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದೆ. ನನಗೆ ಚಿಕ್ಕೋಡಿ ಕ್ಷೇತ್ರದಿಂದ ಟಿಕೆಟ್ ಬೇಡ ಎಂದು ಸಕ್ಕರೆ ಮತ್ತು ಮುಜರಾಯಿ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಮನವಿ ಮಾಡಿದರೂ, ಅವರಿಗೆ ಟಿಕೆಟ್ ನೀಡಲಾಗಿದೆ. [ಕಾಂಗ್ರೆಸ್ 2ನೇ ಪಟ್ಟಿ ನೋಡಿ]

ಬಂಡಾಯದ ಬಾವುಟ ಹಾರಿಸಲು ಸಜ್ಜಾಗಿರುವ ಸಿ.ಕೆ. ಜಾಫರ್ ಶರೀಫ್ ಅವರು ಬೆಂಬಲಿಗರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ತಮಗೆ ಟಿಕೆಟ್ ಬೇಡ ಎಂದು ಹೇಳುವ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಚುನಾವಣಾ ಸಮಿತಿ ನೀಡಿದ ಆದೇಶವನ್ನು ಉಲ್ಲಂಘಿಸಲು ನಿರ್ಧರಿಸಿದ್ದಾರೆ.
ಹುಕ್ಕೇರಿ ಹೇಳುವುದೇನು : ಕಾಂಗ್ರೆಸ್ ಚಿಕ್ಕೋಡಿ ಕ್ಷೇತ್ರದಿಂದ ಟಿಕೆಟ್ ನೀಡಿರುವ ಕುರಿತು ಹೇಳಿಕೆ ನೀಡಿರುವ ಸಚಿವ ಪ್ರಕಾಶ್ ಹುಕ್ಕೇರಿ, "ನಾನು ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ, ಹೈಕಮಾಂಡ್ ತನ್ನ ಅಭಿಪ್ರಾಯ ತಿಳಿಸಿದೆ. ಅದೇ ರೀತಿ ನಾನು ನನ್ನ ನಿಲುವನ್ನು ಹೇಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.[ಕಣದಿಂದ ಹಿಂದೆ ಸರಿದ ಹುಕ್ಕೇರಿ]
ಷರೀಫ್ ಏನು ಮಾಡುತ್ತಾರೆ : ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ಗಾಗಿ ಜಾಫರ್ ಷರೀಫ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಜಾಫರ್ ಶರೀಫ್, ಕಾಂಗ್ರೆಸ್ ತನ್ನ ನಿರ್ಧಾರ ಪ್ರಕಟಿಸಿದೆ. ನಾನು ನನ್ನ ನಿರ್ಧಾರ ಪ್ರಕಟಿಸುವುದು ಬಾಕಿ ಇದೆ ಎಂದು ಹೇಳಿದ್ದಾರೆ.












Click it and Unblock the Notifications