ಹಗರಣಗಳ ನೆಪದಲ್ಲಿ ಉದ್ಯಮಿಗಳನ್ನು ಶಿಕ್ಷಿಸುವುದು ಸರಿಯಲ್ಲ: ಆರ್.ವಿ.ದೇಶಪಾಂಡೆ
ಬೆಂಗಳೂರು, ಮಾರ್ಚ್ 21: ಯಾವುದೋ ಒಂದು ಬ್ಯಾಂಕಿನಲ್ಲಿ ಹಗರಣವಾಯಿತೆಂದು ಎಲ್ಲರನ್ನೂ ಶಿಕ್ಷಿಸುವುದು ಅನುಚಿತ ಕ್ರಮವಾಗಿದೆ. ಇದರಿಂದ ದೇಶದಲ್ಲಿ ವಹಿವಾಟು ಸ್ಥಗಿತವಾಗುವ ಅಪಾಯವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸೋಚಮ್ (ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ನಗರದಲ್ಲಿ ಬುಧವಾರ ಏರ್ಪಡಿಸಿದ್ದ ರೋಲ್ ಆಫ್ ಟ್ರೇಡ್ ಫೈನಾನ್ಸ್ ಫಾರ್ ಇನ್ಕ್ಲೂಸೀವ್ ಗ್ರೋತ್' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
"ಬ್ಯಾಂಕಿಂಗ್ ಸೇರಿದಂತೆ ಯಾವ ಕ್ಷೇತ್ರದಲ್ಲೇ ಆಗಲಿ, ಹಗರಣಗಳು ನಡೆಯದಂತೆ ನೋಡಿಕೊಳ್ಳಬೇಕು ಎನ್ನುವುದು ನಿಜ. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ಕೆಲವರು ಸ್ವಹಿತಾಸಕ್ತಿಗಾಗಿ ಕೆಲವರೊಂದಿಗೆ ಶಾಮೀಲಾಗುತ್ತಿದ್ದಾರೆ. ಹಗರಣಗಳು ನಡೆಯಲು ಇವರೇ ಮೂಲಕಾರಣರು," ಎಂದು ಅವರು ಪ್ರತಿಪಾದಿಸಿದರು.
"ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಭಾರೀ ಹಗರಣ ಬೆಳಕಿಗೆ ಬಂತು. ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆನ್ನುವುದು ನಿಜ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಕೇಂದ್ರ ಸರಕಾರ ರಾತ್ರೋರಾತ್ರಿ ಅತಾರ್ಕಿಕವಾದ ನಿಯಮಗಳನ್ನೆಲ್ಲ ಹೇರುತ್ತಿದೆ. ಈ ರೀತಿಯ ಕ್ರಮಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳಲಿದೆ, ಇನ್ನೊಂದೆಡೆ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಂಡುಬರುತ್ತಿದೆ. ಹೀಗಾಗಿ, ದೇಶದಲ್ಲಿ ಏನಾಗುತ್ತಿದೆ ಎನ್ನುವುದೇ ಯಾರಿಗೂ ಗೊತ್ತಾಗದಂತಹ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ'' ಎಂದು ದೇಶಪಾಂಡೆ ಕಳವಳ ವ್ಯಕ್ತಪಡಿಸಿದರು.
"ಹಗರಣಗಳಿಂದ ಯಾವ ದೇಶವೂ ಮುಕ್ತವಾಗಿಲ್ಲ. ಹಾಗೆಂದು, ಪ್ರಾಮಾಣಿಕರಿಗೆ ಶಿಕ್ಷೆಯಾಗಬಾರದು. ನಮ್ಮ ದೇಶದ ಬ್ಯಾಂಕುಗಳು ಕೂಡ ಸರಳವಾದ, ಪಾರದರ್ಶಕವಾದ ಮತ್ತು ಕಾಲಕ್ಕೆ ಪ್ರಸ್ತುತವಾದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು. ಈಗಿನ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಮುಕ್ಕಾಲು ಪಾಲು ನಿಯಮಗಳು ಓಬೀರಾಯನ ಕಾಲಕ್ಕೆ ಸೇರಿವೆ," ಎಂದು ಸಚಿವರು ಟೀಕಿಸಿದರು.
"ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳೆಯಬೇಕಾದರೆ ಬ್ಯಾಂಕುಗಳಲ್ಲಿ ಬಡ್ಡಿ ದರ ಇಳಿಯಬೇಕು. ಇದರ ಜೊತೆಗೆ ಉದ್ಯಮಿಗಳು ತಾವು ಹೇಳುವುದೊಂದು, ಮಾಡುವುದು ಇನ್ನೊಂದು ಎನ್ನುವಂತಹ ದ್ವಂದ್ವ ನೀತಿಯಿಂದ ಹೊರಬಂದು, ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಸೇವೆಯನ್ನು ಪೂರೈಸುವ ಕಡೆಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯುವುದು ಸಾಧ್ಯವಿಲ್ಲ," ಎಂದು ಆರ್.ವಿ. ದೇಶಪಾಂಡೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್ ಬಿಐ ನಿವೃತ್ತ ಡೆಪ್ಯುಟಿ ಗವರ್ನರ್ ಆರ್. ಗಾಂಧಿ, ಕೇಂದ್ರ ಸರಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಯ ನಿವೃತ್ತ ಕಾರ್ಯದರ್ಶಿ ಅನೂಪ್ ಕೆ. ಪೂಜಾರಿ, ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ. ಭಾರತಿ, ಆರ್ ಬಿಐ ವಿದೇಶಿ ವಿನಿಮಯ ಇಲಾಖೆಯ ಜನರಲ್ ಮ್ಯಾನೇಜರ್ ಆರ್.ಸುದೀಪ್, ಅಸೋಚಮ್ ಹಿರಿಯ ಸಲಹೆಗಾರ ಎಂ. ನರೇಂದ್ರ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಮುಂತಾದವರು ಉಪಸ್ಥಿತರಿದ್ದರು.
ಘೋಷಣೆಗಳಿಂದ ಪ್ರಯೋಜನವಿಲ್ಲ
ದೇಶದಲ್ಲೀಗ ಯುವಜನರಿಗೆ ಉದ್ಯೋಗ ಸೃಷ್ಠಿಯ ತುರ್ತು ಅಗತ್ಯವಿದೆ. ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಕೇಂದ್ರ ಸರಕಾರವು ಇದನ್ನು ಈಡೇರಿಸಲು ವಿಫಲವಾಗಿದ್ದು, ಉದ್ಯೋಗ ಸೃಷ್ಟಿಯ ಪ್ರಮಾಣ 3.70ರಷ್ಟು ನಕಾರಾತ್ಮಕವಾಗಿದೆ. ಕೇವಲ ಘೋಷಣೆಗಳನ್ನು ಕೂಗುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ದೇಶಪಾಂಡೆ ದೇ ಸಂದರ್ಭದಲ್ಲಿ ಹೇಳಿದರು.
ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಕರ್ನಾಟಕ ಸರಕಾರದ ಸಾಧನೆ ತೃಪ್ತಿಕರವಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇನ್ನೂ 5 ಲಕ್ಷ ಹುದ್ದೆಗಳು ಮುಂಬರುವ ಕೆಲವೇ ತಿಂಗಳಲ್ಲಿ ಸೃಷ್ಟಿಯಾಗಲಿವೆ ಎಂದು ಆರ್.ವಿ.ದೇಶಪಾಂಡೆ ಇದೇ ಸಂದರ್ಭದಲ್ಲಿ ನುಡಿದರು.
ಹೊಸ ಬಗೆಯ ತಂತ್ರಜ್ಞಾನದ ಆಗಮನವನ್ನು ನಿರಾಕರಿಸುವುದು ಸಾಧ್ಯವಿಲ್ಲ. ಆದ್ದರಿಂದ ಉದ್ಯಮಿಗಳು ತಮ್ಮ ಕೌಶಲಗಳನ್ನು ಸಮಕಾಲೀನಗೊಳಿಸಿಕೊಂಡು, ಕಾರ್ಯತತ್ಪರರಾಗಬೇಕು ಎಂದು ಸಚಿವರು ಸಲಹೆ ನೀಡಿದರು.