ಪರಿಷತ್ ಚುನಾವಣೆ: ಯುಟರ್ನ್ ಹೊಡೆದ ಎಸ್.ಟಿ. ಸೋಮಶೇಖರ್?
ಬೆಂಗಳೂರು, ಜೂ. 05: ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದವರಲ್ಲಿ ನಾಲ್ಕು ನಾಯಕರ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಮಾಜಿ ಸಚಿವರಾದ ಎಂ.ಟಿ.ಬಿ. ನಾಗರಾಜ್, ಆರ್. ಶಂಕರ್, ಎಚ್. ವಿಶ್ವನಾಥ್ ಹಾಗೂ ರೋಷನ್ ಬೇಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನಂತರ ನಡೆದ ಉಪ ಚುನಾವಣೆಯಲ್ಲಿ ಸೋಲುವ ಮೂಲಕ ಮೂಲಕ ಅತಂತ್ರರಾಗಿದ್ದಾರೆ
Recommended Video
ಆದರೆ, ರಾಜ್ಯದಲ್ಲಿ ಉಪ ಚುನಾವಣೆ ನಡೆದು ಸಂಪುಟ ವಿಸ್ತರಣೆ ಆಗುವವರೆಗೆ ನಾವೆಲ್ಲ 17 ಜನರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೆ ಕೊಡುತ್ತಿದ್ದವರ ಮಾತಲ್ಲಿ ಬದಲಾವಣೆ ಆಗುತ್ತಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಸೋತು ಅತಂತ್ರರಾಗಿರುವ ನಾಯಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುತ್ತಿದೆ. ಆಗಾಗ ಹೇಳಿಕೆ ಕೊಟ್ಟು ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೆ ಕೊಡುತ್ತಿದ್ದವರೇ ಮಂತ್ರಿಗಳಾದ ಮೇಲೆ ಮಾತಿನ ಧಾಟಿ ಬದಲಿಸಿದ್ದಾರೆ. ಪರಿಷತ್ ಚುನಾವಣೆ ಸಂದರ್ಭದಲ್ಲಿಈ ಬೆಳವಣಿಗೆ ಅತಂತ್ರರಾದವರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.

ಸಚಿವರ ಯುಟರ್ನ್
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಾಜೀನಾಮೆ ಕೊಟ್ಟು ಅನರ್ಹರಾಗಿ ಕೊನೆಗೆ ಅತಂತ್ರರಾಗಿರುವವರು ಸಿಎಂ ಭೇಟಿ ಮಾಡಿ ಒತ್ತಡ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಚಿವರಾಗುವರೆಗೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಆಗಾಗ ಹೇಳಿಕೆ ಕೊಡುತ್ತಿದ್ದವರು ನಮ್ಮ ಕೈಯಲ್ಲಿ ಏನೂ ಇಲ್ಲ ಎನ್ನುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಆದರೆ ತಪ್ಪಿಯೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಸೋತವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಒತ್ತಡ ಹಾಕುತ್ತಿಲ್ಲ.

ಯಡಿಯೂರಪ್ಪ ಕೈಯಲ್ಲಿಲ್ಲ!
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಮಾತನಾಡಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಎಂಟಿಬಿ ನಾಗರಾಜ್, ವಿಶ್ವನಾಥ್, ರೋಷನ್ ಬೇಗ್ ಹಾಗೂ ಆರ್. ಶಂಕರ್ ಅವರಿಗೆ ಪರಿಷತ್ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪ ಒಬ್ಬರ ಕೈಯಲ್ಲಿ ಇಲ್ಲ ಎಂದು ಯುಟರ್ನ್ ಹೊಡೆದಿದ್ದಾರೆ. ಪರಿಷತ್ ಸ್ಥಾನ ಕೊಡುವುದು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚೆರ್ಚೆಯಾಗುತ್ತದೆ. ನಂತರ ಹೈ ಪವರ್ ಕಮಿಟಿಯಲ್ಲಿ ತೀರ್ಮಾನವಾಗುತ್ತದೆ. ನಾಲ್ವರಿಗೂ ಪರಿಷತ್ ಸ್ಥಾನ ನೀಡುವಂತೆ ಕೇಳಿದ್ದೇವೆ, ಯಾರಿಗೂ ಅಡಚಣೆ ಮಾಡುವಂತದ್ದು ಬಿಜೆಪಿಯಲ್ಲಿ ಇಲ್ಲ, ಅದೆಲ್ಲವೂ ಊಹಾಪೋಹಗಳು ಎಂದಿದ್ದಾರೆ.

ನಾನಿನ್ನೂ ಸಣ್ಣವನು
ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿ ಸರ್ಕಾರ ಬರಲು ಕಾರಣರಾದ ಯಾರಿಗೂ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎನ್ನುತ್ತಿದ್ದ ಸಚಿವ ಸೋಮಶೇಖರ್, ಪಕ್ಷದಲ್ಲಿ ನಾನಿನ್ನು ಸಣ್ಣವನು ಎಂದಿದ್ದಾರೆ. ಈಗತಾನೆ ಬಿಜೆಪಿಗೆ ಬಂದಿದ್ದೇನೆ, ಎಂಪಿ, ವಿಧಾನ ಪರಿಷತ್ ಸದಸ್ಯತ್ವದ ಬಗ್ಗೆ ಮಾತನಾಡುವಷ್ಟು ಪಕ್ಷದಲ್ಲಿ ಬೆಳೆದಿಲ್ಲ, ನಾನಿನ್ನು ಶಿಸ್ತಿನ ಪಕ್ಷದಲ್ಲಿ ಅಂಬೆಗಾಲಿಡುತ್ತಿದ್ದೇನೆ ಎಂದಿದ್ದಾರೆ.
ಯುಟರ್ನ್ ಹೊಡೆದಂತೆ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿಕೆ ಕೊಟ್ಟಿರುವುದು ಅತಂತ್ರರಲ್ಲಿ ಆತಂಕ ಹುಟ್ಟಿಸಿದೆ.

ಅಡ್ಡಗಾಲು ಹಾಕಲ್ಲ
ಯಾರು ಯಾರಿಗೂ ಅಡ್ಡಗಾಲು ಹಾಕುವ ಪ್ರಮೇಯವಿಲ್ಲ. ಮುಖ್ಯಮಂತ್ರಿಗಳು ಯಾರಿಗೆ ಮಾತು ಕೊಟ್ಟಿದ್ದರೊ ಅದೆಲ್ಲವನ್ನು ಈಡೇರಿಸುತ್ತಿದ್ದಾರೆ. ನಾವೆಲ್ಲರೂ ಕೂಡ ಈ ನಾಲ್ಕು ಜನರ ಪರವಾಗಿದ್ದೇವೆ. ಬಿಜೆಪಿ 9 ವಿಧಾನ ಪರಿಷತ್ ಸ್ಥಾನಗಳನ್ನು ಪಡೆಯಲು ಅವಕಾಶವಿದೆ. 5 ವಿಧಾನ ಪರಿಷತ್ ಸ್ಥಾನಗಳಿಗೆ ನಾಮಕರಣ ಮಾಡುವುದಕ್ಕೆ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪರಮಾಧಿಕಾರ ನೀಡಿದ್ದೇವೆ ಎಂದು ಚಾಮರಾಜನಗರದಲ್ಲಿ ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.












Click it and Unblock the Notifications