ಡಿಕೆಶಿ ತಲೆದಂಡದ ಬೇಡಿಕೆ ಬಂದಾಗಲೇ, ಬಿಎಸ್ವೈ ಆಪರೇಷನ್ ಕಮಲದಿಂದ ಹಿಂದಕ್ಕೆ ಸರಿದ್ರಾ?
Recommended Video

'ನೀವು ಮುಖ್ಯಮಂತ್ರಿಯಾಗುತ್ತೀರಾ ಅಂದರೆ ಅದಕ್ಕೆ ನಾನು ವಿರೋಧ ವ್ಯಕ್ತ ಪಡಿಸುತ್ತೇನಾ, ಆದರೆ ನೀವು ಅಲ್ಲಿ ಇದ್ದರೆ ಸಿಎಂ ಆಗುತ್ತೀರಾ' ವಿಪಕ್ಷದ ನಾಯಕ ಯಡಿಯೂರಪ್ಪ, ತಮ್ಮ ಅವಿಶ್ವಾಸ ನಿರ್ಣಯ ಭಾಷಣದಲ್ಲಿ ಡಿ ಕೆ ಶಿವಕುಮಾರ್ ಬಗ್ಗೆ ಹೇಳಿದ್ದ ಮಾತನ್ನು ಒಮ್ಮೆ ಸ್ಮರಿಸಿಕೊಳ್ಳೋಣ.
ಬೆಳಗಾವಿಯ ಸಾಹುಕಾರ, ರಮೇಶ್ ಜಾರಕಿಹೊಳಿಯನ್ನು ಇಟ್ಟುಕೊಂಡು ಬಿಜೆಪಿ ಏನು, ಸಮ್ಮಿಶ್ರ ಸರಕಾರವನ್ನು ಬೀಳಿಸಲು ನೋಡಿತೋ, ಅವರನ್ನೇ ಇಟ್ಟುಕೊಂಡು, ಕಾಂಗ್ರೆಸ್ ಮತ್ತು ಜೆಡಿಎಸ್, ಯಡಿಯೂರಪ್ಪನವರನ್ನು ಆಪರೇಷನ್ ಕಮಲದಿಂದ ಹಿಂದಕ್ಕೆ ಸರಿಯುವಂತೆ ಮಾಡಿದ್ರಾ?
ಆಪರೇಷನ್ ಕಮಲಕ್ಕೆ ಮುಖ್ಯ ಸೂತ್ರಧಾರರಾಗಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಅಥವಾ ಇತರ ಯಾವುದೇ ಆಯಕಟ್ಟಿನ ಹುದ್ದೆಯನ್ನು ಬಯಸಿದವರಲ್ಲ. ಅವರು ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲಿನ ಸಿಟ್ಟಾನಿಂದಾಗಲಿ ಅಥವಾ ರಾಜ್ಯ ಕಾಂಗ್ರೆಸ್ ಮುಖಂಡರ ಮೇಲಿನ ಮನಸ್ತಾಪದಿಂದಲ್ಲ.
ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಟ್ಟರೆ, ಮುಂದೆಂದೂ ನನ್ನಿಂದ ಅಥವಾ ನಮ್ಮಿಂದ ಸಮ್ಮಿಶ್ರ ಸರಕಾರಕ್ಕೆ ತೊಂದರೆ ಬರುವುದಿಲ್ಲ ಎಂದು ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ತಿಳಿಸಿದರೋ, ಅದೇ ಆಪರೇಷನ್ ಕಮಲದಿಂದ ಯಡಿಯೂರಪ್ಪ ಹಿಂದಕ್ಕೆ ಸರಿಯಲು ಕಾರಣವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ರಾಜಕೀಯದಿಂದ ಹೊರತಾದ ಸ್ನೇಹ
ಯಡಿಯೂರಪ್ಪ ಮತ್ತು ಡಿ ಕೆ ಶಿವಕುಮಾರ್ ನಡುವೆ ರಾಜಕೀಯದಿಂದ ಹೊರತಾದ ಸ್ನೇಹವಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಬ್ಬರೂ ನಾಯಕರು ಬೇರೆ ಬೇರೆ ಪಕ್ಷದಲ್ಲಿದ್ದರೂ, ಅವರವರ ವಿಚಾರಕ್ಕೆ ಬಂದಾಗ, ಎಷ್ಟು ಬೇಕೋ ಅಷ್ಟೇ ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತಿದ್ದರು. ಪ್ರಭಲ ನಾಯಕರಾಗಿದ್ದರೂ, ಇಬ್ಬರ ನಡುವೆ ತೀವ್ರ ಮಟ್ಟದ ರಾಜಕೀಯ ಮೇಲಾಟ ನಡೆದ ಉದಾಹರಣೆಗಳು ಕಮ್ಮಿ.

ಯಡಿಯೂರಪ್ಪ, ಡಿಕೆಶಿ
ಕೆಲವು ದಿನಗಳ ಹಿಂದೆ, ನೇರವಾಗಿ ಯಡಿಯೂರಪ್ಪ, ಡಿಕೆಶಿ ಅವರ ಸರಕಾರೀ ನಿವಾಸಕ್ಕೆ ತೆರಳಿದ್ದರು. ತೆಲಂಗಾಣ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಹೋಗಬೇಕಾಗಿದ್ದ ಡಿಕೆಶಿ, ಯಡಿಯೂರಪ್ಪನವರಿಗೋಸ್ಕರ ಕಾದು ಕುಳಿತಿದ್ದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಆ ನಂತರ, ಜಂಟಿಯಾಗಿ ಇಬ್ಬರೂ ಮಾಧ್ಯಮದವರ ಮುಂದೆ ಎದುರಾದರು.

ಸರಕಾರದ ಕೆಲಸಗಳಿಂದ ದೂರವಾಗಿದ್ದ ರಮೇಶ್ ಜಾರಕಿಹೊಳಿ
ಪೌರಾಡಳಿತ ಸಚಿವರಾಗಿದ್ದಾಗಲೇ ಹೆಚ್ಚುಕಮ್ಮಿ ಸರಕಾರದ ಕೆಲಸಗಳಿಂದ ದೂರವಾಗಿದ್ದ ರಮೇಶ್ ಜಾರಕಿಹೊಳಿ, ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಮೇಲಂತೂ ಇನ್ನಷ್ಟು ದೂರವಾದರು. ಮಕರ ಸಂಕ್ರಾಂತಿಯ ಆಸುಪಾಸಿನಲ್ಲಿ ಆಪರೇಷನ್ ಕಮಲದ ರಗಳೆ ವಿಪರಿಮೀತವಾಗಿದ್ದಾಗ, ಕೆಪಿಸಿಸಿ ಉಸ್ತುವಾರಿ ನೇರವಾಗಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಬಂಪರ್ ಆಫರ್ ನೀಡಿದ್ದರು. ಆದರೆ ಅದನ್ನು ರಮೇಶ್ ತಿರಸ್ಕರಿಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಕೂಲ್ ಆಗಿದ್ದ ಕುಮಾರಸ್ವಾಮಿ
ಆಪರೇಷನ್ ಕಮಲದ ವಿಚಾರದಲ್ಲಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ, 'ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಮಾತ್ರ ಗೊತ್ತು, ನಮ್ಮ ಸರಕಾರಕ್ಕೆ ಏನೇನೂ ತೊಂದರೆಯಿಲ್ಲ' ಎಂದು ಕೂಲ್ ಆಗಿದ್ದಾಗಲೇ, ಈ ರಾಜಕೀಯ ಬೇರೆಯದೇ ದಾರಿಯನ್ನು ಹಿಡಿಯುತ್ತಿದೆ ಎಂದು ರಾಜ್ಯದ ಎಲ್ಲಾ ಪಕ್ಷದ ಮುಖಂಡರಿಗೆ ಅರಿವಾಗದೇ ಇರದು.

ಯಡಿಯೂರಪ್ಪ ಕೂಡಾ ಹಿಂದಕ್ಕೆ ಸರಿಯಲು ಆರಂಭಿಸಿದರು
ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡರ ಮೇಲೆ ಬೇಸರಿಸಿಕೊಂಡು ತಮ್ಮ ಕೆಲವು ಶಾಸಕರ ಜೊತೆ ಪಕ್ಷ ಬಿಡಲು ನಿರ್ಧರಿಸಿದ್ದರು. ಯಡಿಯೂರಪ್ಪ ಮತ್ತು ಇತರ ಮುಖಂಡರ ಜೊತೆ ಸಂಪರ್ಕದಲ್ಲಿದ್ದ ರಮೇಶ್, ಅದಕ್ಕೆ ತಕ್ಕಂತೇ ರಾಜಕೀಯ ದಾಳ ಉರುಳಿಸಲು ಆರಂಭಿಸಿದ್ದರು. ಆದರೆ, ಕೊನೆಯ ಹಂತದಲ್ಲಿ ರಮೇಶ್, ಡಿಕೆಶಿಯನ್ನು ಸಚಿವಸ್ಥಾನದಿಂದ ತೆಗೆದರೆ ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿದರೋ, ಅಲ್ಲಿಗೆ ಯಡಿಯೂರಪ್ಪ ಕೂಡಾ ಹಿಂದಕ್ಕೆ ಸರಿಯಲು ಆರಂಭಿಸಿದರು ಎನ್ನುವ ಮಾತು ಕೇಳಿಬರುತ್ತಿದೆ.

ಡಿಕೆಶಿ ಮತ್ತು ಸಮ್ಮಿಶ್ರ ಸರಕಾರ ಎರಡೂ ಸೇಫ್
ಇನ್ನೆಂದೂ ಆಪರೇಷನ್ ಕಮಲಕ್ಕೆ ನಾನು ಕೈಹಾಕುವುದಿಲ್ಲ. ನನ್ನಿಂದ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಭಯಬೇಡ, ನಿಶ್ಚಿಂತೆಯಿಂದ ಸರಕಾರ ನಡೆಸಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಮೇಲ್ನೋಟಕ್ಕೆ ಆಪರೇಷನ್ ಕಮಲ ವಿಫಲವಾಯಿತು ಎನ್ನುವುದು ಸತ್ಯವಾದರೂ, ಡಿಕೆಶಿ-ಬಿಎಸ್ವೈ ಸ್ನೇಹವನ್ನು ಮುಂದಿಟ್ಟುಕೊಂಡೇ ರಾಜಕೀಯ ದಾಳ ಉರುಳಿಸಲಾಯಿತು. ಅಲ್ಲಿಗೆ ಡಿಕೆಶಿ ಮತ್ತು ಸಮ್ಮಿಶ್ರ ಸರಕಾರ ಎರಡೂ ಸೇಫ್..











Click it and Unblock the Notifications