ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಬರಲೇ ಇಲ್ಲ ಕೇಜ್ರಿವಾಲ್: ದೆಹಲಿ, ಪಂಜಾಬಿನಾಚೆಯ ಕನಸು ಕೈಬಿಟ್ಟಿತೇ ಎಎಪಿ?
ಬೆಂಗಳೂರು, ಮೇ 05: ಆಮ್ ಆದ್ಮಿ ಪಕ್ಷ (ಎಎಪಿ) ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ಹವಣಿಸುತ್ತಲೇ ಇದೆ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರಕ್ಕೆ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಪ್ರಚಾರಕ್ಕೆ ಗೈರಾಗಿದ್ದಾರೆ. ಇದು ರಾಜ್ಯದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರ ಬಲವನ್ನು ಕುಂದಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಮೇ 10 ರಂದು ನಡೆಯಲಿರುವ ಕರ್ನಾಟಕ ಚುನಾವಣೆಯ ಪ್ರಚಾರದ ಅಂಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇವಲ ಒಂದು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅದೂ ಮಾರ್ಚ್ ತಿಂಗಳಲ್ಲಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಪಕ್ಷದ ಪರ ಮತ ಯಾಚನೆ ಮಾಡಿದ್ದಾರೆ.

ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದಿದೆ. ಆ ನಂತರ ಕರ್ನಾಟಕ ಚುನಾವಣೆಯು ಎಎಪಿಗೆ ಮೊದಲ ಪ್ರಮುಖ ಚುನಾವಣೆ ಆಗಿದೆ. ಈ ವಾಸ್ತವದ ಹೊರತಾಗಿಯೂ, ಅರವಿಂದ ಕೇಜ್ರಿವಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿಲ್ಲ.
ದೆಹಲಿಯ ಆಗುತ್ತಿರುವ ಬೆಳವಣಿಗೆಗಳು ಅರವಿಂದ ಕೇಜ್ರಿವಾಲ್ ಅವರನ್ನು ರಾಷ್ಟ್ರ ರಾಜಧಾನಿಯ ಹೊರಗೆ ಕದಲದಂತೆ ಮಾಡಿವೆ ಎಂದು ಹೇಳಲಾಗುತ್ತಿದೆ.
ಎಲ್ಲಾ ಇತರ ಪ್ರಮುಖ ಪಕ್ಷಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರನ್ನು ನೇಮಿಸಿದೆ. ಆದರೆ, ಕೇಜ್ರಿವಾಲ್ ಅವರ ಅನುಪಸ್ಥಿತಿಯ ಕಷ್ಟವನ್ನು ಎಎಪಿ ಕಾರ್ಯಕರ್ತರು ಹೆಚ್ಚು ಅನುಭವಿಸುತ್ತಿದ್ದಾರೆ.

ದೆಹಲಿ ಹಾಗೂ ಪಂಜಾಬ್ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎಎಪಿ ಕರ್ನಾಟಕದಲ್ಲಿ ಗಂಭೀರವಾಗಿ ಪ್ರಚಾರ ನಡೆಸದಿರುವುದು ಹಲವು ಶಂಕೆಗಳನ್ನು ಹುಟ್ಟುಹಾಕಿದೆ. ದೆಹಲಿ ಹಾಗೂ ಪಂಜಾಬ್ ನಂತರ ಪಕ್ಷವನ್ನು ವಿಸ್ತರಿಸುವ ಕನಸನ್ನು ಎಎಪಿ ನಾಯಕರು ಕೈಚೆಲ್ಲಿದರೇ ಎಂಬ ಪ್ರಶ್ನಗಳು ಎದ್ದಿವೆ.
ದೆಹಲಿ ಮತ್ತು ಪಂಜಾಬ್ನಲ್ಲಿ ಅಧಿಕಾರದಲ್ಲಿರುವ ಪಕ್ಷವು ಕರ್ನಾಟಕದಲ್ಲಿ ಇನ್ನೂ ನೆಲೆ ಕಂಡುಕೊಳ್ಳಬೇಕಿದೆ. ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಇಲ್ಲಿಯವರೆಗೆ ಖಾತೆ ತೆರೆಯಲು ಎಎಪಿಗೆ ಸಾಧ್ಯವಾಗಿಲ್ಲ. ಆದರೆ, ಈ ಬಾರಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಿದೆ.
ಮಾರ್ಚ್ 4 ರಂದು, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಾವಣಗೆರೆಯಲ್ಲಿ ಪಕ್ಷದ ಚೊಚ್ಚಲ ಸಾರ್ವಜನಿಕ ಸಭೆಯನ್ನು ನಡೆಸಿದರು. ಅವರು ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸೇವೆಯನ್ನು ಭರವಸೆ ನೀಡಿದ್ದಾರೆ.
ಇದಾದ ಬಳಿಕೆ ಕೇಜ್ರಿವಾಲ್ ಅವರು ಮರಳಿ ಕರ್ನಾಟಕಕ್ಕೆ ಬಂದಿಲ್ಲ. ಪಕ್ಷವು ಕೇಜ್ರಿವಾಲ್ ಮತ್ತು ದೆಹಲಿಯ ವಿವಿಧ ಅಭಿವೃದ್ಧಿ ಮಾದರಿಗಳ ಮೇಲೆ ಮಾತ್ರ ಅವಲಂಬಿತವಾಗಿದೆ. ಅವರು ಕರ್ನಾಟಕಕ್ಕೆ ಬರುವ ಒಂದು ದಿನದ ಮೊದಲು, ಎಎಪಿಯಲ್ಲಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಮಾರ್ಚ್ 1 ರಂದು ಆಡಳಿತಾರೂಢ ಬಿಜೆಪಿಗೆ ಸೇರಿದರು. ರಾವ್ ಅವರು 2022 ರಲ್ಲಿ ಸ್ವಯಂ ನಿವೃತ್ತಿ ಪಡೆದು ಎಎಪಿಗೆ ಸೇರಿದ್ದರು. ಅವರೀಗ ಬೆಂಗಳೂರಿನ ಚಿಕ್ಕಪೇಟೆ ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications