ಬಿಜೆಪಿ ಬಲಿ ಹಾಕಲು ಸಿದ್ದರಾಮಯ್ಯರಿಂದ 'ಕನ್ನಡ' ಅಸ್ತ್ರ?
ಬೆಂಗಳೂರು, ಜುಲೈ 19: ಅನಿರೀಕ್ಷಿವಾಗಿ ಚುನಾವಣೆ ಸಮೀಪಿಸುತ್ತಿರುವಾಗಲೇ ಕನ್ನಡ ಧ್ವಜದ ಕೂಗನ್ನು ರಾಷ್ಟ್ರ ಮಟ್ಟಕ್ಕೆ ಮುಟ್ಟಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಹಿನ್ನಲೆಯಲ್ಲಿ, ಜಾತಿ ಮತ್ತು ಹಣಬಲದಲ್ಲೇ ಮುಳುಗೇಳುವ ಚುನಾವಣೆಗಳ ಮಧ್ಯೆ ಕನ್ನಡ ಮತ್ತು ಕನ್ನಡಿಗರ ಭಾವನಾತ್ಮಕತೆಯನ್ನೇ ಸರಕು ಮಾಡಿಕೊಳ್ಳಲು ಹೊರಟಿದ್ದಾರಾ ಸಿದ್ದರಾಮಯ್ಯ ಎಂಬ ಅನುಮಾನಗಳೂ ಕಾಡುತ್ತಿವೆ.
'ಹಿಂದುತ್ವ' ಮತ್ತು 'ದೇಶಪ್ರೇಮ' ಭಾವನೆಯನ್ನು ಕೆರಳಿಸಿ ಓಟು ಗಿಟ್ಟಿಸುವ ಬಿಜೆಪಿಯನ್ನು ಹಣಿಯಲು ಭಾಷಾ ಮತ್ತು ಪ್ರಾಂತೀಯ ಭಾವನೆಯನ್ನು ಸಿದ್ದರಾಮಯ್ಯ ಕೆರಳಿಸಲು ಹೊರಟಂತೆ ಕಾಣಿಸುತ್ತಿದೆ. ಅವರು ಬಿಜೆಪಿಗೆ ಪರ್ಯಾಯವಾಗಿ 'ನಾಡಪ್ರೇಮ' ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಕನ್ನಡ ಪ್ರೇಮ ಮತ್ತು ಕರ್ನಾಟಕದ ವಿಚಾರದಲ್ಲಿ ಪದೇ ಪದೇ ಬಿಜೆಪಿ ಜನರ ಆಕ್ರೋಶಕ್ಕೆ ಆಹಾರವಾಗುತ್ತಿರುವುದು ನೋಡಿದಾಗ ಕಾಂಗ್ರೆಸ್ ತಂತ್ರ ಯಶಸ್ವಿಯಾಗುತ್ತಿರುವುದರ ಮುನ್ಸೂಚನೆಗಳನ್ನು ಕಾಣಿಸುತ್ತಿವೆ; ಹೀಗಾಗಿ 'ಕನ್ನಡ ರಾಜಕಾರಣ'ವನ್ನು ಸಿದ್ದರಾಮಯ್ಯ ಗಟ್ಟಿಯಾಗಿ ಅಪ್ಪಿಕೊಂಡರೆ ಅಚ್ಚರಿಯಿಲ್ಲ.
ಹಾಗಂಥ ಕೇವಲ ರಾಜಕಾರಣಕ್ಕೆ ಮಾತ್ರ ತಮ್ಮ ಕನ್ನಡ ಪ್ರೇಮವನ್ನು ಸಿದ್ದರಾಮಯ್ಯ ಮೆರೆಯುತ್ತಿಲ್ಲ. ಹಲವು ಕನ್ನಡ ಪರ ನಿರ್ಧಾರಗಳ ಮೂಲಕವೂ ಅವರು ಜನ ಮೆಚ್ಚುಗೆಯನ್ನು ಗಳಿಸಿದ್ದು ಕಾಣಿಸುತ್ತಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಹಲವಾರು 'ಕನ್ನಡ' ಕೆಲಸಗಳ ಮೂಲಕ ಸಿಎಂ ಸುದ್ದಿಯಾಗಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.

ಕನ್ನಡಿಗರಿಗೆ ಶೇ. 5 ಮೀಸಲಾತಿ
ಇತ್ತೀಚೆಗೆ ಸಿದ್ದರಾಮಯ್ಯ ಸರಕಾರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರಿಗೆ ಕರ್ನಾಟಕ ಆಡಳಿತ ಸೇವೆಯಲ್ಲಿ ಶೇಕಡಾ 5 ಮೀಸಲಾತಿ ನೀಡಲು ತೀರ್ಮಾನಿಸಿ ಅದಕ್ಕಾಗಿ ಕಾನೂನಿಗೆ ತಿದ್ದುಪಡಿಯನ್ನೂ ಮಾಡಿದ್ದರು.

ಕನ್ನಡ ಕಡ್ಡಾಯ
ಇದಲ್ಲದೆ ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳಲ್ಲೂ 10ನೇ ತರಗತಿವರಗೆ ಕನ್ನಡ ಕಡ್ಡಾಯ ಮಾಡಿ ಸಿದ್ದರಾಮಯ್ಯ ಸರಕಾರ ಆದೇಶ ಹೊರಡಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಹಿಂದೆ 1983ರ ಕನ್ನಡ ಜಾಗೃತ ಸಮಿತಿ (ಇಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ)ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಸಿದ್ದರಾಮಯ್ಯ ಹಲವು ಬಾರಿ ತಮ್ಮ ಕನ್ನಡ ಪ್ರೇಮವನ್ನು ಪರಿಚಯಿಸುತ್ತಾ ಬಂದಿದ್ದಾರೆ.

ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹಾರ
"ಕರ್ನಾಟಕದಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳೂ ಕನ್ನಡ ಕಲಿತುಕೊಳ್ಳಬೇಕು. ಮತ್ತು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡ ಮತ್ತು ಕನ್ನಡಿಗರ ವಿರುದ್ಧ ಇರುವ ಯಾವ ಅಧಿಕಾರಿಗಳನ್ನೂ ನಾವು ಸಹಿಸಿಕೊಳ್ಳುವುದಿಲ್ಲ ," ಎಂದು ಸ್ವತಃ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಕನ್ನಡದಲ್ಲಿದ್ದ ಕಡತ ನೋಡಲು ನಿರಾಕರಿಸಿದ ಐಎಎಸ್ ಅಧಿಕಾರಿಯ ವಿಚಾರದ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿ ಅಧಿಕಾರಿಗಳ ಚಳಿ ಬಿಡಿಸಿದ್ದರು.

ಮೆಟ್ರೋದಲ್ಲಿ ಹಿಂದಿ ಹೇರಿಕೆ
ಹಾಗಂಥ ಸಿದ್ದರಾಮಯ್ಯ ಅಸೂಕ್ಷ್ಮವಾಗಿಯೂ ನಡೆದುಕೊಳ್ಳುತ್ತಿಲ್ಲ. ಕನ್ನಡ ವಿಚಾರಕ್ಕೆ ಬಂದಾಗ ತುಂಬಾ ಸೂಕ್ಷಮ ಹೆಜ್ಜೆಗಳನ್ನೂ ಇಡುತ್ತಿದ್ದಾರೆ. ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟ ನಡೆದಾಗ, 'ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಇಂಥ ಕ್ರಮದ ವಿರುದ್ಧ ರಾಜ್ಯ ಸರಕಾರ ಹೋರಾಟ ನಡೆಸಲಿದೆ,' ಎಂದಷ್ಟೇ ಹೇಳಿ ಹೋರಾಟಗಾರರಿಗೆ ಹೋರಾಟ ಮುಂದುವರಿಸಲು ಅನುವು ಮಾಡಿಕೊಟ್ಟಿದ್ದರು.
ನೇರವಾಗಿ ಆದೇಶ ನೀಡದೆ ಹಿಂಬಾಗಿಲ ಮೂಲಕ ಹಿಂದಿ ಬೋರ್ಡ್ ಗೆ ಬಣ್ಣ ಬಳಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು.

ಜಾತಿಗಿಂತ ಕನ್ನಡವೇ ಸೂಕ್ತ
ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ನಿರಂತರ ಯತ್ನ ನಡೆಸುತ್ತಿದ್ದರೂ ಇದನ್ನು ಮೀರಿ ಒಕ್ಕಲಿಗ ಮತ್ತ ಲಿಂಗಾಯುತ ಸಮುದಾಯಗಳು ಬಲಿಷ್ಠವಾಗಿದೆ ಎಂಬುದನ್ನು ಅರಿತಿದ್ದಾರೆ. ಹೀಗಾಗಿ ಎಲ್ಲರನ್ನೂ ತಲುಪುವ ಟ್ರಂಪ್ ಕಾರ್ಡ್ ಒಂದನ್ನು ಹುಡುಕಾಟ ಮಾಡುತ್ತಿದ್ದಾಗ ಅವರಿಗೆ ಸಿಕ್ಕಿದ್ದು ಕನ್ನಡ.
ಇದೀಗ ಕನ್ನಡ ಭಾವನತ್ಮಕತೆಯನ್ನೇ ಅವರು ಬಂಡವಾಳ ಮಾಡಿಕೊಂಡು ಮತಬೇಡೆಗೆ ಇಳಿಯುವ ಎಲ್ಲಾ ಸಾಧ್ಯತೆಗಳಿವೆ.












Click it and Unblock the Notifications