ಅಕ್ರಮ ಹಣ ಪತ್ತೆ ಪ್ರಕರಣ: ಸಚಿವರ ರಕ್ಷಣೆಗೆ ನಿಂತರಾ ಕೈ ಮುಖಂಡರು?
ಬೆಂಗಳೂರು, ಜನವರಿ 05: ವಿಧಾನಸೌಧದಲ್ಲಿ ಲಕ್ಷಾಂತರ ಹಣ ಪತ್ತೆ ಪ್ರಕರಣ ಕಾಂಗ್ರೆಸ್ನ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಾಲಿಗೆ ಸುತ್ತಿಕೊಳ್ಳಲು ಪ್ರಾರಂಭಿಸಿದೆ. ಆದರೆ ಕಾಂಗ್ರೆಸ್ನ ಸಚಿವರು ಹಾಗೂ ಮುಖಂಡರು ತಮ್ಮ ಪಕ್ಷದ ಸಚಿವರನ್ನು ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾದಂತೆ ಗೋಚರವಾಗುತ್ತಿದೆ.
ಪುಟ್ಟರಂಗ ಶೆಟ್ಟಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಮುಖಂಡರು ನೀಡಿರುವ ಹೇಳಿಕೆ ಗಮನಿಸಿದರೆ ಇದೇ ಅನುಮಾನ ಮೂಡಿಸುತ್ತಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು, ತನಿಖೆಗೆ ಮೊದಲೇ ತೀರ್ಪು ನೀಡುವಂತಾ ಹೇಳಿಕೆ ನೀಡಿದ್ದಾರೆ. 'ಕಚೇರಿ ಸಿಬ್ಬಂದಿ ಬಳಿ ಹಣ ಸಿಕ್ಕರೆ ಅದಕ್ಕೆ ಸಚಿವರು ಏನು ಮಾಡಲು ಆಗುತ್ತೆ' ಎಂದಿದ್ದಾರೆ ಗೃಹ ಸಚಿವರು.
ಹಣದ ಜೊತೆ ಸಿಕ್ಕಿಬಿದ್ದ ವ್ಯಕ್ತಿಯನ್ನು ನೋಡಿಯೇ ಇಲ್ಲ: ಪುಟ್ಟರಂಗ ಶೆಟ್ಟಿ
ಸಚಿವರ ಕಚೇರಿಯಲ್ಲಿ ಹಲವಾರು ಜನ ಸಿಬ್ಬಂದಿ ಇರುತ್ತಾರೆ ಅವರ ಬಳಿ ಹಣ ಸಿಕ್ಕರೆ ಅದಕ್ಕೂ ಸಚಿವರಿಗೂ ಏನು ಸಂಬಂಧ ಎಂದು ಹೇಳಿದ್ದಾರೆ ಎಂ.ಬಿ.ಪಾಟೀಲ್.
'ರಫೇಲ್ನಷ್ಟು ದೊಡ್ಡ ಹಗರಣವಲ್ಲ ಬಿಡಿ'
ಇದೇ ಪ್ರಕರಣದ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ 'ರಫೇಲ್ ಹಗರಣದಲ್ಲಿ ನೂರಾರು ಕೋಟಿ ಹಗರಣವನ್ನು ಕೇಂದ್ರ ಮಾಡಿದೆ, ಅದರ ಮುಂದೆ 20 ಲಕ್ಷ ಎಲ್ಲಾ ಜುಜುಬಿ' ಎಂದು ಪ್ರಕರಣವನ್ನು ಮಾತಿನಲ್ಲೇ ಮರೆಮಾಚಲು ಯತ್ನಿಸಿದ್ದಾರೆ.
ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ
'ಹಣ ಹೊಂದಿದ್ದ ನೌಕರರನ್ನು ಅಮಾನತು ಮಾಡಿ'
ಸಿದ್ದರಾಮಯ್ಯ ಅವರು ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಣವನ್ನು ಹೊಂದಿದ್ದ ಗುತ್ತಿಗೆ ಆಧಾರದ ನೌಕರ ಮೋಹನ್ ನನ್ನು ಕೆಲಸದಿಂದ ಅಮಾನತುಮಾಡಬೇಕು' ಎಂದು ಹೇಳಿ ಮೋಹನ್ನನ್ನೇ ಆರೋಪಿಯಾಗಿಸುವ ಯತ್ನ ಮಾಡಿದ್ದಾರೆ.
ಪುಟ್ಟರಂಗ ಶೆಟ್ಟಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಯಡಿಯೂರಪ್ಪ
ಹರಿಹಾಯುತ್ತಿರುವ ವಿರೋಧ ಪಕ್ಷಗಳು
ಕಾಂಗ್ರೆಸ್ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಅಥವಾ ತಮ್ಮ ಪಕ್ಷದ ಸಚಿವರನ್ನು ಕಾಪಾಡಲು ಟೊಂಕ ಕಟ್ಟಿದಂತೆ ಕಾಣುತ್ತಿದೆ. ಸರ್ಕಾರದ ಮೂಲಕ ಪೊಲೀಸರ ಮೇಲೆ ಪ್ರಭಾವ ಬಳಸುವ ಸಾಧ್ಯತೆಯೂ ಇದೆ ಎಂದು ಈಗಾಗಲೇ ವಿರೋಧ ಪಕ್ಷಗಳು ಹೇಳುತ್ತಿವೆ.
ಪುಟ್ಟರಂಗ ಶೆಟ್ಟಿ ರಾಜೀನಾಮೆಗೆ ಒತ್ತಾಯ
ಇದೇ ಸಮಯ, ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ವಿರೋಧ ಪಕ್ಷ ಒತ್ತಾಯಿಸಿದೆ. ಯಡಿಯೂರಪ್ಪ ಹಾಗೂ ಸಿ.ಟಿ.ರವಿ ಅವರು ಮಾತನಾಡಿ, ಈ ಕೂಡಲೇ ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಜೆಡಿಎಸ್ನ ಬಸವರಾಜ ಹೊರಟ್ಟಿ ಸಹ ಇದಕ್ಕೆ ದನಿಗೂಡಿಸಿದ್ದಾರೆ.
ತನಿಖೆಗೆ ಆದೇಶ: ಕುಮಾರಸ್ವಾಮಿ
ಪ್ರಕರಣದ ಬಗ್ಗೆ ಹುಬ್ಬಳ್ಳಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಕುಮಾರಸ್ವಾಮಿ ಅವರು, ಈ ಪ್ರಕರಣದ ತನಿಖೆಗೆ ಆದೇಶ ನೀಡಲಾಗುವುದು. ಪ್ರಕರಣದ ಮೇಲೆ ತಾವು ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.