ಬೇಸಿಗೆ ರಜೆಯಲ್ಲಿ ಕರ್ನಾಟಕದ ಶಾಲಾ ಶಿಕ್ಷಕರಿಗೆ ಸಮೀಕ್ಷೆಯ ಕೆಲಸ
ಬೆಂಗಳೂರು, ಏಪ್ರಿಲ್ 22: ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ್ದ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅಂಗೀಕರಿಸಿದೆ. ಒಳಮೀಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷೆಯನ್ನು ನಡೆಸಲು ಸರ್ಕಾರ ಆದೇಶವನ್ನು ಹೊರಡಿಸಿದೆ. ಈಗ ಸಮೀಕ್ಷೆ ಕಾರ್ಯ ಶಿಕ್ಷಕರಿಗೆ ಬರಲಿದೆ.
ಈ ಕುರಿತು ಆಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಜಯಶ್ರೀ ಶಿಂತ್ರಿ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಗೌ. ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಕ್ರಮವಹಿಸಲು ಸರ್ಕಾರದಿಂದ ನಡೆಸಲಾಗುತ್ತಿರುವ ಸಮೀಕ್ಷೆಗೆ ಶಿಕ್ಷಣ ಇಲಾಖೆಯಿಂದ ಗಣತಿದಾರರನ್ನು ನೇಮಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಏಕ ಸದಸ್ಯ ಆಯೋಗವು ದಿನಾಂಕ 27/03/2025 ರಂದು ಮುಖ್ಯಮಂತ್ರಿಗಳಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕಾಗಿದ್ದು, ಅದರಂತೆ ಸಮೀಕ್ಷೆ ನಡೆಸಲು ಶಿಫಾರಸ್ಸು ಮಾಡಿರುತ್ತದೆ.
ಸದರಿ ಸಮೀಕ್ಷೆಯನ್ನು ನಡೆಸಲು ಅಗತ್ಯವಿರುವ ಶಿಕ್ಷಕರನ್ನು ಪಡೆಯುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸುವಂತೆ ನಿರ್ದೇಶನವಿರುತ್ತದೆ. ಸದರಿ ಸಮೀಕ್ಷೆ ನಡೆಸಲು ಜಿಲ್ಲಾವಾರು ಒಟ್ಟು 29330 ಗಣತಿದಾರರ ಅವಶ್ಯವಿದ್ದು ಹಾಗೂ ಶೇ 20% (ಅಂದಾಜು 6000) ಗಣತಿದಾರರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಿದ ಸಿಬ್ಬಂದಿಗಳನ್ನು ನಿಯೋಜಿಸಲು ಕೋರಿದ್ದು, ಜನಸಂಖ್ಯಾವಾರು ಪ್ರತಿ ಜಿಲ್ಲೆಗೆ ಸಮೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಶಿಕ್ಷಕರನ್ನು ದಿನಾಂಕ 20/04/2025 ರಿಂದ 20/05/2025 ರವರೆಗೆ (ತರಬೇತಿಯ ಅವಧಿಯನ್ನೊಳಗೊಂಡಂತೆ) ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಕೋರಿರುತ್ತಾರೆ.
ದಿನಾಂಕ 16/4/2025 ರಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯನ್ವಯ ಸದರಿ ಸಮೀಕ್ಷೆಯನ್ನು Booth level officers model ಮೂಲಕ ನಡೆಸಬೇಕೆಂದು ನಿರ್ಣವಾಗಿರುತ್ತದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಗುರುತಿಸಿರುವ ಒಟ್ಟಾರೆ 58932 Booth level officers ಇರುತ್ತಾರೆಂದು ತಿಳಿಸಿದ್ದು, ಸಮೀಕ್ಷೆಗೆ ಅಗತ್ಯವಿರುವ ಜಿಲ್ಲಾವಾರು Enumerators ಗಳ ಸಂಖ್ಯಾಪಟ್ಟಿಯನ್ನು ಕಳುಹಿಸಿದೆ. ಸದರಿ ಸಭೆಯಲ್ಲಿ ನಿರ್ಣಯವಾದಂತೆ ಸಮೀಕ್ಷೆಗೆ Enumerators ಗಳನ್ನಾಗಿ ಶಿಕ್ಷಕರನ್ನು ಮಾತ್ರ ನೇಮಿಸುವಂತೆ ಹಾಗೂ ಆಶಾ ಕಾರ್ಯಕರ್ತರು/ ಅಗನವಾಡಿ ಶಿಕ್ಷಕರನ್ನು ಈ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದೆಂದು ನಿರ್ದೇಶನವಿರುತ್ತದೆ.
ಸಮೀಕ್ಷಾ ಕಾರ್ಯಕ್ಕೆ ಒಟ್ಟಾರೆ 58932 ಶಿಕ್ಷಕರನ್ನು Booth level officers ಗಳಾಗಿ ಗುರುತಿಸಲು, ಅದರೊಂದಿಗೆ ಶೇ 10 ರಷ್ಟು ಶಿಕ್ಷಕರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲು ಮತ್ತು 10 ರಿಂದ 12 Enumerators ಗಳ ಸಮೀಕ್ಷೆಯನ್ನು ನಡೆಸಿ ಅವರು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಲು ಒಬ್ಬ Supervisor ಅನ್ನು ನೇಮಿಸಬೇಕಾಗಿದ್ದು, Supervisor ಗಳಾಗಿ ಶಾಲೆಯ ಮುಖ್ಯ ಶಿಕ್ಷರನ್ನು ನೇಮಿಸಲು ತಿಳಿಸಲಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯಿಂದ Supervisor/ Enumerators ಗಳನ್ನು ಗುರುತಿಸಿ ಸಲ್ಲಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ಹೊರಡಿಸಲಿರುವರೆಂದು ಆದೇಶವಾಗಿರುತ್ತದೆ.
ಆದೇಶದಲ್ಲಿ ಸೂಚಿಸಿರುವಂತೆ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಅವಶ್ಯವಿರುವ ಗಣತಿದಾರರು, ಶೇ 10 ಹೆಚ್ಚುವರಿ (ಕಾಯ್ದಿರಿಸಿದ) ಗಣತಿದಾರರು ಹಾಗೂ 10-12 ಗಣತಿದಾರರಿಗೊಬ್ಬರಂತೆ Supervisor ಗಳನ್ನು ಗುರುತಿಸಿ ಸದರ ಮಾಹಿತಿಯನ್ನು ತುರ್ತಾಗಿ ಸಿದ್ಧಪಡಿಸಿ ತಮ್ಮ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಹಾಗೂ ಸದರ ಮಾಹಿತಿಯ ಒಂದು ಪ್ರತಿಯನ್ನು ಕಛೇರಿಗೆ ಸಲ್ಲಿಸಲು ಸೂಚಿಸಿದೆ.
ಸಿದ್ದರಾಮಯ್ಯ ಪೋಸ್ಟ್: ಸಮೀಕ್ಷೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದರು. ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅಂಗೀಕರಿಸಿದೆ.
ಈ ಆಯೋಗವು ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು ಎಂಬುದು ಪ್ರಮುಖ ಶಿಫಾರಸು ಆಗಿದೆ. ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವರ್ಗೀಕರಣಗೊಳಿಸಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ನಾಗಮೋಹನ್ ದಾಸ್ ಆಯೋಗದವರ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಒಳ ಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು ಎರಡು ತಿಂಗಳವೆರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು.












Click it and Unblock the Notifications