ಬಿಎಸ್ವೈ, ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಆರಂಭ; ವಿವರ ಇಲ್ಲಿದೆ
ರಾಯಚೂರು, ಅಕ್ಟೋಬರ್ 11: ಚುನಾವಣೆಗೂ ಮುನ್ನ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಜನಸಂಕಲ್ಪ ಯಾತ್ರೆಗೆ ಮಂಗಳವಾರ ರಾಯಚೂರಿನಲ್ಲಿ ಚಾಲನೆ ನೀಡಲಾಗುತ್ತಿದೆ.
ಮಂಗಳವಾರ ರಾಯಚೂರಿನ ಗಿಲ್ಲೆಸುಗೂರು ಗ್ರಾಮದಲ್ಲಿ ಜನಸಂಕಲ್ಪ ಯಾತ್ರೆಯ ಮೊದಲ ಸಮಾವೇಶ ನಡೆಯಲಿದೆ. ಬಿಜೆಪಿ ಮಿಷನ್ 150 ಸಾಧಿಸುವ ನಿಟ್ಟಿನಲ್ಲಿ ನಮ್ಮ ನಡೆ ವಿಜಯ ಕಡೆ ಎಂಬ ವಿಶ್ವಾಸದೊಂದಿಗೆ ರಾಜ್ಯ ನಾಯಕರ ಎರಡು ತಂಡಗಳು ಪ್ರವಾಸಕ್ಕೆ ಸಜ್ಜಾಗಿದೆ. 40 % ಕಮಿಷನ್ ಆರೋಪದಿಂದ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಆಡಳಿತ ಪಕ್ಷ ಈ ಯಾತ್ರೆಯ ಮೂಲಕ ಆಡಳಿತ ಪರ ಅಲೆಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಕರ್ನಾಟಕದಲ್ಲಿ ಅಭಿವೃದ್ಧಿ ವಂಚಿತ ಜಿಲ್ಲೆಯಲ್ಲಿ ಒಂದಾಗಿರುವ ರಾಯಚೂರನ್ನೇ ಬಿಜೆಪಿ ಆಯ್ಕೆ ಮಾಡಿಕೊಂಡಿರುವುದು ಮತ್ತೊಂದು ವಿಶೇಷ. ಈ ಯಾತ್ರೆ ಒಟ್ಟು 26 ದಿನಗಳ ಕಾಲ ಈ ಯಾತ್ರೆ ನಡೆಯಲಿದ್ದು ಅಕ್ಟೋಬರ್ 11ರಿಂದ ಡಿಸೆಂಬರ್ 25ರವರೆಗೆ ಈ ಯಾತ್ರೆ ನಡೆಯಲಿದೆ. ರಾಯಚೂರು, ಕೊಪ್ಪಳ, ವಿಜಯಪುರ, ವಿಜಯನಗರ, ಬೀದರ್, ಯಾದಗಿರಿ, ಕಲಬುರಗಿ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಸೇರಿದಂತೆ ಒಟ್ಟು 50ಕ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸಂಕಲ್ಪ ಯಾತ್ರೆ ಹಾದು ಹೋಗಲಿದೆ.

ಯಾತ್ರೆ ನಡುವೆ 7 ಸಮಾವೇಶ
ಒಟ್ಟು 26 ದಿನಗಳ ಈ ಯಾತ್ರೆಯ ಮಧ್ಯೆ ಏಳು ಬೃಹತ್ ಸಮಾವೇಶಗಳು ನಡೆಯುಲಿವೆ. ಅಕ್ಟೋಬರ್ 16ಕ್ಕೆ ಮೈಸೂರಿನಲ್ಲಿ ಎಸ್ಸಿ ಮೋರ್ಚಾ ಸಮಾವೇಶ, ಅಕ್ಟೊಬರ್ 30ಕ್ಕೆ ಕಲಬುರಗಿಯಲ್ಲಿ ಒಬಿಸಿ ಮೋರ್ಚಾ ಸಮಾವೇಶ, ನವೆಂಬರ್ 13 ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ನವೆಂಬರ್ 27ಕ್ಕೆ ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ, ಡಿಸೆಂಬರ್ 11ಕ್ಕೆ ಬಳ್ಳಾರಿಯಲ್ಲಿ ಎಸ್.ಟಿ. ಮೋರ್ಚಾ ಸಮಾವೇಶ, ಡಿ.ಸೆಂಬರ್ 25ಕ್ಕೆ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಜನವರಿ 8ಕ್ಕೆ ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಸಮಾವೇಶಗಳು ನಡೆಯಲಿವೆ.

ರಾಷ್ಟ್ರೀಯ ನಾಯಕರ ಭಾಗಿ
ಈ 7 ಸಾಮಾವೇಶಗಳ ಪೈಕಿ ಒಂದು ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 10 ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡುಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.

ಬಿಎಸ್ವೈ-ಬೊಮ್ಮಾಯಿ ಯಾತ್ರೆಯ ವೇಳಾಪಟ್ಟಿ
ಅಕ್ಟೋಬರ್ 11ರ ಬೆಳಗ್ಗೆ 11ಕ್ಕೆ ರಾಯಚೂರು ಗ್ರಾಮಾಂತರ, ರಾಯಚೂರು ಜಿಲ್ಲೆ, ಅಕ್ಟೋಬರ್ 12ರ ಬೆಳಗ್ಗೆ 11ಕ್ಕೆ ಹೊಸಪೇಟೆ, ವಿಜಯನಗರ ಜಿಲ್ಲೆ, ಮಧ್ಯಾಹ್ನ 3ಕ್ಕೆ ಕುಷ್ಟಗಿ, ಕೊಪ್ಪಳ ಜಿಲ್ಲೆ, ಅಕ್ಟೋಬರ್ 13ರ ಬೆಳಗ್ಗೆ 11ಕ್ಕೆ ಹೂವಿನಹಡಗಲಿ, ವಿಜಯನಗರ ಜಿಲ್ಲೆ, ಮಧ್ಯಾಹ್ನ 3ಕ್ಕೆ ಸಿರಗುಪ್ಪ, ಬಳ್ಳಾರಿ ಜಿಲ್ಲೆ, ಅಕ್ಠೋಬರ್ 18ರ ಬೆಳಗ್ಗೆ 11ಕ್ಕೆ ಔರಾದ್, ಮಧ್ಯಾಹ್ನ 3ಕ್ಕೆ ಹುಮ್ನಾಬಾದ್, ಬೀದರ್ ಜಿಲ್ಲೆ. ಅಕ್ಟೋಬರ್ 19ರ ಬೆಳಗ್ಗೆ 11ಕ್ಕೆ ಶಹಾಪುರ, ಮಧ್ಯಾಹ್ನ 3ಕ್ಕೆ ಕಲಬುರಗಿ ಗ್ರಾಮಾಂತರ, ಅಕ್ಟೋಬರ್ 23 ಬೆಳಗ್ಗೆ 11ಕ್ಕೆ ಚಿತ್ತಾಪುರ, ಮಧ್ಯಾಹ್ನ 3ಕ್ಕೆ ಆಳಂದ, ಕಲಬುರಗಿ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ.

ವಾರದಲ್ಲಿ 3 ದಿನ ಆರು ಕ್ಷೇತ್ರ
ವಾರದಲ್ಲಿ ಮೂರು ದಿನ ಆರು ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ಕಟೀಲ್ ತಂಡ 50 ಕ್ಷೇತ್ರ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ತಂಡ 50 ಮತ್ತು ಅರುಣ್ ಸಿಂಗ್ 25 ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 25 ರೊಳಗೆ ಒಟ್ಟು 125 ಕ್ಷೇತ್ರ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಳಿನ್ ತಂಡ ಯಾತ್ರೆ ಆರಂಭಿಸಲಿದೆ. ರಾಜ್ಯ ನಾಯಕರ ಎರಡು ತಂಡಗಳ ಜನಸಂಕಲ್ಪ ಯಾತ್ರೆ ಹಾಗೂ ಸಮಾವೇಶಗಳಲ್ಲಿ ಕೇಂದ್ರ, ರಾಜ್ಯದ ಸಚಿವರು, ಹಾಲಿ ಮಾಜಿ ಸಂಸದ-ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.












Click it and Unblock the Notifications