ಬರ ಪರಿಹಾರ ಕೇಳಿದ ರೈತರ ಮೇಲೆ ಸಚಿವ ದೇಶಪಾಂಡೆ ಉಡಾಫೆ
ಅಲ್ಲಾ ಸ್ವಾಮೀ.. ಸಚಿವರೇ, ಬರ ಅಧ್ಯಯನಕ್ಕೆ, ರೈತರ ಸಂಕಷ್ಟ ವಿಚಾರಿಸಿಕೊಳ್ಳಲಿಕ್ಕೆ ಹೋದಾಗ ರೈತರು ಸರಕಾರದಿಂದ ಬರ/ಬೆಳೆ ಪರಿಹಾರ ಕೇಳದೇ ಇರ್ತಾರಾ? ರೈತರು ತಮ್ಮ ಸಮಸ್ಯೆಗಳನ್ನು ನಿಮ್ಮ ಬಳಿ ತೋಡಿಕೊಳ್ಳೋದೇ ತಪ್ಪಾ?
ಮೊದಲೇ ಭೀಕರ ಬರದಿಂದ ತತ್ತರವಾಗಿರುವ ರೈತರ ಸಮಸ್ಯೆಗಳನ್ನು ಆಲಿಸುವುದನ್ನು ಬಿಟ್ಟು, ಅವರಿಗೆ ಸಾಂತ್ವನ, ಧೈರ್ಯ ತುಂಬುವುದನ್ನು ಬಿಟ್ಟು ಪರಿಹಾರ ಕೇಳಿದ್ದೇ ತಪ್ಪು ಎನ್ನುವ ಹಾಗೇ, ಅವರ ವಿರುದ್ದ ವಾಗ್ದಾಳಿ ನಡೆಸುವುದು ಯಾವ ನ್ಯಾಯ? ( 6 ಬರಪೀಡಿತ ಜಿಲ್ಲೆಗಳಿಗೆ ಸಿಎಂ ಪ್ರವಾಸ)
ಬೃಹತ್ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆಯವರ ನೇತೃತ್ವದ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯು, ಗುರುವಾರ (ಏ 22) ಗದಗ ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಕೈಕೊಂಡ ಬರ ಕಾಮಗಾರಿಗಳನ್ನು ವೀಕ್ಷಿಸಲು ತೆರಳಿತ್ತು.[ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ]

ಇವರಿಗೆ ರಾಜ್ಯ ಯೋಜನೆ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್, ಕೃಷಿ ಸಚಿವ ಕೃಷ್ಣ ಭೈರೇಗೌಡ ಸಾಥ್ ನೀಡಿದ್ದರು. ಬರ ಅಧ್ಯಯನಕ್ಕೆಂದು ದೇಶಪಾಂಡೆ ನೇತೃತ್ವದ ತಂಡ ಜಿಲ್ಲೆಯ ಶ್ಯಾಗೋಟಿ ಗ್ರಾಮಕ್ಕೆ ಬಂದಾಗ ರೈತರು ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.
ಅಷ್ಟಕ್ಕೇ ಸಿಟ್ಟಾದ ದೇಶಪಾಂಡೆ ಸಾಹೇಬ್ರು, ಬೆಳೆ ಪರಿಹಾರದ ಹಣ ಆ ಪಕ್ಷದ ಅಪ್ಪನ ಮನೆಯ ದುಡ್ಡಲ್ಲ, ಕೇಂದ್ರ ಸರಕಾರ ಪರಿಹಾರ ನೀಡದಿದ್ದರೆ ನಾವೆಲ್ಲಿಂದ ಕೊಡೋಣ ಎಂದು ಅನಾವಶ್ಯಕವಾಗಿ ರೈತರ ಮೇಲೆ ಕೂಗಾಡಿದ್ದಾರೆ.
ಆಗ ತಂಡದ ಜೊತೆಗಿದ್ದ ಬಿಜೆಪಿ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಸಚಿವರ ವರ್ತನೆಗೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತ ಪಡಿಸಿದರು.
ಎಲ್ಲದಕ್ಕೂ ಕೇಂದ್ರವನ್ನು ಬೊಟ್ಟು ಮಾಡುವುದನ್ನು ಬಿಡಿ.. ಕಷ್ಟದಲ್ಲಿರುವ ರೈತರ ಜೊತೆ ನೀವು ಮಾತನಾಡುವ ರೀತಿ ಸರಿಯಲ್ಲ, ಹಿರಿಯರಾದ ನೀವು ಹೀಗೆ ನಡೆದುಕೊಂಡರೆ ಹೇಗೆ ಎಂದು ಶಂಕನೂರ, ದೇಶಪಾಂಡೆಯವರನ್ನು ಪ್ರಶ್ನಿಸಿದ್ದಾರೆ.

ನಂತರ ತಣ್ಣಗಾದ ದೇಶಪಾಂಡೆ ಬರ ಮತ್ತು ಬೆಳೆ ಪರಿಹಾರಕ್ಕೆ ಸರಕಾರ ತೆಗೆದುಕೊಂಡ ಕ್ರಮವನ್ನು ವಿವರಿಸಿದರು. ಭೀಕರ ಬರದ ಹಿನ್ನಲೆಯಲ್ಲಿ ನಗರ ಅಥವಾ ಗ್ರಾಮಗಳ ಜನವಸತಿಗಳಿಗೆ ನೀರು ಪೂರೈಸಲು ರಾಜ್ಯ ಸರಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಎಂದು ದೇಶಪಾಂಡೆ ಹೇಳಿದರು.
ನಂತರ ಶ್ಯಾಗೋಟಿ ಗ್ರಾಮದಲ್ಲಿನ 12.5 ಎಕರೆ ವ್ಯಾಪ್ತಿಯ ಕೆರೆಯ ಹೂಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ತೆಗೆಯುತ್ತಿರುವ ಕಾಮಗಾರಿಯನ್ನು ತಂಡ ವೀಕ್ಷಿಸಿತು. ನಂತರ ಡಂಬಳದ ಸಮೀಪದ ತೋಂಟದಾರ್ಯ ಮಠದ ಜಾಗೆಯಲ್ಲಿ ಮೇವು ಬ್ಯಾಂಕ್ ಸ್ಥಳವನ್ನು ಪರಿಶೀಲಿಸಿತು.












Click it and Unblock the Notifications