ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ : ಗುರುವಾರದ 7 ಬೆಳವಣಿಗೆ
ಬೆಂಗಳೂರು, ಆಗಸ್ಟ್ 3: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ಮನೆ ಹಾಗೂ ಕಚೇರಿಗಳ ಮೇಲೆ ಗುರುವಾರವೂ ಐಟಿ ದಾಳಿ ಮುಂದುವರಿದಿದೆ. ಡಿಕೆಶಿ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ.
ಈಗಲ್ಟನ್ ರೆಸಾರ್ಟ್ ಗೆ ಮಾಗಡಿ ಶಾಸಕ ಬಾಲಕೃಷ್ಣ ಭೇಟಿ, ಸಿದ್ದರಾಮಯ್ಯ-ಪರಮೇಶ್ವರ್ ಸುದೀರ್ಘ ಮಾತುಕತೆ, ದೆಹಲಿ, ಹಾಸನ, ಬೆಂಗಳೂರಿನಲ್ಲಿ ಮುಂದುವರಿದ ದಾಳಿ, ದಾಖಲೆಗಳ ಪರಿಶೀಲನೆ, ಲಾಕರ್ ತೆರೆಯಲು ಅಧಿಕಾರಿಗಳ ಹರಸಾಹಸ.. ಹೀಗೆ ಗುರುವಾರದ ಸುದ್ದಿಗಳೆಲ್ಲಾ ಡಿಕೆಶಿ ಸುತ್ತಲೇ ಗಿರಕಿ ಹೊಡೆಯುತ್ತಿವೆ.

ಅಲ್ಲೇ ಊಟ, ಅಲ್ಲೇ ನಿದ್ದೆ, ಅಲ್ಲೇ ತನಿಖೆ
ಡಿಕೆ ಶಿವಕುಮಾರ್ ಅವರ ಮಾವನ ಮೈಸೂರಿನ ಮನೆ, ಆಪ್ತ ದ್ವಾರಕನಾಥ್ ಹಾಗೂ ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ರಾತ್ರಿಯೂ ಮನೆಯಿಂದ ಹೊರಬರಲಿಲ್ಲ. ಮನೆಗೇ ಸಹಾಯಕರ ಮೂಲಕ ಊಟ ತರಿಸಿಕೊಂಡು ಅಲ್ಲೇ ವಾಸ್ತವ್ಯ ಹೂಡಿದ್ದರು.
ಗುರುವಾರ ಬೆಳಗಾಗುತ್ತಿದ್ದಂತೆ ಮತ್ತೆ ತಮ್ಮ ದಾಳಿ ಮುಂದುವರಿಸಿದ್ದಾರೆ.

ಹಾಸನ, ದೆಹಲಿಯಲ್ಲಿ ದಾಳಿ
ಬುಧವಾರ ರಾತ್ರಿ ಹೊಸದಾಗಿ ಹಾಸನದಲ್ಲಿರುವ ಡಿಕೆ ಶಿವಕುಮಾರ್ ಆಪ್ತರ ಮನೆ ಮೇಲೆ ದಾಳಿ ನಡೆದಿತ್ತು. ಮಾಜಿ ಸಚಿವ ಬಿ. ಶಿವರಾಂ ಅಳಿಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆದಿತ್ತು. ಸಚಿನ್ ನಾರಾಯಣ್ ಅವರ ಮನೆ, ಹೋಟೆಲ್, ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆದಿದ್ದು, ಗುರುವಾರವೂ ಪರಿಶೀಲನೆ ಮುಂದುವರೆದಿದೆ.
ಐಟಿ ಅಧಿಕಾರಿಗಳು ದೆಹಲಿಯಲ್ಲಿರುವ ಡಿಕೆಶಿಗೆ ಸೇರಿದ ಸಫ್ದರ್ಜಂಗ್ ಮನೆಯಲ್ಲಿ ಗುರುವಾರವೂ ತಮ್ಮ ಹುಡುಕಾಟ ಮುಂದುವರಿಸಿದ್ದಾರೆ.

ಲಾಕರ್ ತೆರಯಲು ನಕಲಿ ಕೀ ಮೊರೆ
ದಾಳಿ ವೇಳೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ 5 ಲಾಕರ್ಗಳು ಪತ್ತೆಯಾಗಿದ್ದವು. ಇದರಲ್ಲಿ ಬುಧವಾರ ಎರಡು ಲಾಕರ್ಗಳನ್ನು ತೆರೆದು ಅದರಲ್ಲಿದ್ದ ವಸ್ತುಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇನ್ನುಳಿದ ಮೂರು ಲಾಕರ್ ತೆರೆಯಲು ಶಿವಕುಮಾರ್ ಸಹಕರಿಸದ ಕಾರಣ ಅಧಿಕಾರಿಗಳು ನಕಲಿ ಕೀಲಿಗಳನ್ನು ಬಳಸಿದ್ದಾರೆ. ಈ ಲಾಕರ್ ಓಪನ್ ಮಾಡಲು ನಕಲಿ ಕೀ ತಯಾರಿಸುವ ತಜ್ಞರನ್ನು ಕರೆತಂದು ಓಪನ್ ಮಾಡಿದ್ದಾರೆ ಎನ್ನಲಾಗಿದೆ.
Recommended Video


ಈಗಲ್ಟನ್ ರೆಸಾರ್ಟ್ಗೆ ಶಾಸಕ ಬಾಲಕೃಷ್ಣ
ಗುಜರಾತ್ ಶಾಸಕರು ವಾಸ್ತವ್ಯ ಹೂಡಿದ್ದ ಈಗಲ್ಟನ್ ರೆಸಾರ್ಟ್ ಗೆ ಗುರುವಾರ ಮಾಗಡಿಯ ಜೆಡಿಎಸ್ ಬಂಡಾಯ ಶಾಸಕ ಎಚ್.ಸಿ. ಬಾಲಕೃಷ್ಣ ಗುರುವಾರ ಭೇಟಿ ನೀಡಿದರು.
ಸಂಸದ ಡಿ.ಕೆ. ಸುರೇಶ್ ಅವರನ್ನು ರೆಸಾರ್ಟ್ ಒಳಗೆ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ ಎಂದು ಹೇಳಿದ ಬಾಲಕೃಷ್ಣ, "ರೆಸಾರ್ಟಿನಲ್ಲಿ ಏನೂ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ಗೊತ್ತಿದ್ದೂ ಹೆದರಿಸಲು ದಾಳಿ ನಡೆಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಇಡೀ ದೇಶದಲ್ಲೇ ಹೀರೊ ಮಾಡಿದ್ದಾರೆ,"' ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ-ಪರಮೇಶ್ವರ್ ಸುದೀರ್ಘ ಮಾತುಕತೆ
ತಮ್ಮ ಪಕ್ಷದ ಪ್ರಭಾವಿ ಮುಖಂಡ ಶಿವಕುಮಾರ್ ಅವರ ಮನೆಗಳ ಮೇಲೆ ಐಟಿ ದಾಳಿ ನಡೆದಿರುವ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಭೇಟಿಯಾಗಿ ಸುಧೀರ್ಘ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ, ಹಾಗೂ ರಾಜಕೀಯ ದುರುದ್ದೇಶದಿಂದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರ ಮೇಲೆ ಐ.ಟಿ. ದಾಳಿ ನಡೆಸಿರುವ ವಿಚಾರವಾಗಿ, ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರು ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆಜೆ ಜಾರ್ಜ್ ಭಾಗವಹಿಸಿದ್ದರು.

11 ಕಾಂಗ್ರೆಸ್ ಕಾರ್ಯಕರ್ತ ಮೇಲೆ ಕೇಸ್
ಡಿಕೆ ಶಿವಕುಮಾರ್ ಮನೆ ಹಾಗೂ ಕಚೇರಿ ಮೇಲೆ ಐಟಿ ದಾಳಿ ಖಂಡಿಸಿ ಮಂಗಳೂರಿನ ಅತ್ತಾವರ ಆದಾಯ ತೆರಿಗೆ ಕಚೇರಿಯ ಮೇಲೆ ಬುಧವಾರ ದಾಳಿ ನಡೆಸಿದ್ದ 11 ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪಾಂಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳ ದೂರಿನ ಮೇರೆ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications