ಅಂದು ಎಚ್ಡಿಕೆಯದ್ದು "ಅಣ್ತಮ್ಮ ಬಜೆಟ್" ಅಂದಿದ್ದ ಬಿಎಸ್ವೈ ಈಗ ಮಾಡುತ್ತಿರುವುದೇನು?
ಬೆಂಗಳೂರು, ಆ 15: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಭರಪೂರ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ 1,279 ಕೋಟಿ ರೂಪಾಯಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದು, ಇದು ಅಲ್ಲಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯವನ್ನು ಮಾರಾಟಕ್ಕೆ ಇಡಬೇಡಿ: ಬಿಎಸ್ವೈ ವಿರುದ್ದ ಎಚ್ಡಿಕೆ ಕೊಂಕು
ಶಿವಮೂಗ್ಗದಲ್ಲಿ ಕಿರು ವಿಮಾನ ನಿಲ್ದಾಣ, ವರದಾ ನದಿನೀರು ಯೋಜನೆ, ಕನ್ನಹಳ್ಳಿ ಘನತಾಜ್ಯ ಘಟಕಕ್ಕೆ ಜಮೀನು ಲೀಸ್.. ಹೀಗೆ ಹಲವು ಯೋಜನೆಗಳಿಗೆ, ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆಯನ್ನು ಪಡೆಯಲಾಗಿದೆ.
"2019-2020ರ ಬಜೆಟ್ ಅನ್ನು ನಾವು ವಿರೋಧ ಮಾಡುತ್ತಿದ್ದೇವೆ. ಕ್ರಾಂತಿಕಾರಿ ಬಜೆಟ್ ಅನ್ನು ಹಣಕಾಸು ಸಚಿವರೂ ಆಗಿರುವ ಸಿಎಂ ಕುಮಾರಸ್ವಾಮಿ ಮಂಡಿಸುತ್ತಾರೆಂದು ನಾವು ಭಾವಿಸಿದ್ದೆವು, ಅದು ಹುಸಿಯಾಗಿದೆ. ಇದೊಂದು ಬೋಗಸ್ ಬಜೆಟ್" ಎಂದು ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಹೇಳಿದ್ದರು.
ವಿರೋಧ ಪಕ್ಷಗಳು, ಸರಕಾರ ಮಂಡಿಸುವ ಬಜೆಟ್ ಅನ್ನು ಸ್ವಾಗತಿಸುವ ಪದ್ದತಿ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ತೀರಾ ಕಮ್ಮಿಯಿರುವುದು ತಿಳಿದೇ ಇದೆ. ಆದರೆ, 2018-19ರ ಬಜೆಟ್ ಬಗ್ಗೆ ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿ, "ಇದೊಂದು ಅಣ್ತಮ್ಮ ಬಜೆಟ್" ಎಂದು ಲೇವಡಿ ಮಾಡಿದ್ದರು.
"ಈ ಬಜೆಟ್ ಕೇವಲ ಮಂಡ್ಯ, ರಾಮನಗರ ಹಾಗೂ ಹಾಸನ ಜಲ್ಲೆಗಳಿಗೆ ಮಾತ್ರ ಮಂಡಿಸಲಾಗಿದೆ. ಕುಮಾರಸ್ವಾಮಿ ಕೇವಲ ಈ ಮೂರು ಜಿಲ್ಲೆಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಿದ್ದು, ಉಳಿದ ಜಿಲ್ಲೆಗಳನ್ನು ಕಡೆಗಣಿಸಿದ್ದಾರೆ".
ಕರ್ನಾಟಕ ಬಜೆಟ್ 2019 : ಯಡಿಯೂರಪ್ಪ ಹೇಳಿದ್ದೇನು?
"ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಭಾಗಗಳನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಬಹುಪಾಲು ಅನುದಾನವನ್ನು ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳಿಗೆ ನೀಡುವ ಮೂಲಕ ತಾರತಮ್ಯ ಮಾಡಿದ್ದಾರೆ. ಇದೊಂದು, ಅಣ್ತಮ್ಮ ಬಜೆಟ್" ಎಂದು ಯಡಿಯೂರಪ್ಪ ಟೀಕಿಸಿದ್ದರು.