ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?
Recommended Video
ಮೈಸೂರು, ಜನವರಿ 18 : ಸಿದ್ದರಾಮಯ್ಯ ಅವರ ನಡವಳಿಕೆಯಿಂದ, ತಿರಸ್ಕಾರದಿಂದ ಮುನಿಸಿಕೊಂಡು ವಿ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿ, ಭಾರತೀಯ ಜನತಾ ಪಕ್ಷ ಸೇರಿಕೊಂಡಾಗಿಂದ ಹಿಡಿದು ಉಪಚುನಾವಣೆಯ ಫಲಿತಾಂಶ ಮುಗಿಯುವವರೆಗೆ ನಂಜನಗೂಡು ಸುದ್ದಿಯ ಕೇಂದ್ರ ಬಿಂದುವಾಗಿದೆ.
ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸೋತಿದ್ದರೆ, ಅವರ ವಿರುದ್ಧ ಜೆಡಿಎಸ್ ತೊರೆದು ಕಾಂಗ್ರೆಸ್ ಟಿಕೆಟ್ ಪಡೆದು ಕಳಲೆ ಕೇಶವಮೂರ್ತಿ ಅವರು 21,334 ಮತಗಳ ಅಂತರದಿಂದ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದೆ ಜೆಡಿಎಸ್ ನಷ್ಟ ಅನುಭವಿಸಿತ್ತು.
ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?
ಇದೀಗ ಶ್ರೀಕಂಠೇಶ್ವರನ ನೆಲೆಯಾದ ನಂಜನಗೂಡು ಇದೀಗ ರಾಜಕೀಯ ಚಟುವಟಿಕೆಗಳ ಜೇನುಗೂಡಾಗಿದೆ. ಮೀಸಲು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಎಲ್ಲ ರಾಜಕೀಯ ಪಕ್ಷಗಳಲ್ಲಿ ಭಾರೀ ಪೈಪೋಟಿ ಆರಂಭವಾಗಿದೆ. ಐದು ವರ್ಷಕ್ಕೊಮ್ಮೆ ಬರುವ ಇಂಥ ಅವಕಾಶವನ್ನು ಬಿಟ್ಟುಕೊಡಲು ಯಾರಾದರೂ ಇಚ್ಛಿಸುತ್ತಾರಾ?
ಅವರಿವರಿಗ್ಯಾಕೆ ನಮಗೇ ಟಿಕೆಟ್ ನೀಡಿ
2017ರ ಏಪ್ರಿಲ್ 13ರಂದು ಉಪ ಚುನಾವಣೆಯಲ್ಲಿ ಸೋತ ದಿನವೇ ಶ್ರೀನಿವಾಸ್ ಪ್ರಸಾದ್ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದರು. ಹೀಗಾಗಿ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಲವಾರು ಟಿಕೆಟ್ ಆಕಾಂಕ್ಷಿಗಳು ಶ್ರೀನಿವಾಸ್ ಪ್ರಸಾದ್ ಮತ್ತೆ ಸ್ಪರ್ಧಿಸಬೇಕೆಂದು ಬಯಸುತ್ತಾರೆ. ಒಂದು ವೇಳೆ ಶ್ರೀನಿವಾಸ್ ಪ್ರಸಾದ್ ಸ್ಪರ್ಧಿಸದಿದ್ದರೆ ತಮಗೇ ಟಿಕೆಟ್ ನೀಡಬೇಕೆಂಬ ಮನವಿ ಮುಂದಿಟ್ಟಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹಲವಾರು
ಎಸ್.ಮಹದೇವಯ್ಯ, ಜಿಲ್ಲಾ ಪಂಚಾಯತ್ ಸದಸ್ಯ ಎಚ್.ಎಸ್. ದಯಾನಂದಮೂರ್ತಿ, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಪ್ರಬಲ ಟಿಕೆಟ್ ಆಕಾಂಕ್ಷಿಗಳು. ಮಹದೇವಯ್ಯ ಕಳೆದ ಉಪ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಅವರಿಗಾಗಿ ಪಕ್ಷದ ಟಿಕೆಟ್ ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಸೋತು ಮುಖಂಡರು ಸ್ವಲ್ಪ ನಿಷ್ಕ್ರಿಯರಾಗಿದ್ದಾಗ ಮುನ್ನುಗ್ಗಿ ಕಾರ್ಯಕರ್ತರನ್ನು ಹುರಿದುಂಬಿಸಿ ಸಂಘಟನೆಯಲ್ಲಿ ತೊಡಗಿದವರು ದಯಾನಂದಮೂರ್ತಿ.
ಕಾಂಗ್ರೆಸ್ ಸೇರುವರೆ ಎಆರ್ ಕೃಷ್ಣಮೂರ್ತಿ
ಜೆಡಿಎಸ್ ನಿಂದ ಬಿಜೆಪಿಗೆ ಬಂದಿರುವ ಮತ್ತೊಬ್ಬ ವಲಸಿಗ ಕೊಳ್ಳೆಗಾಲದ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಹೆಸರು ಬಿಜೆಪಿಯಲ್ಲಿ ಪ್ರಾರಂಭದಲ್ಲಿ ಕೇಳಿ ಬಂತು. ಆದರೆ, ಈಗ ಅವರು ಪಕ್ಷದಲ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕಾರಣಗಳೇನೇ ಇರಲಿ, ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಈ ನಡುವೆ, ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಬಿ. ಹರ್ಷವರ್ಧನ್ ಹೆಸರೂ ಕೇಳಿ ಬರುತ್ತಿದೆ.
ಜೆಡಿಎಸ್ ನಲ್ಲಿ ಟಿಕೆಟ್ಟಿಗಾಗಿ ಭಾರೀ ಕಾದಾಟ
ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಜೆಡಿಎಸ್ ಈಗ ಇದರ ಪರಿಣಾಮವನ್ನು ಎದುರಿಸುತ್ತಿದೆ. ಕಳಲೆ ಕೇಶವಮೂರ್ತಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ನಲುಗಿದೆ. ಮೈಸೂರಿನವರಾದ ಬೆಳವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಳವಾಡಿ ಶಿವಮೂರ್ತಿ, ಪಾಲಿಕೆಯ ಮಾಜಿ ಸದಸ್ಯ ಆರ್.ಸೋಮಸುಂದರ್ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿದ್ದ ಸೋಮಸುಂದರ್ ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಅವರೊಂದಿಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದವರು. ಕೇಶವಮೂರ್ತಿ ಅವರೊಂದಿಗೆ ಕಾಂಗ್ರೆಸ್ಗೆ ಸೇರಿದವರನ್ನು ಜೆಡಿಎಸ್ಗೆ ವಾಪಸ್ ಕರೆತರುವ ಪ್ರಯತ್ನಗಳು ನಡೆದಿವೆ.
ಹಲವು ಪ್ರಶ್ನೆಗಳಿಗೆ ಇನ್ನೂ ಸಿಗದ ಉತ್ತರ
ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಮತ್ತೆ ಈ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆಯೇ? ಈ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತೆಲ್ಲಿ ಸ್ಪರ್ಧಿಸುತ್ತಾರೆ? ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಮಂತ್ರಿ ವಿ.ಶ್ರೀನಿವಾಸ್ ಪ್ರಸಾದ್ ಮತ್ತೆ ಕಣಕ್ಕೆ ಧುಮುಕುವರೇ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.
ನಂಜನಗೂಡು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ
ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದ ಕಳಲೆ ಕೇಶವಮೂರ್ತಿ ಅವರಿಗೇ ಈ ಬಾರಿ ಮತ್ತೆ ಕಾಂಗ್ರೆಸ್ ಟಿಕೆಟ್ ಎಂದು ಸಿಎಂ ಸಿದ್ದರಾಮಯ್ಯ ನಂಜನಗೂಡಿನಲ್ಲಿ ಇತ್ತೀಚೆಗೆ ನಡೆದ ಸಾಧನಾ ಸಂಭ್ರಮದ ಸಮಾವೇಶದಲ್ಲಿ, ಪಕ್ಕದಲ್ಲಿ ಸಚಿವ ಡಾ.ಮಹದೇವಪ್ಪ ಅವರನ್ನು ಕೂರಿಸಿಕೊಂಡೇ ಘೋಷಿಸಿದ್ದಾರೆ. ಆದರೆ, ಈ ಸಮಾವೇಶದ ಮರುದಿನವೇ ಮಹದೇವಪ್ಪ ಬೆಂಬಲಿಗರು ಸಭೆ ಸೇರಿ ನಂಜನಗೂಡಿನಲ್ಲಿ ಮಹದೇವಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದು ಕಾಂಗ್ರೆಸ್ಸಿನ ಗುಂಪುಗಾರಿಕೆಗೆ ಕನ್ನಡಿ ಹಿಡಿದಿದೆ.