ಶಾಕಿಂಗ್ : 2019ರಲ್ಲಿ ಹಾಲಿ ಬಿಜೆಪಿ ಸಂಸದರನೇಕರು ಸೋಲ್ತಾರೆ!
ಬೆಂಗಳೂರು, ಜುಲೈ 14: ಲೋಕಸಭೆ ಚುನಾವಣೆ 2019ಕ್ಕಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ತಯಾರಿ ನಡೆಸುತ್ತಿದೆ. ಕರ್ನಾಟಕದಿಂದ ಈ ಬಾರಿ ಹೆಚ್ಚು ಸಂಸದರನ್ನು ಆರಿಸಿ ಕಳಿಸಬೇಕು ಎಂದು ಕರ್ನಾಟಕ ಬಿಜೆಪಿ ಘಟಕ ಪಣತೊಟ್ಟಿದೆ. ಅದರಲ್ಲೂ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೆಳಗಿಳಿದ ಬಳಿಕ ಬಿಜೆಪಿಯ ತಂತ್ರಗಾರಿಕೆ ಈ ಬಾರಿ ವಿಭಿನ್ನವಾಗಿರಬಹುದು ನಿರೀಕ್ಷಿಸಲಾಗಿದೆ.
ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಷ್ಟೇ ಅಲ್ಲ, ಗೆಲ್ಲಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಪಡಿಸಿಕೊಳ್ಳುವ ಸವಾಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೊತ್ತುಕೊಂಡಿದ್ದಾರೆ. ಆದರೆ, ಹಾಲಿ ಸಂಸದರ ಪೈಕಿ ಅನೇಕರು 2019ರ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎಂದು ಆಂತರಿಕ ವರದಿ ಬಂದಿದೆ.
ಬಿಜೆಪಿಯ ನಂಬುಗೆಯ ಮೊಬೈಲ್ ಅಪ್ಲಿಕೇಷನ್ ನಮೋ ಆಪ್ ಮೂಲಕ ಬಂದಿರುವ ಪ್ರತಿಕ್ರಿಯೆಗಳನ್ನು ಆಧಾರಿಸಿ ವರದಿ ತಯಾರಿಸಲಾಗಿದೆ. ಜನಪ್ರತಿನಿಧಿಗಳ ಸಾಧನೆ, ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದಲ್ಲದೆ, ಸಾಮೂಹಿಕವಾಗಿ ಅಭಿಪ್ರಾಯ ಸಂಗ್ರಹ ಮಾಡಲು ಕೂಡಾ ಬಿಜೆಪಿ ಮುಂದಾಗಿದೆ.
ಲಭ್ಯ ಮಾಹಿತಿ ಪ್ರಕಾರ, ಸರಿ ಸುಮಾರು ಶೇ 10 ರಿಂದ 15ರಷ್ಟು ಸಂಸದರಿಗೆ ಈ ಬಾರಿ ಸ್ಪರ್ಧಿಸಲು ಟಿಕೆಟ್ ಸಿಗುವುದೇ ಕಷ್ಟ ಎಂದು ಒನ್ಇಂಡಿಯಾಕ್ಕೆ ತಿಳಿದು ಬಂದಿದೆ. ಟಿಕೆಟ್ ವಂಚಿತರ ಪಟ್ಟಿ ದೊಡ್ಡದಾಗಬಹುದು.

ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಸಂದರ್ಭದಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಯಶ ಕಂಡಿದ್ದರು. ಇದೇ ಪ್ರಕ್ರಿಯೆ ಈಗ ಲೋಕಸಭೆ ಚುನಾವಣೆಯಲ್ಲೂ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ. ಇದೇ ಟ್ರೆಂಡ್ ಮುಂದುವರೆಸಿದರೆ, ಯುವ ಅಭ್ಯರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಬಿಎಸ್ ಯಡಿಯೂರಪ್ಪ, ಬಿ ಶ್ರೀರಾಮುಲು ಅವರು ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧಿಸದೆ ಶಾಸಕರಾಗಿ ಉಳಿಯಲಿದ್ದಾರೆ. ಹೀಗಾಗಿ, ಶಿವಮೊಗ್ಗ ಹಾಗೂ ಬಳ್ಳಾರಿಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಇದ್ದೆ ಇದೆ.

ವಯೋಮಿತಿ ಕಾರಣ
ವಯೋಮಿತಿ ಕಾರಣ: 75 ವರ್ಷಕ್ಕೂ ಅಧಿಕ ವಯಸ್ಸಿನ ಬಿಜೆಪಿ ಮುಖಂಡರಿಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ. ಇತ್ತೀಚೆಗೆ ಹರ್ಯಾಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಇಡೀ ದೇಶದಲ್ಲಿ 100ಕ್ಕೂ ಹೆಸರುಗಳು ಈ ಕೆಟಗೆರಿಗೆ ಸೇರಲಿದ್ದು, ಯಾರಿಗೂ ಟಿಕೆಟ್ ನೀಡದಿರಲು ಹೈಕಮಾಂಡ್ ತೀರ್ಮಾನಿಸಿದೆ.
ಉತ್ತರಪ್ರದೇಶ, ಗುಜರಾತ್, ಕರ್ನಾಟಕ, ಬಿಹಾರ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಅನೇಕ ಹಿರಿಯ ಬಿಜೆಪಿ ಮುಖಂಡರು ಮುಂದಿನ ಚುನಾವಣೆ ಸ್ಪರ್ಧಿಸುವ ಕನಸು ಕಾಣದಿರುವುದೇ ಒಳ್ಳೆಯದು ಎಂಬ ಅಭಿಪ್ರಾಯ ಬಂದಿದೆ.

ಮತ್ತೊಂದು ಅವಕಾಶ
ಟಿಕೆಟ್ ಬಗ್ಗೆ ಸಂಶಯವುಳ್ಳವರಿಗೆ, ಕಳಪೆ ಸಾಧನೆ ತೋರಿರುವ ಸಂಸದರಿಗೆ ಜನಮನ ಗೆಲ್ಲಲು ಇನ್ನು ಕೆಲ ತಿಂಗಳುಗಳ ಕಾಲ ಅವಕಾಶ ನೀಡಲಾಗಿದೆ. ಮತ್ತೊಂದು ಸುತ್ತಿನ ಆಂತರಿಕ ಸಮೀಕ್ಷೆ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಬಳಿಕ ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತದೆ.

75 ವರ್ಷಗಳ ಮಿತಿಯಲ್ಲಿ ಯಾವುದೆ ಸಡಿಲಿಕೆ ಇಲ್ಲ
ಆದರೆ, 75 ವರ್ಷಗಳ ಮಿತಿಯಲ್ಲಿ ಯಾವುದೆ ಸಡಿಲಿಕೆ ಇಲ್ಲ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕರಿಯಾ ಮುಂಡ, ಶಾಂತಕುಮಾರ್, ಹುಕುಮ್ ದೇವ್ ನಾರಾಯಣ್, ಕಲ್ ರಾಜ್ ಮಿಶ್ರಾ, ಲೀಲಾ ಧಾರ್ಬಾಹಿ ವಘೇಲಾ, ಭುವನ್ ಖಂಡುರಿ, ರಾಮ್ ತಹಾಲ್ ಚೌಧುರಿ ಮುಂತಾದವರು ಸೇರುತ್ತಾರೆ.












Click it and Unblock the Notifications