BPL, APL Ration Cards: ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ಕುರಿತು ಆಹಾರ ಸಚಿವರಿಂದ ಮಹತ್ವದ ಮಾಹಿತಿ
BPL And APL Ration Cards: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಬರೀ ರೇಷನ್ ಪಡೆಯಲು ಅಷ್ಟೇ ಅಲ್ಲದೆ, ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಾಗಿದೆ. ಇತ್ತೀಚೆಗಷ್ಟೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಇದೀಗ ಈ ಬಗ್ಗೆ ಆಹಾರ ಸಚಿವ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಆಹಾರ ಇಲಾಖೆ ಮುಂದಾಗಿದೆ. ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಅನುಮತಿ ನೀಡುವ ಕುರಿತು ಸಚಿವ ಸಂಪುಟದ ಅನುಮೋದನೆಗೆ ಪ್ರಸ್ತಾವ ಮಂಡಿಸಲು ಕ್ರಮ ತೆಗೆದುಕೊಳ್ಳಿವಂತೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಹೊಸ ಪಡಿತರ ಚೀಟಿ ಕೋರಿ 2023-24ರಲ್ಲಿ 2,95,986 ಮತ್ತು 2024-25ರಲ್ಲಿ 97,464 ಸೇರಿ ಒಟ್ಟು 3,93,450 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 3,05,325 ಅರ್ಹ ಅರ್ಜಿಗಳಿದ್ದವು. ಅವುಗಳಲ್ಲಿ ಇ-ಶ್ರಮ್ ನೋಂದಾಯಿತ 8,766 ಮತ್ತು ಅರಣ್ಯವಾಸಿಗಳಿಗೆ ವಿತರಿಸಿದ 573 ಕಾರ್ಡ್ ಸೇರಿ ಒಟ್ಟು 2,04,760 ಅರ್ಜಿಗಳಿಗೆ ಇಲಾಖೆಯು ಹೊಸ ಕಾರ್ಡ್ಗಳನ್ನು ವಿತರಣೆ ಮಾಡಿದೆ. 88,125 ಅರ್ಜಿಗಳು ತಿರಸ್ಕೃತಗೊಂಡಿವೆ. ವಿವಿಧ ಕಾರಣಗಳಿಂದ 1,00,565 ಅರ್ಜಿಗಳಿಗೆ ಕಾರ್ಡ್ ವಿತರಣೆ ಬಾಕಿಯಿದೆ.
ಕೇಂದ್ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಪ್ರಕಾರ, ರಾಜ್ಯದಲ್ಲಿ ಅತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಕಾರ್ಡ್ ಸೇರಿ ಫಲಾನುಭವಿಗಳ ಮಿತಿಯನ್ನು 4.02 ಕೋಟಿಗೆ ನಿಗದಿಪಡಿಸಿದೆ. ನಗರ ಪ್ರದೇಶದಲ್ಲಿ ಶೇಕಡ 50 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇಕಡ 75ರಷ್ಟು ಎಎವೈ ಮತ್ತು ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಕಾಯ್ದೆಯಡಿ ಅವಕಾಶವಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿ ಶೇಕಡ 65.96ರಷ್ಟು ಬಿಪಿಎಲ್ ಫಲಾನುಭವಿಗಳು ಇದ್ದಾರೆ.
ಕಾರ್ಡ್ಗಳಲ್ಲಿ ಹೆಸರು ಇರುವ ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರವು ಎನ್ಎಫ್ಎಸ್ಡಿನಡಿ ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಿಸುತ್ತಿದ್ದು, ಇದಕ್ಕಾಗಿ ಕೆ.ಜಿಗೆ 22.50 ರೂಪಾಯಿ ದರದಲ್ಲಿ ಆಹಾರ ನಿಗಮದಿಂದ ಖರೀದಿ ಮಾಡಿ ವಿತರಿಸುತ್ತಿದೆ. ಅಲ್ಲದೆ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 17,48,989 ಬಿಪಿಎಲ್ ಕಾರ್ಡ್ಗಳ 49,67,187 ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸುತ್ತಿದ್ದು, ಇದರ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ.
ಹೊಸ ಪಡಿತರ ಚೀಟಿ ವಿತರಣೆ ಮಾಡಲು ಅರ್ಜಿ ಆಹ್ವಾನಿಸಲು ಷರತ್ತು ವಿಧಿಸಿ ಆರ್ಥಿಕ ಇಲಾಖೆಯು 2023ರ ಸೆಪ್ಟೆಂಬರ್ 16ರಂದು ಆದೇಶ ಹೊರಡಿಸಿತ್ತು. ಅಲ್ಲದೆ, ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ರದ್ದು ಮಾಡಿದ ಕಾರ್ಡ್ಗಳ ಸಂಖ್ಯೆಗೆ ಅನುಗುಣವಾಗಿ ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡುವಂತೆ ಸೂಚನೆ ನೀಡಿತ್ತು.
ಅದರಂತೆಯೇ 2024-25ನೇ ಸಾಲಿನಲ್ಲಿ 3,81,983 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆಹಚ್ಚಿ ಬಿಪಿಎಲ್ ಕಾರ್ಡ್ಗಳಿಗಾಗಿ ಪರಿವರ್ತಿಸಲಾಗಿತ್ತು. ಹೀಗೆ ವರ್ಗಾವಣೆಯಾದ ಸಂಖ್ಯೆಗೆ ಅನುಗುಣವಾಗಿ ಹೊಸ ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ.
ಆದರೆ, ಕಾರ್ಡ್ ರದ್ದತಿಗೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾದ ಕಾರಣ ಆದಾಯ ತೆರಿಗೆ ಪಾವತಿದಾರರಾದ 55,713 ಹಾಗೂ ಸರ್ಕಾರಿ ನೌಕರರು ಹೊಂದಿದ್ದ 2,300 ಬಿಪಿಎಲ್ ಕಾರ್ಡ್ಗಳನ್ನು ಹೊರತುಪಡಿಸಿ, ಉಳಿದಂತೆ ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಗೊಂಡಿದ್ದ 3,23,970 ಕಾರ್ಡ್ಗಳನ್ನು ಮತ್ತೆ ಬಿಪಿಎಲ್ ಕಾರ್ಡ್ಗಳಾಗಿ ಆಹಾರ ಇಲಾಖೆ ಪರಿವರ್ತಿಸಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೊಸ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಿಲ್ಲ. ಹೊಸದಾಗಿ ಪಡಿತರ ಚೀಟಿ ವಿತರಿಸಲು ಅರ್ಜಿ ಆಹ್ವಾನಿಸಲು ವಿಧಾನಮಂಡಲದ ಕಳೆದ ಎರಡು-ಮೂರು ಅಧಿವೇಶನಗಳಲ್ಲಿ ಸಚಿವರು, ಶಾಸಕರು ಒತ್ತಾಯಿಸಿದ್ದರು. ಸಾರ್ವಜನಿಕರಿಂದಲೂ ಒತ್ತಡ ಹೆಚ್ಚಿದೆ.
ಆದ್ದರಿಂದ ಆರ್ಥಿಕ ಇಲಾಖೆಯು ವಿಧಿಸಿರುವ ಷರತ್ತುಗಳನ್ನು ಸಡಿಸಿಲಿ ಬಿಪಿಎಲ್, ಎಪಿಎಲ್ ಪಡಿತರ ಚೀಟಿ ನೀಡಲು ಆಹ್ವಾನಿಸಲು ಸಚಿವ ಸಂಪುಟ ಸಭೆಯ ಅನುಮೋದನೆ ಪಡೆಯಲು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಕಾರ್ಯದರ್ಶಿಗೆ ಬರೆದ ಟಿಪ್ಪಣಿಯಲ್ಲಿ ಮುನಿಯಪ್ಪ ಉಲ್ಲೇಖಿಸಿದ್ದಾರೆ.












Click it and Unblock the Notifications