7th Pay Commission; ಜುಲೈ 15ರ ಮೇಲೆ ಸರ್ಕಾರಿ ನೌಕರರ ಭರವಸೆ ಏಕೆ?
ಬೆಂಗಳೂರು, ಜುಲೈ 06: ಕರ್ನಾಟಕ ಸರ್ಕಾರಿ ನೌಕರ ಪ್ರಮುಖ ಬೇಡಿಕೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯ ಶಿಫಾರಸು ಅನುಷ್ಠಾನ. ಆದರೆ ಕಾಂಗ್ರೆಸ್ ಸರ್ಕಾರ ಈ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುವ ಮೂಲಕ ನೌಕರರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುತ್ತಿಲ್ಲ.
2024ರ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 244 ಪುಟಗಳ ವರದಿಯನ್ನು ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದೆ. ವರದಿ ಸ್ವೀಕಾರ ಮಾಡಿದ ಬಳಿಕ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಸಿದ್ದರಾಮಯ್ಯ ಸಹ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಿ, ಅಭಿಪ್ರಾಯ ಕೇಳಿದ್ದಾರೆ.

ಈಗ ಎಲ್ಲಾ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡು ಮೂರು ಸಚಿವ ಸಂಪುಟ ಸಭೆಗಳು ಮುಗಿದಿವೆ. 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಚರ್ಚೆ ನಡೆದಿದೆ. ಆದರೆ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಸರ್ಕಾರಿ ನೌಕರರಿಗೆ, ನಿವೃತ್ತರಿಗೆ ನಿರಾಸೆ ತಂದಿದೆ. ಸರ್ಕಾರದ ವಿರುದ್ಧ ಹೋರಾಟ ಆರಂಭಿಸಬೇಕೆ? ಎಂದು ನೌಕರರು ಚಿಂತಿಸುವಂತಾಗಿದೆ.
ಜುಲೈ 15ರ ಮೇಲೆ ನಿರೀಕ್ಷೆ: ಈಗ ಸರ್ಕಾರಿ ನೌಕರರು ಜುಲೈ 15ರ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯ ಸೂಚನಾ ಪತ್ರ ಈಗಾಗಲೇ ಹೊರಡಿಸಲಾಗಿದೆ. ಈ ಕುರಿತು ಆರ್. ಚಂದ್ರಶೇಖರ್, ಸರ್ಕಾರದ ಜಂಟಿ ಕಾರ್ಯದರ್ಶಿ (ಸಚಿವ ಸಂಪುಟ) ಮಾಹಿತಿ ನೀಡಿದ್ದಾರೆ.
ದಿನಾಂಕ 15/07/2024, ಸೋಮವಾರ ಸಂಜೆ 6 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಮೂರು ಸಂಪುಟ ಸಭೆಯಲ್ಲಿಯೂ ರಾಜ್ಯ 7ನೇ ವೇತನ ಆಯೋಗ ವರದಿಯನ್ನು ಜಾರಿಗೊಳಿಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಸಭೆಯಲ್ಲಿ ಈ ಕುರಿತು ಸಿದ್ದರಾಮಯ್ಯ ಸಚಿವರ ಮೌಖಿಕ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡಿರುವ ರಾಜ್ಯ ಸರ್ಕಾರಿ ನೌಕರರು ಜುಲೈ 29ರಿಂದ ಮುಷ್ಕರ ಆರಂಭಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಗುಪ್ತಚರ ಇಲಾಖೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ ಇದೆ. ಆದ್ದರಿಂದ ನೌಕರರ ನಡೆ ಬಗ್ಗೆ ಅವರಿಗೆ ಸೂಚನೆ ಸುಲಭವಾಗಿ ಸಿಗುತ್ತದೆ. ಜುಲೈ 15ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅವರು ವರದಿ ಅನುಷ್ಠಾನದ ಕುರಿತು ತೀರ್ಮಾನವನ್ನು ಕೈಗೊಳ್ಳಬಹುದು, ಇಲ್ಲವೇ ನೌಕರರಿಗೆ ಯಾವುದೇ ಭರವಸೆ ನೀಡಬಹುದು ಎಂದು ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಮುಂದಿನ ಕಾರ್ಯತಂತ್ರದ ಕುರಿತು ಚರ್ಚೆಗಳನ್ನು ಆರಂಭಿಸಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 7ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕು ಎಂದು ಬೇಡಿಕೆಯನ್ನು ಮುಂದಿಟ್ಟಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ನೀಡಿದ್ದ ಭರವಸೆ ಅನುಷ್ಠಾನಗೊಳ್ಳುತ್ತಿಲ್ಲ. ಈ ನಡುವೆ ಜುಲೈ 7ರಂದು ನೌಕರರ ಸಂಘದ ಕಾರ್ಯಕಾರಣಿ ಸಭೆ ಕರೆದಿದ್ದು, ಈ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
5 ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಇದರ ನಡುವೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿದರೆ ವೇತನ, ಭತ್ಯೆ, ಪಿಂಚಣಿ ಎಲ್ಲವೂ ಹೆಚ್ಚಾಗಲಿದೆ. ವರದಿ ಶಿಫಾರಸಿನಂತೆ ಸರ್ಕಾರಿ ಉದ್ಯೋಗಿಗಳ ಮೂಲ ವೇತನ ಹೆಚ್ಚಳವಾದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17,440 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸರ್ಕಾರ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.












Click it and Unblock the Notifications