Karnataka Rains: ರಾಜ್ಯದಲ್ಲಿ ಮುಂದಿನ 5 ದಿನ ಆಲಿಕಲ್ಲು ಸಹಿತ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 01: ಯುಗಾದಿಯ ಹೊಸ ವರ್ಷವು ಮಳೆಯೊಂದಿಗೆ ಆರಂಭವಾಗಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಸಹಿತ ಭರ್ಜರಿ ಮಳೆ ಬೀಳಲಿದೆ. ಇಂದಿನಿಂದ ಏಪ್ರಿಲ್ 5 ರೊಳಗೆ ವ್ಯಾಪಕ ಮಳೆ ಆಗುವ ಜೊತೆಗೆ ಒಂದಷ್ಟು ಪ್ರದೇಶದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.
ರಾಜ್ಯದಾದ್ಯಂತ ಏಪ್ರಿಲ್ 1 ರಿಂದ ಏಪ್ರಿಲ್ 4 ರವರೆಗೆ ಮೋಡ ಕವಿದ ವಾತಾವರಣ ಸಹಿತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಪೂರ್ವ ಮುಂಗಾರು ಮಳೆ ಅಬ್ಬರಿಲಿದೆ. ಗಾಳಿ ವೇಗ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ತಲುಪುವ ಸಾದ್ಯತೆ ಇದೆ. ಈ ಮಳೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣದಿಂದ ಜೋರು ಮಳೆ ಆಗುವ ಲಕ್ಷಣ ಇವೆ.

ಈಗಾಗಲೇ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಒಂದಷ್ಟು ಪ್ರದೇಶಗಳ ಪ್ರದೇಶಗಳು ಗುಡುಗು, ಮಿಂಚು ಸಹಿತ ಸಾಧಾರಣ ಮಳೆ ಕಂಡಿವೆ. ಮುಂದಿನ 05 ದಿನವೂ ಈ ಭಾಗದಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಿಂದ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಲ್ಲಿ ಮಳೆ ಹೆಚ್ಚು ಸಕ್ರಿಯವಾಗಿರಲಿದೆ ಎನ್ನಲಾಗಿದೆ.
ಇಲ್ಲಿ ಆಲಿಕಲ್ಲು ಮಳೆ ಮುನ್ಸೂಚನೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಹಾವೇರಿ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 3 ರವರೆಗೆ ಆಲಿಕಲ್ಲು ಮಳೆ ಆಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ವಿಶೇಷವಾಗಿ ಚಾಮರಾಜನಗರ, ಕೊಡಗು, ಹಾಸನ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ದಾವಣಗೆರೆ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್ 03 ರಂದು ಅಲ್ಲಲ್ಲಿ ಆಲಿಕಲ್ಲು ಮಳೆಯಾಗಬಹುದೆಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಈ ಮಳೆ ಬೀಳುವ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ, ಮಬ್ಬು ಕವಿದಿರಲಿದೆ. ತಂಪು ಗಾಳಿ ಬೀಸಲಿದೆ. ಉಳಿದಂತೆ ರಾಜ್ಯದ ಇತರ ಕಡೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ. ರಾಜ್ಯದ ಗರಿಷ್ಠ ತಾಪಮಾನ 33 ರಿಂದ 38 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮುಂದಿನ 5 ದಿನಗಳ #ಹವಾಮಾನ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD)
— Karnataka State Natural Disaster Monitoring Centre (@KarnatakaSNDMC) April 1, 2025
ರಾಜ್ಯದಾದ್ಯಂತ ಏಪ್ರಿಲ್ 1 ರಿಂದ ಏಪ್ರಿಲ್ 4 ರವರೆಗೆ ಮೋಡ ಕವಿದ ವಾತಾವರಣದೊಂದಿಗೆ, ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪುವ ಸಾದ್ಯತೆಯಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ pic.twitter.com/KtpfLIRhqJ
ದಾಖಲೆಯ ತಾಪಮಾನ, ಒಣಹವೆ ಮುನ್ಸೂಚನೆ
ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಖಲೆಯ ತಾಪಮಾನ ಕಂಡು ಬಂದಿದೆ. ಉಳಿದಂತೆ ರಾಜ್ಯದ ವಿಜಯಪುರದಲ್ಲಿ 38, ಗದಗ 37, ಬಾಗಲಕೋಟೆ 37, ಬೀದರ್ 37, ಚಿತ್ರದುರ್ಗ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ಹಾವೇರಿ, ಕೊಪ್ಪಳ, ಬೆಳಗಾವಿ ಏರ್ಪೋರ್ಟ್ ಮತ್ತು ದಾವಣಗೆರೆಯಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಉಂಟಾಗಿದೆ. ರಾಜ್ಯಾದ್ಯಂತ ಭಾನುವಾರದಿಂದ ಸೋಮವಾರದವರೆಗೆ ಒಣಹವೆ ಕಂಡು ಬಂದಿದೆ. ಇಂದಿನಿಂದ ಮುಂದಿನ ಐದು ದಿನಗಳ ಕಾಲ ಅಲ್ಲಲ್ಲಿ ಮಳೆ ಸಕ್ರಿಯವಾಗಿರಲಿದೆ.
ಕೊಮೆರಿಯನ್ ಪ್ರದೇಶ ಹಾಗೂ ಲಕ್ಷದ್ವೀಪದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ಕಾರಣದಿಂದಲೇ ಕರ್ನಾಟಕ ಸೇರಿದಂತೆ ವಿವಿಧೆಡೆ ಭಾರೀ ಮಳೆ ಅಬ್ಬರಿಸುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಳೆ ಹೀಗೆ ಮುಂದುವರಿಯಲಿದೆ. ಹವಾಮಾನ ವೈಪರಿತ್ಯ ತೀವ್ರಗೊಂಡರೆ ಇನ್ನಷ್ಟು ಮಳೆ ಬಹುದು. ಈಗಾಗಲೇ ಬೆಂಗಳೂರು, ಹಾವೇರಿ, ಕೋಲಾರ, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಮಳೆ ಸುರಿದಿದೆ.












Click it and Unblock the Notifications