Karnataka Rains: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚುರುಕುಕೊಂಡ ಪೂರ್ವ ಮುಂಗಾರು ಮಳೆ- ಹಲವೆಡೆ ಯೆಲ್ಲೋ ಅಲರ್ಟ್
ಬೆಂಗಳೂರು ಏಪ್ರಿಲ್ 20: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಳೆದ ಕೆಲ ದಿನಗಳಿಂದ ಸಂಜೆ ವೇಳೆ ಜಿಟಿ ಜಿಟಿ ಮಳೆಯಾಗುತ್ತಿದೆ. ಈ ಬಾರಿ ಪೂರ್ವ ಮುಂಗಾರು ಮಳೆ ಸರಾಸರಿಗಿಂತ ಹೆಚ್ಚಾಗಿರಲಿದ್ದು ಮೇ ತಿಂಗಳಿನಲ್ಲಿ ವರುಣ ಮತ್ತಷ್ಟು ಅರ್ಭಟಿಸಲಿದ್ದಾನೆ. ಅಲ್ಲದೆ ಇಂದಿನಿಂದ (ಏಪ್ರಿಲ್ 20) ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಬಿಟ್ಟು ಬಿಡದೆ ಸಂಜೆ ವೇಳೆ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಸಿಟಿ ತಂಪಾಗಿದೆ. ಆದರೂ ಬೆಳಗ್ಗೆ 9 ಗಂಟೆಯ ನಂತರದಿಂದ ಮಧ್ಯಾಹ್ನದವರೆಗೂ ಬಿಸಿಲಿನ ತಾಪಮಾನ ಹೆಚ್ಚಾಗಿ ಜನರನ್ನು ಹೈರಾಣಾಗಿಸುತ್ತಿದೆ. ಮಧ್ಯಾಹ್ನದ ಬಳಿಕ ಕಪ್ಪು ಕಾರ್ಮೋಡ ಆವರಿಸಿ ಮಳೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಇದೇ ವಾತಾವರಣ ಮುಂದುವರೆದಿದೆ.

ಇನ್ನೂ ಕಳೆದ ದಿನ (ಏಪ್ರಿಲ್ 19) ನಗರದ ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಕೋರಮಂಗಲ, ಮೈಸೂರು ರಸ್ತೆ, ಗಾಂಧಿ ಬಜಾರ್ ಮತ್ತಿತರೆಡೆ ಸಾಧಾರಣ ಮಳೆಯಾಗಿದೆ. ಇಂದೂ ಕೂಡ ನಗರದಲ್ಲಿ ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.
ಬೆಂಗಳೂರಿನಲ್ಲಿಂದು (ಏಪ್ರಿಲ್ 20) ಮೋಡ ಕವಿದ ವಾತಾವರಣ ಇರಲಿದ್ದು ಪ್ರತಿ ಗಂಟೆಗೆ 30 ರಿಂದ 40ಕಿಮಿ ವೇಗದ ಗಾಳಿ ಬೀಸಲಿದೆ. ಜೊತೆಗೆ ತಾಪಮಾನ 33 ಮತ್ತು 22 ಡಿ.ಸೆ ಇರಲಿದ್ದು ಗಾಳಿಯೊಂದಿಗೆ ಗುಡುಗು ಸಹಿತ 25 ರಿಂದ 50 ಮಿಮಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಸೂಚನೆ ನೀಡಿದೆ. ಹಾಗಾದರೆ ರಾಜ್ಯದ ಯಾವ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ಈಗ ತಿಳಿಯೋಣ.

ಕರ್ನಾಟಕದಲ್ಲಿಂದು ಎಲ್ಲೆಲ್ಲಿ ಮಳೆ?
ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಇನ್ನಷ್ಟು ದಿನ ಪೂರ್ವ ಮುಂಗಾರು ಮಳೆ ಜೋರಾಗಿರಲಿದೆ ಎಂದು ಐಎಂಡಿ ತಿಳಿಸಿದೆ. ಇದರಿಂದಾಗಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವೆಡೆ ಇಂದು ಗಾಳಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಲಿದೆ.
ಅಲ್ಲದೆ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಬಳ್ಳಾರಿ, ಚಿತ್ರದುರ್ಗದಲ್ಲಿ ಇಂದು (ಏಪ್ರಿಲ್ 20) ಆಲಿಕಲ್ಲಿ ಮಳೆ ಬೀಳುವ ಸೂಚನೆ ಇದೆ.
ಇನ್ನೂ ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್, ಹಾವೇರಿಯ ಆಯ್ದ ಸ್ಥಳಗಳಲ್ಲಿ ಇಂದು ಮತ್ತು ನಾಳೆ ಮಳೆ ಬೀಳಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ. ಜೊತೆಗೆ ದಕ್ಷಿಣ ಕರ್ನಾಟಕ, ಕರಾವಳಿಯ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಂದಿನಂತೆ ಮಳೆ ಮುಂದುವರೆಯಲಿದೆ.
ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದ್ದು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕಿತ್ತಾಳೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಬೆಂಗಳೂರು, ಉಡುಪಿ, ಧಾರವಾಡ, ಹಾಸನಕ್ಕೆ ಹಳದಿ ಎಚ್ಚರಿಕೆ ಘೋಷಣೆ ಮಾಡಲಾಗಿದೆ. ಜೊತೆಗೆ ನಾಳೆ (ಏಪ್ರಿಲ್ 21) ಉತ್ತರ ಕರ್ನಾಟಕದ ಗದಗ, ಧಾರವಾಡ, ಬಾಗಲಕೋಟೆಯಲ್ಲಿ ಮಳೆಯಾಗಲಿದ್ದು, ದಕ್ಷಿಣ ಕರ್ನಾಟಕದ ಶಿವಮೊಗ್ಗ, ಮಂಡ್ಯ, ಮೈಸೂರಿನಲ್ಲಿ ಗುಡುಗು ಮಿಂಚಿನೊಂದಿಗೆ ಭಾರೀ ಮಳೆಯಾಗಲಿದೆ.












Click it and Unblock the Notifications